ನರೇಗಾ, ತೆರಿಗೆ ವಿಷಯಗಳಲ್ಲಿ ಪ್ರಗತಿ ಸಾಧಿಸಿದ ಗ್ರಾ.ಪಂ.ಗಳಿಗೆ ಅಭಿನಂದನೆ
ಪ್ರತಿ ವಿಷಯಗಳಲ್ಲಿ ಪ್ರಗತಿ ಸಾಧಿಸಿ: ಡಾ. ಆನಂದ್
ಕಡಬ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಗ್ರಾ.ಪಂ.ಗಳ ಪಾತ್ರ ಮಹತ್ವದ್ದು. ಪ್ರತಿ ವರ್ಷ ಅನೇಕ ಯೋಜನೆಗಳು ಸೇರಿಕೊಳ್ಳುತ್ತಿದ್ದರೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರದೆ ಪ್ರತಿ ವಿಷಯಗಳಲ್ಲಿ ಪ್ರಗತಿ ಸಾಧಿಸುವುದು ಎಂದು ದ.ಕ.ಜಿ.ಪಂ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಹೇಳಿದರು.
ಅವರು ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜೂ.24 ರಂದು ನಡೆದ ಗ್ರಾಮ ಪಂಚಾಯತ್ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನರೇಗಾ ಯೋಜನೆಯಡಿ ಕಳೆದ ಆರ್ಥಿಕ ವರ್ಷದಲ್ಲಿ ಗುರಿ ಮೀರಿದ ಸಾಧನೆ ಮಾಡಿದ್ದಕ್ಕೆ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಗಳಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಅದೇ ರೀತಿ ಈ ಬಾರಿಯೂ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಬೇಕು ಎಂದರು. ಗ್ರಾ.ಪಂ.ಗಳ ತೆರಿಗೆ ವಸೂಲಾತಿಯಲ್ಲಿ ಮೊದಲ ತ್ರೈಮಾಸಿಕದಲ್ಲಿಯೇ ಶೇ.31ಪ್ರಗತಿ ಸಾಧಿಸುವ ಮೂಲಕ ಕಡಬ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಇದೇ ರೀತಿ ಮುಂದುವರೆಯಬೇಕು. ಮನೆ ಮನೆ ಗಂಗೆ ಯೋಜನೆಯಡಿ ನೀಡುವ ಕುಡಿಯುವ ನೀರಿನ ಮೀಟರ್ ಪರಿಶೀಲಿಸಿ ಬಿಲ್ ನೀಡುವ ವ್ಯವಸ್ಥೆ ಅನುಷ್ಠಾನಿಸಬೇಕು ಹಾಗೂ ಪ್ರತಿ ದಿನ ನೀರು ವ್ಯತ್ಯಯ ಮಾಡದೆ ನೀಡುವ ಜವಾಬ್ದಾರಿ ಗ್ರಾಮ ಪಂಚಾಯತ್ ಗಳದ್ದು ಎಂದರು.
ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಪಂಚತಂತ್ರ 2.0 ದಲ್ಲಿ ನಮೂದಿಸಬೇಕಾದ ಅಗತ್ಯ ವಿಷಯಗಳ ಬಗ್ಗೆ ಪ್ರಗತಿ ಪರಿಶೀಲಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಅವರು ಮನೆ ಮನೆ ಗಂಗೆ ಯೋಜನೆಯಡಿ ಗ್ರಾಮ ಪಂಚಾಯತ್ ಗಳು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ವಿವರಿಸಿದರು.
ಕಡಬ ತಾಲೂಕು ಪಂಚಾಯತ್ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಯಶವಂತ ಬೆಳ್ಚಡ ಸ್ವಾಗತಿಸಿದರು, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂದೇಶ್ ಕೆ.ಎನ್. ವಂದಿಸಿದರು. ತಾಲೂಕು ಪಂಚಾಯತ್ ವ್ಯವಸ್ಥಾಪಕ ಭುವನೇಂದ್ರ ಕುಮಾರ್ ಹಾಗೂ ನರೇಗಾ ಸಂಯೋಜಕ ಭರತ್ ರಾಜ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಗತಿ ಸಾಧಿಸಿದ ಗ್ರಾ.ಪಂ.ಗಳಿಗೆ ಅಭಿನಂದನಾ ಪತ್ರ ವಿತರಣೆ
2024-25 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ತೆರಿಗೆ ವಸೂಲಾತಿಯಲ್ಲಿ ಸಾಧನೆಗೈದ ಬೆಳಂದೂರು, ಸವಣೂರು, ಆಲಂಕಾರು, ಕುಟ್ರುಪಾಡಿ, ಕೊಣಾಜೆ, ಸುಬ್ರಹ್ಮಣ್ಯ, ಬಿಳಿನೆಲೆ, ಗೋಳಿತೊಟ್ಟು, ಶಿರಾಡಿ, ನೂಜಿಬಾಳ್ತಿಲ , ಕೊಂಬಾರು, ಕೊಯಿಲ, ಬಳ್ಪ, ಪೆರಾಬೆ, ಕಾಣಿಯೂರು ಗ್ರಾಮ ಪಂಚಾಯತ್ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿಗಳಿಗೆ, ನರೇಗಾ ತಾಂತ್ರಿಕ ಸಹಾಯಕರಿಗೆ ಅಭಿನಂದನಾ ಪತ್ರ ನೀಡಿ ಅಭಿನಂದಿಸಲಾಯಿತು.