ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆಗೂ ಗಮನ ಕೊಡಬೇಕು : ಲಕ್ಷ್ಮೀಕಾಂತ ಆಚಾರ್ಯ
ಪುತ್ತೂರು: ವಿದ್ಯಾರ್ಥಿಗಳು ಉಪನ್ಯಾಸಕರು ಹೇಳಿದ್ದನ್ನು ಅರ್ಥಮಾಡಿಕೊಂಡು, ನಂಬಿಕೆ ಇಟ್ಟು ಅನುಸರಿಸಬೇಕು. ಅದರಲ್ಲೂ ಪರೀಕ್ಷಾ ಸಿದ್ಧತೆಯನ್ನು ಸಾಕಷ್ಟು ಮುಂಚಿತವಾಗಿ ಮಾಡಬೇಕು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಆಚಾರ್ಯ ಹೇಳಿದರು.

ಅವರು ಕಾಲೇಜಿನಲ್ಲಿ ಆಯೋಜಿಸಲಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೋ?ಕರ ಸಭೆಯಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.
ವಿದ್ಯಾರ್ಥಿಗಳು ಓದಿನ ಕಡೆಗಷ್ಟೇ ಅಲ್ಲದೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ನಿರಂತರವಾಗಿ ಧ್ಯಾನ, ವ್ಯಾಯಾಮ, ಸೂರ್ಯ ನಮಸ್ಕಾರಗಳನ್ನು ಮಾಡುವುದರಿಂದ ಹಾಗೂ ಜಂಕ್ ಫುಡ್ ನಿಂದ ದೂರ ನಿಂತು ಆರೋಗ್ಯಕರ ಆಹಾರದ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗೆ ಮಾಡಿದಾಗ ಉತ್ತಮ ಫಲಿತಾಂಶವೂ ದೊರಕುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾಸಂಸ್ಥೆ ಕಟ್ಟುವುದು ಸುಲಭದ ಕೆಲಸವಲ್ಲ. ಸಾಕಷ್ಟು ಪರಿಶ್ರಮ ಇದೆ. ನಮ್ಮ ಬದುಕಿನಲ್ಲಿ ಕಹಿ ನೆನಪುಗಳಿದ್ದರೆ ಮಾತ್ರ ಸಾಧನೆ ಸಾಧ್ಯ ಎಂದರಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವವರ ಸಂಖ್ಯೆ ಅಪಾರ. ಆದರೆ ದೊರಕುವ ಅವಕಾಶಗಳು ತುಂಬಾ ಕಡಿಮೆ. ಆದುದರಿಂದ ಹೆತ್ತವರು ನಕ್ಷತ್ರಿಕನಂತೆ ತಮ್ಮ ಮಕ್ಕಳ ಜೊತೆ ಇದ್ದುಕೊಂಡು, ಉಪನ್ಯಾಸಕರ ಜೊತೆಗೂ ಸಂಪರ್ಕದಲ್ಲಿದ್ದು ಮಕ್ಕಳ ಏಳಿಗೆಗೆ ಯತ್ನಿಸಬೇಕು ಎಂದರು.
ಉಪನ್ಯಾಸಕ ನಾಗೇಶ್ ಅವರು ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆಯ ವಿಚಾರಗಳ ಬಗೆಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾಯದರ್ಶಿ ರಾಜಶ್ರೀ ನಟ್ಟೋಜ, ಉಪಪ್ರಾಂಶುಪಾಲೆ ಶೈನಿ ಕೆ. ಹಾಗೂ ಉಪನ್ಯಾಸಕ ವೃಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.