ಗುಂಡ್ಯಹೊಳೆಯಲ್ಲಿ ಉಕ್ಕಿಬಂದ ನೀರು : ಇಚ್ಲಂಪಾಡಿ ಗ್ರಾಮದಲ್ಲಿ ತೋಟ, ರಸ್ತೆ ಜಲಾವೃತ

0

ನೆಲ್ಯಾಡಿ: ಶಿರಾಡಿ ಘಾಟ್ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುಂಡ್ಯ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಇಚ್ಲಂಪಾಡಿಯಲ್ಲಿ ತೋಟ, ಸೇತುವೆ ಜಲಾವೃತಗೊಂಡಿದೆ.
ಕಳೆದ ಎರಡು ದಿನಗಳಿಂದ ಸಕಲೇಶಪುರ, ಶಿರಾಡಿ ಘಾಟ್‌ನಲ್ಲಿ ಭಾರೀ ಮಳೆಯಾಗುತ್ತಿರುವುದಿಂದ ಗುಂಡ್ಯ ಹೊಳೆ ಉಕ್ಕಿ ಹರಿಯಲಾರಂಭಿಸಿದೆ. ಇದರ ಪರಿಣಾಮವಾಗಿ ಇಚ್ಲಂಪಾಡಿ ಭಾಗದಲ್ಲಿನ ತಗ್ಗುಪ್ರದೇಶದಲ್ಲಿನ ತೊಟ, ಸೇತುವೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ. ಗುಂಡ್ಯ ಹೊಳೆ ಬದಿಯಲ್ಲಿರುವ ಇಚ್ಲಂಪಾಡಿ ಗ್ರಾಮದ ಕೊರಮೇರು ನಿವಾಸಿಗಳಾದ ರಾಮಕೃಷ್ಣ ಗೌಡ, ವಿಶ್ವನಾಥ ಗೌಡ, ರುಕ್ಮಯ ಗೌಡ, ನೀಲಪ್ಪ ಗೌಡ, ಧರ್ಣಪ್ಪ ಗೌಡ, ದಯಾನಂದ ಗೌಡ, ಲಿಂಗಪ್ಪ ಗೌಡ, ಜಯರಾಮ ಗೌಡ ಹಾಗೂ ಇತರರ ತೋಟಗಳಿಗೆ ನೀರು ನುಗ್ಗಿ ಜಲಾವೃತಗೊಂಡಿವೆ. ಇಚ್ಲಂಪಾಡಿಯಲ್ಲಿಯೂ ಹಲವರ ತೋಟಗಳಿಗೆ ನೀರು ನುಗ್ಗಿದೆ.


ಸೇತುವೆ ಜಲಾವೃತ:
ಇಚ್ಲಂಪಾಡಿಯಿಂದ ಕೊರಮೇರು ಮೂಲಕ ಲಾವತ್ತಡ್ಕ ಸಂಪರ್ಕಿಸುವ ರಸ್ತೆಯಲ್ಲಿ ಕೊರಮೇರು ಎಂಬಲ್ಲಿರುವ ಕಿರುಸೇತುವೆ ಮುಳುಗಡೆಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ. ಇಚ್ಲಂಪಾಡಿ ಉಳ್ಳಾಕ್ಲು ದೇವಸ್ಥಾನದ ಸಂಪರ್ಕಿಸುವ ಮುಡಿಪು ರಸ್ತೆ, ಸೇತುವೆ ನೀರಿನಿಂದ ಜಲಾವೃತಗೊಂಡಿದೆ. ಮಾನಡ್ಕ, ಕಲ್ಲುಗುಡ್ಡೆ ಸಂಪರ್ಕಿ ರಸ್ತೆಗೂ ನೀರು ಬಂದು ಸಂಚಾರಕ್ಕೆ ಅಡ್ಡಿಯಾಗಿದೆ.

ಬಿರುಗಾಳಿಗೆ ಅಡಿಕೆ ಕೃಷಿಗೆ ಹಾನಿ:
ಜೂ.25ರಂದು ಸಂಜೆ ಬೀಸಿದ ಭಾರೀ ಬಿರುಗಾಳಿಗೆ ಕೊರಮೇರು ನಿವಾಸಿ ರಮೇಶ ಗೌಡ ಎಂಬವರ ತೋಟದಲ್ಲಿ ಸುಮಾರು 200ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗುರುಳಿವೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here