ಪತ್ರಿಕೋದ್ಯಮವನ್ನು “ಪ್ರಜಾಪ್ರಭುತ್ವದ ಕಾವಲು ನಾಯಿ” ಎಂದು ವ್ಯಾಖ್ಯಾನವನ್ನು ಮಾಡಲಾಗಿದೆ. ಪ್ರಜಾಪ್ರಭುತ್ವವನ್ನು ಗೌರವಿಸುವುದರೊಂದಿಗೆ ಪತ್ರಿಕಾ ಸಂಹಿತೆಗಳನ್ನು ಪಾಲಿಸಿಕೊಂಡು ಸಮಾಜದ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಪತ್ರಿಕೋದ್ಯಮದ ಜವಾಬ್ದಾರಿ ಅತ್ಯಂತ ಗುರುತರವಾದುದು. ಪತ್ರಿಕೆಗಳು ಇಂದು ಜನ ಜೀವನದ ಒಂದು ಪ್ರತಿಬಿಂಬವೇ ಸರಿ. ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಸಮಾಜದಲ್ಲಿ ಸಂಕಷ್ಟಕ್ಕೀಡಾದವರ ಧ್ವನಿಯಾಗುವುದೇ ಪತ್ರಿಕೆಗಳ ಮೂಲ ಗುರಿ.
ಆದರೆ ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇಂದು ಮಾಧ್ಯಮಗಳು ಅದೆಷ್ಟು ಮುಂದುವರೆದಿದೆ ಎಂದರೆ ಇಂದು ಪ್ರತಿಯೊಬ್ಬರೂ ಕೂಡಾ ಮಾಹಿತಿ ಯುಗದ ತುತ್ತ ತುದಿಯಲ್ಲಿದ್ದೇವೆ.ಆದರೆ ಕ್ಷಣ ಕ್ಷಣಕ್ಕೂ ಸಿಗುವ ಮಾಹಿತಿಗಳು ಅದೆಷ್ಟು ಸತ್ಯಾಧಾರಿತವಾಗಿದೆ ಎಂಬುವುದನ್ನು ಅರ್ಥೈಸಿಕೊಳ್ಳುವುದು ಸಧ್ಯದ ದೊಡ್ಡ ಸವಾಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸುಳ್ಳು ಸುದ್ದಿಗಳು ಇಂದು ಪತ್ರಿಕೋದ್ಯಮ ದ ಮೂಲ ಆಶಯವನ್ನು ಕದಡುತ್ತಿರುವುದು ಖೇದಕರ. ಕ್ಷಣದಿಂದ ಕ್ಷಣಕ್ಕೆ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮಗಳು ಸಮಾಜದ ಸ್ವಾಸ್ಥ್ಯ ವನ್ನು ಹಾಳುಮಾಡುತ್ತಿದೆ ಹಾಗೂ ಇಂತಹ ಮಾಧ್ಯಮಗಳಿಂದ ಧನಾತ್ಮಕ ವಿಚಾರಗಳಿಗಿಂತ ಋಣಾತ್ಮಕ ವಿಚಾರಗಳು ಕ್ಷಣಾರ್ಧದಲ್ಲಿ ಹರಡುತ್ತಿರುವುದು ವಿಷಾದನೀಯವಾಗಿದೆ.
ಜೊತೆಗೆ ಇಂದು ಪತ್ರಿಕೆ ಓದುವವರ ಸಂಖ್ಯೆ ಅಕ್ಷರಶಃ ಕುಸಿದಿರುವುದು ಇನ್ನೊಂದು ದುಖಕರವಾದ ವಿಚಾರ. ಪತ್ರಿಕೆಗಳಲ್ಲಿ ಮೂಡಿಬರುವ ವಿಚಾರಗಳನ್ನು ಕೂಲಂಕುಷವಾಗಿ ತಾಳ್ಮೆಯಿಟ್ಟು ಓದುವ ವರ್ಗ ಇಂದು ಬೆರಳೆಣಿಕೆಯಷ್ಟೇ ಇವೆ. ಇವು ಆತಂಕಕಾರಿ ವಿಚಾರಗಳೂ ಹೌದು.ಯಾಕೆಂದರೆ ಇಂದಿನ ಯುವ ಜನತೆ ಸಾಮಾಜಿಕ ಮಾಧ್ಯಮಗಳಲ್ಲಿ ಮೂಡಿಬರುವ ಸುದ್ದಿಯ ಮೂಲವನ್ನು ಪರಿಶೀಲಿಸುವ ತಾಳ್ಮೆಯಿಲ್ಲದೆ ಏಕಾಏಕಿ ಜನರ ಮಧ್ಯೆ ಸುಳ್ಳು ಸುದ್ದಿಯನ್ನು ಹರಡಿಸಿ ಸಮಾಜದ ಶಾಂತಿಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡುತ್ತಾರೆ.ಆದರೆ ಪತ್ರಿಕೆಗಳು ಇಂದಿಗೂ ಕೂಡಾ ಈ ವಿಚಾರದಲ್ಲಿ ಅತ್ಯಂತ ಜಾಗರೂಕವಾಗಿಕಾರ್ಯನಿರ್ವಹಿಸಿದರೂ ಕೂಡಾ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕ್ಷೀಣಗೊಂಡಿದ್ದು ದುರಂತವೇ ಸರಿ.
ಇಂದು ಮಾಧ್ಯಮಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಬೇಕಾಗಿದೆ. ಮಾಧ್ಯಮಗಳು ಎಂದೆಂದಿಗೂ ಪಕ್ಷ, ವ್ಯಕ್ತಿ ಅಥವಾ ಧರ್ಮವನ್ನು ಆಧರಿಸಿ ಮಾಹಿತಿಗಳನ್ನು ಭಿತ್ತರಿಸಬಾರದು ಬದಲಾಗಿ ಜನಪರ ಕಾಳಜಿಯಿಂದ ಹಾಗೂ ಜವಾಬ್ದಾರಿಯಿಂದ ತನ್ನ ಕಾರ್ಯವನ್ನು ನಿರ್ವಹಿಸಿದರೆ ಪತ್ರಿಕೋದ್ಯಮ ದ ಮೂಲ ಆಶಯಗಳಿಗೆ ಎಂದೆಂದಿಗೂ ಧಕ್ಕೆ ಬಾರದು. ಮಾಹಿತಿಗಳ ಮೂಲವನ್ನು ಪರಿಶೀಲಿಸಿ ಮಾಧ್ಯಮಗಳು ಸುದ್ದಿ ಬಿತ್ತರಿಸಿದರೆ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಗೊಂದಲಗಳನ್ನು, ಊಹಾಪೋಹಗಳ ಮೂಲಕ ನಡೆಯುವ ಸಮಸ್ಯೆಗಳನ್ನು ಬಗೆಹರಿಸಬಹುದು.ಯಾಕೆಂದರೆ ಪತ್ರಿಕೆಗಳು ಜನರ ಬಿಂಬವಾಗಿ ಕಾರ್ಯ ನಿರ್ವಹಿಸುವುದು ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯಕವಾಗಿದೆ.
ತಂತ್ರಜ್ಞಾನಗಳು ಎಷ್ಟೇ ಬದಲಾದರೂ ಪತ್ರಿಕೋದ್ಯಮ ದ ಮೂಲ ಸ್ವರೂಪ, ಉದ್ದೇಶಗಳು ಎಂದೆಂದಿಗೂ ಬದಲಾಗಬಾರದು.ಆಗ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇಯ ಅಂಗ ಎಂದು ಪರಿಗಣಿಸಬಹುದು.ಬದಲಾಗಿ ಮಾಧ್ಯಮಗಳು ಸಮಾಜದ ದಾರಿ ತಪ್ಪಿಸುವ ಕೆಲಸವನ್ನು ಮಾಡಿದರೆ ಈ ವ್ಯಾಖ್ಯಾನಗಳು ಅರ್ಥ ಹೀನವಾಗಬಹುದು.
ಸತ್ಯ, ನಿಖರತೆ, ವಸ್ತುನಿಷ್ಠತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ಹೊಣೆಗಾರಿಕೆ ಎನ್ನುವ ಐದು ತತ್ತ್ವಗಳನ್ನು ಎಲ್ಲಾ ಮಾಧ್ಯಮಗಳು ಚಾಚುತಪ್ಪದೆ ಪಾಲಿಸಿದರೆ ಸಮಾಜವನ್ನು ನಾವೆಲ್ಲರೂ ಅತ್ಯಂತ ಜತನದಿಂದ ಕಾಪಿಟ್ಟುಕೊಳ್ಳಬಹುದು ಎನ್ನುತ್ತಾ ಎಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು

ಭವ್ಯಾ.ಪಿ.ಆರ್ ನಿಡ್ಪಳ್ಳಿ
ಮುಖ್ಯಸ್ಥರು
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು.