ಕೆದಂಬಾಡಿ: ಬಿಜೆಪಿಯ ಸುಳ್ಳಿಗೆ ಉತ್ತರ – ಜನಜಾಗೃತಿ ಸಭೆ

0

ಬಿಜೆಪಿ ಜಾಯಮಾನವೇ ಸುಳ್ಳು ಹೇಳಿ ಜನರನ್ನು ಮೋಸಮಾಡುವುದು: ಕೃಷ್ಣಪ್ರಸಾದ್ ಆಳ್ವ

ಪುತ್ತೂರು: ಈ ದೇಶದಲ್ಲಿ ಬಿಜೆಪಿ ಉಳಿದಿರುವುದೇ ಸುಳ್ಳಿನ ಅಡಿಪಾಯದಲ್ಲಿ, ಅಧಿಕಾರಕ್ಕಾಗಿ ಸುಳ್ಳೇ ಹೇಳುವ ಮೂಲಕ ಜನರನ್ನು ಮೋಸಮಾಡುವುದು ಬಿಜೆಪಿಯ ಜಾಯಾಮಾನವಾಗಿದೆ ಎಂದು ಪುತ್ತೂರು ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹೇಳಿದರು. ಅವರು ಕೆದಂಬಾಡಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ನಡೆದ ಬಿಜೆಪಿ ಸುಳ್ಳುಗಳಿಗೆ ಉತ್ತರ ಜನಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪುತ್ತೂರಿನಲ್ಲಿ ಅಕ್ರಮ ಸಕ್ರಮ, ಹಕ್ಕು ಪತ್ರ ವಿತರಣೆ ಆಗುತ್ತಿಲ್ಲ ಎಂದು ಬಿಜೆಪಿ ಆರೋಪ ಮಾಡಿದ್ದಾರೆ. ಕಳೆದ 5 ವರ್ಷ ಇವರದ್ದೇ ಶಾಸಕರಿದ್ದರು, ಇವರು ಎಷ್ಟು ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡಿದ್ದಾರೆ? ಎಷ್ಟು ಮಂದಿಗೆ 94ಸಿ ಹಕ್ಕು ಪತ್ರ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಅಕ್ರಮ ಸಕ್ರಮದಲ್ಲಿ ಎಕ್ರೆಗೆ ಎರಡು ಲಕ್ಷ ವಸೂಲಿ ಮಾಡಿದ್ದರು. ಹಣ ಕೊಡದ ಬಡವರ ಜಾಗಕ್ಕೆ ಕುಮ್ಕಿ ಎಂದು ಬರೆಸಿ ವಂಚನೆ ಮಾಡಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮುಂದಿನ 25 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ:
ಶಾಸಕ ಅಶೋಕ್ ರೈ ಮಾತನಾಡಿ, ಬಿಜೆಪಿ ವಿರೋಧ ಪಕ್ಷವಾಗಿಯೇ ಇರಲಿದ್ದು ಮುಂದಿನ 25 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಲಿದೆ. ಪಂಚ ಗ್ಯಾರಂಟಿಗಳು ಕಾಂಗ್ರೆಸ್ ಗೆ ವರದಾನವಾಗಿದೆ ಇದನ್ನು ಸಹಿಸದ ಬಿಜೆಪಿ ಸುಳ್ಳು ಹೇಳುತ್ತಾ ತಿರುಗಾಡುತ್ತಿದೆ ಇದನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ರೇಶನ್ ಕಾರ್ಡು ರದ್ದು ಮಾಡಿದ್ದು ಬಿಜೆಪಿ:
ಜನರಿಗೆ ನೀಡಬೇಕಾಗಿದ್ದ ರೇಶನ್ ಕಾರ್ಡನ್ನು ಕೊಡದ ಹಾಗೆ ರದ್ದು ಮಾಡಿದ್ದು ಕಳೆದ ಬಿಜೆಪಿ ಸರಕಾರವಾಗಿದೆ. ಈಗ ಕಾಂಗ್ರೆಸ್ ಸರಕಾರ ರೇಶನ್ ಕಾರ್ಡು ಕೊಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಯಾವತ್ತೂ ಬಡವರಿಗೆ ಕೊಡುವ ಹಕ್ಕನ್ನು ಕಸಿಯುವುದೇ ಇಲ್ಲ. ಈಗ ರೇಶನ್ ಕಾರ್ಡು ಸಿಗದೇ ಇರಲು ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವೇ ಕಾರಣ ಎಂದು ಶಾಸಕರು ಹೇಳಿದರು. ಬಿಜೆಪಿ ರಾಜ್ಯದಲ್ಲಿ ಮುಳುಗುತ್ತಿದೆ. ಅಡಿಪಾಯವೇ ನಡುಗುತ್ತಿದೆ, ರಾಜ್ಯದಲ್ಲಿದ್ದ ಬಿಜೆಪಿ ದೊಡ್ಡ ನಾಯಕರು ಎಲ್ಲಿದ್ದಾರೆ ಎಂಬುದನ್ನು ಹುಡುಕುವ ಕೆಲಸ ಆಗಿದೆ. ಅವರೆಲ್ಲಾ ಮುಂದಿನ 25 ವರ್ಷ ಆರಾಮವಾಗಿ ಮನೆಯಲ್ಲೇ ಇರಲಿ ಎಂದು ವ್ಯಂಗ್ಯವಾಡಿದ ಶಾಸಕರು, ಮುಂದಿನ ಗ್ರಾ.ಪಂ ಚುನಾವಣೆ ವೇಳೆ ಬಿಜೆಪಿಯಿಂದ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು, ನಾಯಕರು, ಕಾಂಗ್ರೆಸ್ ಸೇರಲಿದ್ದಾರೆ. ಮುಂದೊಂದಿನ ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಸೇರ್ಪಡೆ ಸಮಾವೇಶ ನಡೆಯಲಿದೆ. ಬಿಜೆಪಿಯಿಂದ ಜನ ರೋಸಿದ್ದಾರೆ. ಸುಳ್ಳು ಹೇಳಿ ಜನರನ್ನು ಯಾಮಾರಿಸಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು.

ಕೇಂದ್ರ ಸರಕಾರ ಅನುದಾನ ನೀಡಲಿ:
ಮಳೆಯಿಂದ ಹಾನಿಗೊಳಗಾದ ಗ್ರಾಮದ ಹಲವು ಕಡೆಗಳಿಗೆ ಬಿಜೆಪಿಯವರು ಭೇಟಿ ನೀಡಿದ್ದಾರೆ. ಕೇವಲ ಭೇಟಿ ನೀಡಿದರೆ ಸಾಲದು, ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಅವರ ಮೂಲಕ ಪರಿಹಾರ ಕೊಡಿಸುವ ಕೆಲಸವನ್ನು ಮಾಡಬೇಕು. ರಾಜ್ಯದ ಕಾಂಗ್ರೆಸ್ ಸರಕಾರ ಮೊದಲ ಹಂತದ ಪರಿಹಾರವನ್ನು ನೀಡಿದೆ. ಮುಂದೆಯೂ ಜನರ ಜೊತೆ ನಾವಿದ್ದೇವೆ ಎಂದು ಶಾಸಕರು ಹೇಳಿದರು.
ಪಕ್ಷದ ಮುಖಂಡರಾದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ ಬೂಡಿಯಾರ್ ಪುರುಷೋತ್ತಮ ರೈ, ರವೀಂದ್ರ ನೆಕ್ಕಿಲು, ವಲಯ ಅಧ್ಯಕ್ಷ ಪುರಂದರ್ ರೈ , ಚಂದ್ರಪ್ರಭಾ ಗೌಡ, ಶರೂನ್ ಸಿಕ್ವೆರಾ, ಬೋಳೋಡಿ ಚಂದ್ರಹಾಸ ರೈ, ಪೂರ್ಣೇಶ್ ಭಂಡಾರಿ, ಹಬೀಬ್ ಕಣ್ಣೂರು, ಗ್ರಾಪಂ ಸದಸ್ಯ ಮಹಮ್ಮದಾಲಿ, ಮೆಲ್ವಿನ್ ಮೊಂತೆರೋ, ಮನೋಹರ್ ರೈ ಎಂಡೆಸಾಗು, ಹೈದರ್ ಗಟ್ಟಮನೆ, ರವಿಪ್ರಸಾದ್ ಶೆಟ್ಟಿ ಬನ್ನೂರು ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here