ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

0

ಕೆಂಪೇಗೌಡರು ನೀಡಿದ ಕೊಡುಗೆಗಳನ್ನು ಮರೆಯುತ್ತಿರುವುದು ದುರಂತ-ಭವ್ಯ ಪಿ.ಆರ್ ನಿಡ್ಪಳ್ಳಿ

ಪುತ್ತೂರು:ನಾಡನ್ನು ಕಟ್ಟಿದ ಕೆಂಪೇಗೌಡರ ತುಡಿತ ಅದ್ಬುತ. ಅವರು ಈಗಿನ ಸಿಲಿಕಾನ್ ಸಿಟಿ ಬೆಂಗಳೂರನ್ನು ನಿರ್ಮಿಸುವ ಕನಸು ಕಟ್ಟಿದ್ದ ದಾರ್ಶನಿಕರು. ಅವರ ಚಿಂತನೆಗಳು ಎಲ್ಲಾ ವರ್ಗದ, ಎಲ್ಲಾ ಪ್ರದೇಶಗಳ ಜನರಿಗೆ ಬದುಕು ಕಟ್ಟಿಕೊಳ್ಳಲು ಪೂರಕವಾಗಿದ್ದು, ಇಂದಿನ ಮೆಟ್ರೋಪಾಲಿಟನ್ ಸಿಟಿಯಾಗಿದೆ. ಆದರೆ ಕೆಂಪೇಗೌಡರು ನೀಡಿದ ಕೊಡುಗೆಗಳನ್ನು ಇಂದು ಮರೆಯುತ್ತಿರುವುದು ದುರಂತವಾಗಿದೆ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಆರ್ ನಿಡ್ಪಳ್ಳಿ ಹೇಳಿದರು.


ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಜೂ.27ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ ನಾಡ ಪ್ರಭು ಕೆಂಪೇಗೌಡ ಜಯಂತಿ ದಿನಾಚರಣೆಯಲ್ಲಿ ಅವರು ಸಂಸ್ಮರಣಾ ಉಪನ್ಯಾಸ ನೀಡಿದರು.

ತನ್ನ ಹನ್ನೊಂದನೇ ವಯಸ್ಸಿನಲ್ಲಿ ಹಂಪಿ ಉತ್ಸವವದಲ್ಲಿ ವಿಜಯ ನಗರದ ಸಾಮ್ರಾಜ್ಯವನ್ನು ಕಂಡಿದ್ದ ನಾಡಪ್ರಭು ಕೆಂಪೇಗೌಡ ತಾನು ಒಂದು ಇಂತಹ ಸಾಮ್ರಾಜ್ಯ ನಿರ್ಮಿಸುವ ಕನಸು ಕಂಡಿದ್ದರು. ಅಂತಹ ಆಲೋಚನೆಗಳ ಪ್ರತಿಫಲವಾಗಿ ಈಗಿನ ಸಿಲಿಕಾನ್ ಸಿಟಿ ಬೆಂಗಳೂರು ನಿರ್ಮಿಸಿದ ದಾರ್ಶನಿಕರಾಗಿದ್ದಾರೆ ಕೆಂಪೇಗೌಡರು. ದೂರದೃಷ್ಠಿ ಹೊಂದಿದ್ದ ಅವರು ಈಗಿನ ಸಿಲಿಕಾಸ್ ಸಿಟಿಯನ್ನು 400 ವರ್ಷಗಳ ಹಿಂದೆ ಯೋಚಿಸಿದ್ದರು. ಪ್ರಾಕೃತಿಕ ವಿಕೊಪಕ್ಕೆ ಒಳಗಾಗದಂತೆ ಸಮುದ್ರಭಾಗದಿಂದ 3000 ಅಡಿ ಎತ್ತರದಲ್ಲಿರುವ ಬೆಂಗಳೂರನ್ನು ಕಟ್ಟಿದ್ದರು. ಸಾವಿರಾರು ಕೆರೆಗಳನ್ನು ನಿರ್ಮಿಸಿ ನೀರಿನ ಅಭಾವವಿಲ್ಲದಂತೆ ಕೊಡುಗೆ ನೀಡಿದ್ದರು. ಈಗಿನ ಇಂಗುಗುಂಡಿಯ ಯೋಚನೆ 300 ವರ್ಷಗಳ ಹಿಂದೆ ಕೆಂಪೇ ಗೌಡರು ಮಾಡಿದ್ದರು. ಜೊತೆಗೆ ಬದುಕಿಗೆ ಬೇಕಾದ ಹಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಸಿದ್ದರು. ಇಂದು ಕೆರೆಗಳನ್ನು ಮುಚ್ಚಿ ಅದರಲ್ಲಿ ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಬೆಂಗಳೂರಿನಲ್ಲಿ ನೀರಿನ ಅಭಾವ ಉಂಟಾಗಿದ್ದು ಈ ಸಮಸ್ಯೆಯನ್ನು ನಾವೇ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು. ಬೆಂಗಳೂರನ್ನು ವಾಣಿಜ್ಯೋದ್ಯಮವಾಗಿ ಬೆಳೆಸಲು ಪ್ರಾರಂಭಿಸಿದ್ದ ಅವರು ಎಲ್ಲಾ ವರ್ಗದ ಕುಲ ಕಸುಬುಗಳು ಬೆಳೆಯಲು ಬೆಂಬಲ ನೀಡಿದವರು. ತಾಂತ್ರಿಕವಾಗಿ ಬೆಳೆಯಲು ಆಯಕಟ್ಟನ್ನು ನಿರ್ಮಿಸಿದರು. ಅವರ ಕೊಡುಗೆಗಳನ್ನು ಉಳಿಸಿಕೊಳ್ಳದೇ ಇರುವುದು ವಿಷಾಧನೀಯ. ನಮ್ಮದೇ ದಾರಿಯಲ್ಲಿ ನಾವು ಮುಂದುವರಿಯುತ್ತಿದ್ದೇವೆ. ಇಂದು ಬೆಂಗಳೂರು ಮುಳುಗಿತ್ತಿರುವುದಕ್ಕೆ ಕೆಂಪೇಗೌಡರು ಕಾರಣರಲ್ಲ. ನಮ್ಮಲ್ಲಿ ಆಲೋಚನೆಗಳು ಇಲ್ಲದೇ ಇರುವುದರಿಂದ ನಾವು ಕಾರಣರು. ಹೀಗಾಗಿ ಕೆಂಪೇಗೌಡರ ಬದುಕಿನ ಸಾಧನೆಗಳನ್ನು ನೋಡಿದಾಗ ನಮ್ಮನ್ನು ನಾವು ಆತ್ಮವಲೋಕನ ಮಾಡಬೇಕು ಅದರ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು ಎಂದರು.


ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿ, ನಾಡಪ್ರಭು ಕೆಂಪೇಗೌಡರವರು ನೀಡಿದ ಕೊಡುಗೆ, ಅವರು ಮಾಡಿದ ಸಾಧನೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಅವರ ಜನ್ಮದಿನಾಚರಣೆಯೂ ಒಂದು ಸಮಾಜಕ್ಕೆ ಸೀಮಿತವಲ್ಲ. ಕೆಂಪೇ ಗೌಡರ ಮಾಡಿದ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಉದ್ದೇಶದಿಂದ ಈ ವರ್ಷ ಶಾಲೆಯಲ್ಲಿ ಆಚರಿಸಲಾಗುತ್ತಿದೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ರಾಮ ರಾಜ್ಯವಾಗಲು ಸಾಧ್ಯ ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಈಗಿರುವ ಬೆಂಗಳೂರಿನ ಕನಸನ್ನು ಐನೂರು ವರ್ಷಗಳ ಹಿಂದೆಯೇ ಯೋಚನೆ ಮಾಡಿದ್ದ ಕೆಂಪೇ ಗೌಡರವರು ಮಾಡಿದ ಸಾಧನೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.


ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಕಾರ್ಯಕ್ರಮವನ್ನ ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ನಾಗರಾಜ್ ವಿ. ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಎಚ್., ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬಹುಮಾನ ವಿತರಣೆ:
ನಾಡಪ್ರಭು ಕೆಂಪೇಗೌಡ ಜನ್ಮದಿನದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಿಆರ್‌ಪಿ ಶಶಿಕಲಾ ಬಹುಮನ ವಿಜೇತರ ಪಟ್ಟಿ ಓದಿದರು.


ವಿದ್ಯಾರ್ಥಿಗಳ ಕೈಯಲ್ಲಿ ಮೂಡಿಬಂದ ಕೆಂಪೇಗೌಡ ಭಾವಚಿತ್ರ:
ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಾದ ಹತ್ತನೇ ತರಗತಿಯ ಪ್ರಥಮ್, ಸಚ್ಚಿದಾನಂದರವರು ಕೈಯಲ್ಲಿ ಆಕರ್ಷಕವಾದ ಕೆಂಪೇ ಗೌಡರವರ ಭಾವಚಿತ್ರವನ್ನು ಆಯಿಲ್ ಪೈಂಟ್‌ನಲ್ಲಿ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಅಭಿನಂದಿಸಲಾಯಿತು.


ಉಪ ತಹಸೀಲ್ದಾರ್ ಸುಲೋಚನಾ ಪಿ.ಕೆ. ಸ್ವಾಗತಿಸಿ, ತಾಲೂಕು ಕಚೇರಿಯ ವಿಷಯ ನಿರ್ವಾಹಕ ದಯಾನಂದ ಡಿ.ಟಿ. ವಂದಿಸಿದರು. ಶಿಕ್ಷಕರಾದ ಆಶಾ ಹಾಗೂ ಲತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿನ ಚಕ್ರಪಾಣಿ ಅತಿಥಿಗಳನ್ನು ಹೂ, ಸ್ಮರಣಿಕೆ ನೀಡಿ ಗೌರವಿಸಿದರು.

ಭೌತಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಬೆಳೆಯಲು ಕನಸನ್ನು ಹೊತ್ತಿದ್ದ ಕೆಂಪೇಗೌಡರು ಅದಕ್ಕೆ ಪೂರಕವಾದ ಸೌಲಭ್ಯ ಮಾಡಿದವರು. ಅವರ ಸಾಧನೆಗಳನ್ನು ಪ್ರತಿನಿತ್ಯ ಮೆಲುಕುಹಾಕಬೇಕು, ನಮ್ಮೊಳಗೆ ಸದಾ ಅನುರಣಿಸಲಿ. ಇಲ್ಲಿನ ವಿದ್ಯಾರ್ಥಿಗಳಲ್ಲಿ ಬೆಂಗಳೂರು ನಿರ್ಮಿಸುವುದಲ್ಲ ಕನಿಷ್ಠ ಪುತ್ತೂರನ್ನು ಆ ರೀತಿ ಮಾಡುವ ಕನಸು ಮೂಡಲಿ. ಇಂಜಿನಿಯರ್, ವೈದ್ಯರು, ಶಿಕ್ಷಕರು ಆಗುವ ಕನಸು ವಿದ್ಯಾರ್ಥಿಗಳಲ್ಲಿರಬಹುದು. ಆದರೆ ನಿಮ್ಮ ಕನಸುಗಳು ಮುಂದಿನ ಪೀಳಿಗೆಗೆ ಉತ್ತರ ಕೊಡುವಂತಿರಲಿ. 300 ವರ್ಷಗಳ ಹಿಂದಿನ ಕೆಂಪೇ ಗೌಡರ ಸಾಧನೆಯಂತೆ ವಿದ್ಯಾರ್ಥಿಗಳು ಸಾಧನೆ ಮಾಡುವಂತಿರಲಿ.
-ಭವ್ಯ ನಿಡ್ಪಳ್ಳಿ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರು, ವಿವೇಕಾನಂದ ಕಾಲೇಜು

LEAVE A REPLY

Please enter your comment!
Please enter your name here