ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಬಲವಂತದ ದೈಹಿಕ ಸಂಪರ್ಕ ನಡೆಸಿ ಕಾಲೇಜು ವಿದ್ಯಾರ್ಥಿನಿ ಯುವತಿಯೋರ್ವರನ್ನು ಗರ್ಭವತಿಯನ್ನಾಗಿಸಿ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ಪುತ್ತೂರು ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ.ರಾವ್ (21 ವ.) ಆರೋಪಿಯಾಗಿದ್ದು, ಈತನ ವಿರುದ್ಧ ಯುವತಿ ನೀಡಿದ್ದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಜೂ.24ರಂದು ಪ್ರಕರಣ ದಾಖಲಾಗಿದೆ.ದಾಖಲಾಗಿದೆ.
‘ಪ್ರೌಢಶಾಲೆಯಲ್ಲಿರುವ ಸಮಯ ಸಹಪಾಠಿ ಶ್ರೀಕೃಷ್ಣರೊಂದಿಗೆ ತಾನು ಸ್ನೇಹ ಬೆಳೆಸಿದ್ದು, ಪ್ರಾಯಸ್ಥರಾದ ಬಳಿಕ ಪರಸ್ಪರ ಪ್ರೀತಿಸುತ್ತಿದ್ದೆವು.2024ರ ಅಕ್ಟೋಬರ್ 11ರಂದು ತನ್ನನ್ನು ಶ್ರೀಕೃಷ್ಣ ಅವರು ಮನೆಗೆ ಕರೆಸಿ ಮದುವೆಯಾಗುತ್ತೇನೆಂದು ಹೇಳಿ ನಂಬಿಸಿ ಬಲವಂತದ ದೈಹಿಕ ಸಂಪರ್ಕ ಮಾಡಿದ್ದರು.ಬಳಿಕ 2025ನೇ ಜನವರಿ ತಿಂಗಳಲ್ಲೂ ದೈಹಿಕ ಸಂಪರ್ಕ ಬೆಳೆಸಿದ್ದು, ಇದೀಗ ಗರ್ಭವತಿಯಾಗಿರುವ ತನ್ನನ್ನು ಶ್ರೀಕೃಷ್ಣರವರು ವಿವಾಹ ಆಗಲು ನಿರಾಕರಿಸಿದ್ದಾರೆ’ ಎಂದು ಆರೋಪಿಸಿ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ 64(1),69 ಬಿ.ಎನ್ ಎಲ್ 2023ರಂತೆ ಪ್ರಕರಣ ದಾಖಲಾಗಿದೆ.
ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.ಈ ನಡುವೆ ಆರೋಪಿ ಶ್ರೀ ಕೃಷ್ಣ ಜೆ.ರಾವ್ ನಿರೀಕ್ಷಣಾ ಜಾಮೀನು ಕೋರಿ ಮಂಗಳೂರು ಆರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಜೂ.30ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಸಂತ್ರಸ್ತ ಯುವತಿ ಜೂ.27ರಂದು ರಾತ್ರಿ ಇಲ್ಲಿನ ಆದರ್ಶ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ,ಮಗು ಆರೋಗ್ಯವಾಗಿದ್ದಾರೆ. ಮತ್ತೊಂದೆಡೆ ಯುವತಿಗೆ ವಂಚನೆ ಪ್ರಕರಣದ ಆರೋಪಿಯಾಗಿರುವ ಶ್ರೀಕೃಷ್ಣ ಜೆ.ರಾವ್ ಅವರ ತಂದೆ ಪಿ.ಜಿ.ಜಗನ್ನಿವಾಸ್ ರಾವ್ ಅವರು ದಿಢೀರ್ ಅಸ್ವಸ್ಥರಾಗಿ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.