ಆರೋಗ್ಯ ಇಲಾಖೆ, ಪಂಚಾಯತ್ ಅಧಿಕಾರಿಗಳ ಭೇಟಿ,ಪರಿಶೀಲನೆ
ಪುತ್ತೂರು: ಎಲ್ಲಿ ನೋಡಿದರು ನೊಣಗಳೇ ನೊಣಗಳು, ರಾಶಿ ರಾಶಿ ನೊಣಗಳು…ಹೌದು ಇದು ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂಡೆಸಾಗು, ಮಜ್ಜಾರಡ್ಕ, ಗೊಳ್ತಿಲ ಪರಿಸರದಲ್ಲಿ ಮನೆಗಳ ತುಂಬಾ ನೊಣಗಳೇ ತುಂಬಿಕೊಂಡಿದ್ದು ಜನರು ಭಯಭೀತರಾಗಿದ್ದಾರೆ. ಪಾತ್ರೆ, ಪಗಡಿಗಳ ಮೇಲೆ ರಾಶಿ ರಾಶಿಯಾಗಿ ಕುಳಿತುಕೊಳ್ಳುವ ನೊಣಗಳಿಂದ ಒಂದು ಕಡೆಯಲ್ಲಿ ರೋಗಭೀತಿಯಾದರೆ ಇನ್ನೊಂದು ಕಡೆ ಈ ನೊಣಗಳನ್ನು ಓಡಿಸುವುದೇ ಸವಾಲಾಗಿ ಬಿಟ್ಟಿದೆ. ನೊಣಗಳು ಕಂಡು ಬಂದಿರುವ ಪ್ರದೇಶಗಳಿಗೆ ಆರೋಗ್ಯ ಇಲಾಖೆ ಮತ್ತು ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಕೋಳಿ ಫಾರಂಗಳ ಸರಿಯಾದ ನಿರ್ವಹಣೆ ಇಲ್ಲದೆ ನೊಣಗಳ ಉತ್ಪತ್ತಿ …?
ರಾಶಿ ರಾಶಿ ನೊಣಗಳು ಉತ್ಪತ್ತಿಯಾಗಲು ಕೋಳಿ ಸಾಕಾಣಿಕ ಕೇಂದ್ರಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇರುವುದು ಮತ್ತು ಕೋಳಿಗಳಿಗೆ ಬಳಸುವ ಒಂದು ರೀತಿಯ ಆಹಾರವೇ ಕಾರಣ ಎನ್ನಲಾಗಿದೆ. ಇದರಿಂದಾಗಿ ಒಂದು ರೀತಿಯ ದುರ್ವಾಸನೆ ಹಾಗೂ ನೊಣಗಳು ಹೆಚ್ಚುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೋಳಿ ಫಾರಂ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವುದು ಕೂಡ ಅತೀ ಅವಶ್ಯಕವಾಗಿದ್ದು ಕೋಳಿ ಫಾರಂಗಳಲ್ಲಿ ಉತ್ಪತ್ತಿಯಾಗುವ ನೊಣಗಳ ನಿಯಂತ್ರಣಕ್ಕೆ ಔಷಧಿ ಕೂಡ ಲಭ್ಯವಿದ್ದು ಇದನ್ನು ಸಿಂಪಡಣೆ ಮಾಡಿದರೆ ನೊಣಗಳ ಕಾಟ ತಪ್ಪುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಅಧಿಕಾರಿಗಳ ಭೇಟಿ, ಪರಿಶೀಲನೆ
ನೊಣಗಳ ಹಾವಳಿ ಜಾಸ್ತಿ ಇರುವ ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂಡೆಸಾಗು, ಮಜ್ಜಾರಡ್ಕ, ಗೋಳ್ತಿಲ ಪರಿಸರಗಳಿಗೆ ಕೆದಂಬಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ,ಅರಿಯಡ್ಕ ಪಂಚಾಯತ್ ಪಿಡಿಒ ಸುನೀಲ್ ಎಚ್.ಟಿ ಹಾಗೇ ಆರೋಗ್ಯ ಇಲಾಖೆಯ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಿಎಚ್ಸಿಒ ವಿದ್ಯಾ, ಆಶಾ ಕಾರ್ಯಕರ್ತೆ ರೇಖಾ, ಅರಿಯಡ್ಕ ಗ್ರಾಮದ ಪಿಎಚ್ಸಿಒ ನವ್ಯ, ಆಶಾ ಕಾರ್ಯಕರ್ತೆ ಲೀಲಾವತಿ, ತಾಲೂಕು ಎಚ್.ಐ.ಒ ಯಚ್ಚರೇಶ ಹದ್ಲಿರವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಫೋಟೋ ತೆಗೆಯದಂತೆ ಆಕ್ಷೇಪ, ಕರ್ತವ್ಯಕ್ಕೆ ಅಡ್ಡಿ-ಆರೋಪ
ಆರೋಗ್ಯ ಇಲಾಖೆಯ ಅಧಿಕಾರಿಗಳು ನೊಣ ಬಾಧಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಫೋಟೋ ತೆಗೆಯುತ್ತಿದ್ದ ವೇಳೆ ಓರ್ವರು ಫೋಟೋ ತೆಗೆಯದಂತೆ ಆಕ್ಷೇಪ ವ್ಯಕ್ತಪಡಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಾಲೂಕು ಎಚ್.ಐ.ಓ ಯಚ್ಚರೇಶ ಯದ್ಲಿಯವರು ಎಂಡೆಸಾಗು ಎಂಬಲ್ಲಿ ಮನೆಯೊಂದರ ಅಂಗಳದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ಓರ್ವರು ಫೋಟೋ ತೆಗೆಯದಂತೆ ಅಡ್ಡಿ ಪಡಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗಿದೆ ಬಳಿಕ ಮಾತುಕತೆಯ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ.ದೀಪಕ್ ರೈಯವರು, ಗ್ರಾಮಸ್ಥರು ಯಾವುದೇ ಕಾರಣಕ್ಕೂ ಆರೋಗ್ಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ, ಇಂತಹ ಪ್ರಕರಣಗಳು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮನೆ, ಮನೆ ಭೇಟಿ ಪರಿಶೀಲನೆ,ಜಾಗೃತಿ
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗ್ರಾಮ ಸಮುದಾಯ ಆರೋಗ್ಯ ಅಧಿಕಾರಿಗಳಾದ ವಿದ್ಯಾ, ನವ್ಯ ಹಾಗೇ ತಾಲೂಕು ಎಚ್.ಐ.ಓ ಯಚ್ಚರೇಶ ಹದ್ಲಿರವರುಗಳು ಜೂ.23 ರಂದು ನೊಣ ಬಾಧಿತ ಪ್ರತಿ ಮನೆಗಳಿಗೆ, ಕೋಳಿ ಫಾರಂಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಕೋಳಿ ಫಾರಂಗಳ ನಿರ್ವಹಣೆಯನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ತಿಳಿಸಿದ್ದಾರೆ. ಇದಲ್ಲದೆ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ,ಮಲೇರಿಯಾ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿ, ಮನೆ ಸುತ್ತಮುತ್ತ ಸ್ವಚ್ಛತೆ ಇಟ್ಟುಕೊಳ್ಳುವಂತೆ ತಿಳಿಸಿದ್ದಾರೆ.
ಒಳಮೊಗ್ರು ಗ್ರಾಮದಲ್ಲೂ ಇದೆ ನೊಣಗಳ ಹಾವಳಿ…!
ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲೂ ನೊಣಗಳ ಹಾವಳಿ ಇದ್ದು ವಿಶೇಷವಾಗಿ ಪರ್ಪುಂಜ, ಉರ್ವ, ಉಜಿರೋಡಿ, ಆಲಂಬಾಡಿ ಪರಿಸರದಲ್ಲಿಯೂ ನೊಣಗಳ ಹಾವಳಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
“ ಎಂಡೆಸಾಗು, ಮಜ್ಜಾರಡ್ಕ ಪರಿಸರದಲ್ಲಿ ನೊಣಗಳ ಹಾವಳಿ ಇರುವ ಬಗ್ಗೆ ದೂರು ಬಂದಿದ್ದು ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೋಳಿ ಫಾರಂ ಅಥವಾ ಇನ್ಯಾವುದೋ ಮೂಲಗಳಿಂದ ನೊಣ ಉತ್ಪತ್ತಿಯಾಗುತ್ತಿರಬಹುದು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮನೆಗೆ ಬರುವಾಗ ಅವರನ್ನು ಗೌರವದಿಂದ ಸ್ವಾಗತಿಸುವುದು ನಮ್ಮ ಕರ್ತವ್ಯ, ಅವರ ಕೆಲಸಗಳಿಗೆ ತೊಂದರೆ ನೀಡಿದ್ದಲ್ಲಿ ಅಂತವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ.”
ಡಾ.ದೀಪಕ್ ರೈ, ತಾಲೂಕು ಆರೋಗ್ಯಾಧಿಕಾರಿ
‘ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನೊಣಗಳ ಹಾವಳಿ ಹಾಗೂ ಒಂದು ರೀತಿಯ ದುರ್ವಾಸನೆಯಿಂದ ಮನೆಯಲ್ಲಿ ನೆಮ್ಮದಿಯೇ ಹಾಳಾಗಿದೆ. ನೊಣಗಳು ರಾಶಿ ರಾಶಿಯಾಗಿ ಬಂದು ಪಾತ್ರೆ, ತಿನಿಸುಗಳ ಮೇಲೆ ಕುಳಿತುಕೊಳ್ಳುತ್ತಿವೆ. ಇದರಿಂದ ಬಹಳಷ್ಟು ತೊಂದರೆಯಾಗಿದೆ. ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳುವಂತೆ ಕೋರಿಕೆ.’
ಕೃಷ್ಣಪ್ಪ ಅಜಿಲ ಎಂಡೆಸಾಗು, ಸ್ಥಳೀಯರು