ಪಾಟ್ರಕೋಡಿ: ಬಿಜೆಪಿ ಸುಳ್ಳಿಗೆ ಕಾಂಗ್ರೆಸ್ ಉತ್ತರ ಜನಜಾಗೃತಿ ಸಭೆ

0

ಜನಜಾಗೃತಿ ಸಭೆ ರಾಜ್ಯಾದ್ಯಂತ ನಡೆಯಲಿದೆ: ಅಶೋಕ್ ರೈ

ಪುತ್ತೂರು: ಬಿಜೆಪಿಯವರು ಎಷ್ಟೋ ವರ್ಷದಿಂದ ಸುಳ್ಳು ಹೇಳಿ ಜನರನ್ನ ಮಂಗ ಮಾಡಿ ರಾಜಕೀಯ ಲಾಭ ಪಡೆಯುತ್ತಿದ್ದರು ಆದರೆ ಇನ್ನು ಬಿಜೆಪಿಗರ ಸುಳ್ಳು ನಡೆಯುವುದಿಲ್ಲ, ಪುತ್ತೂರಿನಲ್ಲಿ ಇವರ ಸುಳ್ಳಿನ ವಿರುದ್ದ ಯುದ್ದ ಆರಂಭ ಮಾಡಿದ್ದೇವೆ ಇದು ರಾಜ್ಯಾದ್ಯಂತ ನಡೆಯಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಅವರು ಕೆದಿಲ ವಲಯ ಕಾಂಗ್ರೆಸ್ ವತಿಯಿಂದ ಪಾಟ್ರಕೋಡಿಯಲ್ಲಿ ನಡೆದ ಬಿಜೆಪಿ ಸುಳ್ಳಿಗೆ ಕಾಂಗ್ರೆಸ್ ಉತ್ತರ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಸುಳ್ಳನ್ನೇ ಬಂಡವಾಳ ಮಾಡಿಕೊಂಡು ಎಷ್ಟು ವರ್ಷದಿಂದ ರಾಜಕೀಯ ಮಾಡುತ್ತಿದ್ದಾರೆ. ಶೇ.5 ರಷ್ಟು ಜನ ಇವರ ಸುಳ್ಳನ್ನು ನಂಬಿ ಬಿಡ್ತಾರೆ. ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಬಿಜೆಪಿ ಬಂಡವಾಳವನ್ನು ಬಯಲು ಮಾಡಿ ತಿಳಿಸುತ್ತೇವೆ ಎಂದು ಅಶೋಕ್ ರೈ ಹೇಳಿದರು.


ಗ್ಯಾಸ್ ಬೆಲೆ ಏರಿಕೆ ಮಾಡಿದ್ದು ಸಿದ್ದರಾಮಯ್ಯರಂತೆ:
ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಕೇಂದ್ರದ ಬಿಜೆಪಿ ಸರಕಾರ. ಆದರೆ ಬಿಜೆಪಿಯವರು ಇದನ್ನು ಕಾಂಗ್ರೆಸ್ ಏರಿಕೆ ಮಾಡಿದ್ದು ಎಂದು ಜನರ ನಡುವೆ ಸುಳ್ಳನ್ನು ತೇಲಿ ಬಿಟ್ಟಿದ್ದಾರೆ. ಆದರೆ ಜನ ಈಗ ವಿದ್ಯಾವಂತರಾಗಿದ್ದು ಬಿಜೆಪಿಯ ಸುಳ್ಳನ್ನು ತಿಳಿದುಕೊಂಡಿದ್ದಾರೆ ಆದರೂ ಜನತೆಗೆ ತಿಳಿಸುವುದು ನಮ್ಮ ಕರ್ತವ್ಯ ಎಂಬ ನಿಟ್ಟಿನಲ್ಲಿ ಅದನ್ನು ಜನರ ಮುಂದೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಶಾಸಕರು ಹೇಳಿದರು.


ಗ್ರಾಪಂ ನ್ನು ಹಾಳು ಮಾಡಿದ್ದೇ ಬಿಜೆಪಿ:
ಮನೆ ಕಟ್ಟುವಾಗ 9/11 ಅಗತ್ಯವಾಗಿ ಬೇಕಾಗಿದೆ ಅದು ಗ್ರಾಪಂ ಮೂಲಕ ಆಗಬೇಕು ಎಂದು ಈ ಹಿಂದೆ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಗ್ರಾಪಂಗೆ ಅಧಿಕಾರ ನೀಡಿತ್ತು. ಆದರೆ ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ 9/11 ಖಾತೆಯನ್ನು ಗ್ರಾ.ಪಂ. ನಿಂದ ತೆಗೆದು ಹಾಕಿ ಪುಡಾಕ್ಕೆ ವರ್ಗಾವಣೆ ಮಾಡಿತ್ತು. ಆ ಮೂಲಕ ಬಡವರ ಮೇಲೆ ಪ್ರಹಾರ ನಡೆಸಿದೆ. ಗ್ರಾ.ಪಂ. ನ ಬಹುತೇಕ ಅಧಿಕಾರವನ್ನು ಕಸಿದದ್ದು ಬಿಜೆಪಿ ಸರಕಾರ. ಬಿಜೆಪಿ ಗ್ರಾ.ಪಂ. ಗಳನ್ನು ಲಗಾಡಿ ಮಾಡಿದ್ದಾರೆ ಎಂದು ಅಶೋಕ್ ರೈ ಹೇಳಿದರು.


ಕಾಂಗ್ರೆಸ್ ಸೇರಲು ಬಿಜೆಪಿ ನಾಯಕರು ತುದಿಗಾಲಲ್ಲಿದ್ದಾರೆ:
ರಾಜ್ಯದ ಬಿಜೆಪಿಯ ಬಹುತೇಕ ಹಿರಿಯ ನಾಯಕರು ಮೂಲೆ ಗುಂಪಾಗಿದ್ದಾರೆ ಅವರೆಲ್ಲಾ ಕಾಂಗ್ರೆಸ್ ಸೇರಲು ತುದಿಗಾಲಲ್ಲಿದ್ದಾರೆ. ಆದರೆ ಕುಳಿತುಕೊಳ್ಳಿಸಲು ಕುರ್ಚಿ ಖಾಲಿ ಇಲ್ಲದ ಕಾರಣ ಸ್ವಲ್ಪ ತಡವಾಗಿದೆ.ಮುಂದಿನ 25 ವರ್ಷಗಳ ಕಾಲ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ಗೊತ್ತಾಗಿದೆ. ಆ ಕಾರಣಕ್ಕೆ ಮಹಾ ಸುಳ್ಳನ್ನು ಬಿಡುತ್ತಿದ್ದಾರೆ ಎಂದು ಅಶೋಕ್ ರೈ ವ್ಯಂಗ್ಯವಾಡಿದರು.


ಶಾಸಕರ ಅಭಿವೃದ್ದಿ ಕಂಡು ಬಿಜೆಪಿ ಬೆರಗಾಗಿದೆ: ಎಂ ಎಸ್ ಮಹಮ್ಮದ್:
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ರವರು ಮಾತನಾಡಿ, ಜಿಲ್ಲೆಯಲ್ಲಿರುವ ಬಿಜೆಪಿ ಶಾಸಕರು ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಅಭಿವೃದ್ದಿ ಬೇಕಿಲ್ಲ, ಶಾಂತಿ ಕದಡಿದರೆ ಲಾಭವಾಗುತ್ತದೆ ಎಂಬ ಭಾವನೆ ಅವರಲ್ಲಿ ಮನೆ ಮಾಡಿದೆ. ಪುತ್ತೂರು ಶಾಸಕರು ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇದನ್ನು ಬಿಜೆಪಿಯವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಸುಳ್ಳಿನ ಸಭೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಇಂದು ಬಡವರು ಮೂರು ಹೊತ್ತು ಊಟ ಮಾಡುತ್ತಿದ್ದರೆ ಅದಕ್ಕೆ ದೇಶವನ್ನಾಳಿದ ಕಾಂಗ್ರೆಸ್ ಸರಕಾರ ಕಾರಣವಾಗಿದೆ.ಇಂದು ಪಂಚ ಗ್ಯಾರಂಟಿಗಳನ್ನು ಜನ ಸ್ಬೀಕರಿಸಿದ್ದಾರೆ,ನೆಮ್ಮದಿಯ ಜೀವನ ಮಾಡುವಂತಾಗಿದೆ ಎಂದು ಹೇಳಿದರು.

ದನ ಕಳ್ಳತನ ಮಾಡುವುದು ಬಿಜೆಪಿಯವರು:ಕಾವು ಹೇಮನಾಥ ಶೆಟ್ಟಿ:
ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಬಿಜೆಪಿಯವರೇ ದನ ಕಳ್ಳತನ ಮಾಡುವುದು, ಅವರೇ ಅದನ್ನು ಕೇರಳಕ್ಕೆ ಸಾಗಾಟ ಮಾಡುವುದು. ಅದರ ಮೂಲಕ ದುಡ್ಡು ಮಾಡುವುದು. ಚುನಾವಣೆ ಸಮಯದಲ್ಲಿ ದನದ ಹೆಸರಿನಲ್ಲಿ ರಾಜಕೀಯ ಮಾಡುವುದು ಇದು ಬಿಜೆಪಿಯವರ ದನದ ರಾಜಕೀಯ ಎಂದು ಹೇಳಿದರು.

ಸುಳ್ಳು ಹೇಳುವುದಕ್ಕೆಂದೇ ಬಿಜೆಪಿ ಗ್ರಾಪಂ ಕಚೇರಿಮುಂದೆ ಪ್ರತಿಭಟನೆ ಮಾಡಿದೆ. ಫ್ರೀ ಬಸ್‌ನಲ್ಲಿ ಹತ್ತಿ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಸಿದ್ದರಾಮಯ್ಯಗೆ ಧಿಕ್ಕಾರ ಹಾಕಿ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿ, ಗೃಹಲಕ್ಷ್ಮಿಯ ಹಣವನ್ನು ಬ್ಯಾಂಕ್ ನಿಂದ ಡ್ರಾ ಮಾಡಿ ಬಿಜೆಪಿಯ ಮಹಿಳೆಯವರು ಮನೆಗೆ ಬಂದಿದ್ದಾರೆ ಇದು ಅವರ ಆತ್ಮ ಸಾಕ್ಷಿಗೆ ವಿರುದ್ದವಲ್ಲವೇ? ಪ್ರತಿಭಟನೆಗೆ ಹೋದ ಮಹಿಳೆಯರು ಈ ಬಗ್ಗೆ ಆಲೋಚನೆ ಮಾಡಬೇಕು ಎಂದು ಹೇಮನಾಥ ಶೆಟ್ಟಿ ಹೇಳಿದರು.


ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ಪ್ರವೀಣ್ ಚಂದ್ರ ಆಳ್ವ, ಮುರಳೀದರ್ ರೈ ಮಠಂತಬೆಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಕರೀಂ ಕುದ್ದುಪದವು, ಕೆದಿಲ ಗ್ರಾಪಂ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು. ಕೆದಿಲ ಉಸ್ತುವಾರಿ ಫಾರೂಕ್ ಬಾಯಬ್ಬೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here