ಮಂಗಳೂರು-ವಿಜಯಪುರ ರೈಲು ಸಂಚಾರ ಖಾಯಂ- ಸಮಯ ಬದಲಾವಣೆ

0

ಮಂಗಳೂರು: ವಿಜಯಪುರ-ಮಂಗಳೂರು ರೈಲಿನ (ನಂ. 17377/17378) ಸಂಚಾರವನ್ನು ರೈಲ್ವೆ ಸಚಿವಾಲಯವು ಕಾಯಂಗೊಳಿಸಿದೆ. ಈ ಮೂಲಕ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಬಹುಕಾಲದ ಬೇಡಿಕೆಗೆ ಈಡೇರಿದೆ.


2019ರ ನ.11ರಂದು ಆರಂಭಗೊಂಡಿದ್ದ ಈ ರೈಲು ಪ್ರತಿದಿನ ತಾತ್ಕಾಲಿಕ ನೆಲೆಯಲ್ಲಿ ‘ಎಕ್ಸ್ ಪ್ರಸ್ ಸ್ಪೆಷಲ್’ ಆಗಿ ಆರಂಭದಲ್ಲಿ ಮಂಗಳೂರು ಜಂಕ್ಷನ್ ಮತ್ತು ವಿಜಯಪುರ ನಡುವೆ ಸಂಚರಿಸುತ್ತಿತ್ತು. ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಂಡು 2021ರ ಡಿಸೆಂಬರ್‌ನಲ್ಲಿ ಪುನರಾರಂಭಗೊಂಡಿತ್ತು. 2024ರಿಂದ ಮಂಗಳೂರು ಸೆಂಟ್ರಲ್-ವಿಜಯಪುರ ನಡುವೆ ಸಂಚರಿಸುತ್ತಿದೆ.


ರೈಲು ಸಂಚಾರ ತಾತ್ಕಾಲಿಕವಾಗಿದ್ದರಿಂದ ಈ ರೈಲಿನ ಸಂಚಾರದ ಅವಧಿಯನ್ನು ನಿಗದಿತ ದಿನಾಂಕದವರೆಗೆ ಮುಂದುವರೆಸಲಾಗುತ್ತಿತ್ತು. ಅದರಂತೆ ಜೂನ್ ಮೊದಲ ವಾರದಲ್ಲಿ 2026ರ ಜು.1ರವರೆಗೆ ವಿಸ್ತರಿಸಲಾಗಿತ್ತು. ಈಗ ಖಾಯಂಗೊಳಿಸಿ ಆದೇಶ ಹೊರಡಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ವೈದ್ಯಕೀಯ ಸೇವೆ ಪಡೆಯುವ ರೋಗಿಗಳು, ಶಿಕ್ಷಣ ಉದ್ದೇಶಗಳಿಗಾಗಿ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ದ.ಕ.ಸಂಸದ ಬ್ರಿಜೇಶ್ ಚೌಟ ಪ್ರತಿಕ್ರಿಯಿಸಿದ್ದಾರೆ.

ಸಮಯ ಬದಲಾವಣೆ
ಈ ಹಿಂದೆ ರೈಲು ಮಂಗಳೂರಿನಿಂದ ಮಧ್ಯಾಹ್ನ 2.35ಕ್ಕೆ ಹೊರಡುತ್ತಿತ್ತು. ಜೂನ್ ಮೊದಲ ವಾರದಲ್ಲಿ ಈ ಸಮಯವನ್ನು ಬದಲಾಯಿಸಿದ್ದು, ಜು.1ರಿಂದ ಅನ್ವಯವಾಗುವಂತೆ ಪ್ರತಿದಿನ ಸಂಜೆ 4.45ಕ್ಕೆ ರೈಲು ಮಂಗಳೂರಿನಿಂದ ಹೊರಡಲಿದೆ. ಸಂಜೆ 4.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ರಾತ್ರಿ 7ಕ್ಕೆ ಸುಬ್ರಹ್ಮಣ್ಯ ರೋಡ್, 10.30ಕ್ಕೆ ಹಾಸನ, 1.50ಕ್ಕೆ ದಾವಣಗೆರೆ, 3.02ಕ್ಕೆ ಹಾವೇರಿ, 4.50ಕ್ಕೆ ಹುಬ್ಬಳ್ಳಿ, 6.20ಕ್ಕೆ ಗದಗ, 7.58ಕ್ಕೆ ಬಾಗಲಕೋಟೆ, 11.15ಕ್ಕೆ ವಿಜಯಪುರ ತಲುಪಲಿದೆ. ವಿಜಯಪುರದಿಂದ ಅಪರಾಹ್ನ 3ಕ್ಕೆ ಹೊರಟು 4.40ಕ್ಕೆ ಬಾಗಲಕೋಟೆ, 7.30ಕ್ಕೆ ಗದಗ, 9.20ಕ್ಕೆ ಹುಬ್ಬಳ್ಳಿ, ಮರುದಿನ ಬೆಳಗ್ಗೆ 9.50ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ನೇರವಾಗಿ ಸಂಪರ್ಕಿಸುವ ಏಕೈಕ ರೈಲು ಇದಾಗಿದ್ದು ಉತ್ತರ ಕರ್ನಾಟಕದಿಂದ ಮಂಗಳೂರಿಗೆ ಚಿಕಿತ್ಸೆಗೆ ಬರುವವರಿಗೆ, ವಿದ್ಯಾರ್ಥಿಗಳಿಗೆ, ಇತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

LEAVE A REPLY

Please enter your comment!
Please enter your name here