ಪುತ್ತೂರು:ಮದುವೆಯಾಗುವುದಾಗಿ ನಂಬಿಸಿ ಬಲವಂತದ ದೈಹಿಕ ಸಂಪರ್ಕ ನಡೆಸಿ ಕಾಲೇಜು ವಿದ್ಯಾರ್ಥಿನಿ ಯುವತಿಯೋರ್ವರನ್ನು ಗರ್ಭವತಿಯನ್ನಾಗಿಸಿ ಇದೀಗ ಮದುವೆಯಾಗಲು ನಿರಾಕರಿಸುತ್ತಿರುವ ಆರೋಪಿ ಯುವಕನ ವಿರುದ್ದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಜೂ.24ರಂದು ಪ್ರಕರಣ ದಾಖಲಾಗಿದೆ.
ಪುತ್ತೂರು ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ.ರಾವ್ (21ವ.)ಆರೋಪಿಯಾಗಿದ್ದು, 20ರ ವಯೋಮಾನದ ಯುವತಿ ನೀಡಿದ ದೂರಿನಂತೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ‘ಪ್ರೌಢಶಾಲೆಯಲ್ಲಿರುವ ಸಮಯ ಸಹಪಾಠಿ ಶ್ರೀಕೃಷ್ಣರೊಂದಿಗೆ ತಾನು ಸ್ನೇಹ ಬೆಳೆಸಿದ್ದು, ಪ್ರಾಯಸ್ಥರಾದ ಬಳಿಕ ಪರಸ್ಪರ ಪ್ರೀತಿಸುತ್ತಿದ್ದೆವು. 2024ರ ಅಕ್ಟೋಬರ್ 11ರಂದು ತನ್ನನ್ನು ಶ್ರೀಕೃಷ್ಣ ಅವರು ಮನೆಗೆ ಕರೆಸಿ ಮದುವೆಯಾಗುತ್ತೇನೆಂದು ಹೇಳಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದರು.ಬಳಿಕ 2025ನೇ ಜನವರಿ ತಿಂಗಳಲ್ಲೂ ದೈಹಿಕ ಸಂಪರ್ಕ ಬೆಳೆಸಿದ್ದು ಇದೀಗ ಏಳೂವರೆ ತಿಂಗಳ ಗರ್ಭವತಿಯಾಗಿರುವ ತನ್ನನ್ನು ಶ್ರೀಕೃಷ್ಣರವರು ವಿವಾಹ ಆಗಲು ನಿರಾಕರಿಸಿದ್ದಾರೆ’ ಎಂದು ಆರೋಪಿಸಿ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ 64(1), 69 ಬಿ.ಎನ್.ಎಸ್ 2023ರಂತೆ ಪ್ರಕರಣ ದಾಖಲಾಗಿದೆ.