ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಮುಕ್ತ ಘಟಕ ಪಾಪೆಮಜಲು ಇದರ ಜಂಟಿ ಆಶ್ರಯದಲ್ಲಿ ಒಂದು ದಿನದ ನೇಜಿ ನೆಡುವ ಕಾರ್ಯಕ್ರಮ ಮತ್ತು ಕೆಸರು ಗದ್ದೆಯು ಜೂ.29 ರಂದು ಬಪ್ಪಪುಂಡೆಲುನಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯಧ್ಯಕ್ಷ ಇಕ್ಬಾಲ್ ಹುಸೇನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಸರದೊಡನೆ ಸಂಬಂಧ ಅಗತ್ಯ. ಇಂದಿನ ವಿದ್ಯಾರ್ಥಿಗಳನ್ನು ಈ ರೀತಿ ತೊಡಗಿಸಿಕೊಂಡಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಕಾಳಜಿ ಮೂಡಲು ಸಾಧ್ಯ ಎಂದರು.

ಫಿಲೋಮಿನಾ ಪ ಪೂ ಕಾಲೇಜಿನ ಉಪನ್ಯಾಸಕ ಭರತ್ ಕುಮಾರ್ ಮಾತನಾಡಿ, ಮನೆಯಲ್ಲಿ ಗದ್ದೆ ಮತ್ತು ದನ ಇದ್ದ ವಿದ್ಯಾರ್ಥಿಗಳು ಹೆಚ್ಚು ಶಿಸ್ತಿನಿಂದ ಇರುತ್ತಾರೆ. ಮುಂದಿನ ದಿನಗಳಲ್ಲಿ ಗೋವುಗಳ ಸಂರಕ್ಷಣೆಗೆ ನಿಗಮಗಳು ಬರಬಹುದು. ಪ್ರತಿ ದಿವಸ ಎಲ್ಲಾ ಮನೆಗಳಿಗೆ ಒಂದು ಲೀಟರ್ ಹಾಲು, ಒಂದು ಕೇಜಿ ಅಕ್ಕಿ ಒಳ್ಳೆಯ ಗುಣಮಟ್ಟದಲ್ಲಿ ದೊರೆಯಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಹೊನ್ನಪ್ಪ ನಾಯ್ಕ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ವೇದಿಕೆಯಲ್ಲಿ ಮೆಬಲ್ ಡಿ ಸೋಜಾ ಎಲೆಮಲೆ, ಪಾಪೆಮಜಲು ಹಾಗೂ ಎಲೆಮಲೆ ಶಾಲೆಯ ಶಿಕ್ಷಕರು ಮತ್ತು ಸುಬ್ರಹ್ಮಣ್ಯ ರೇಂಜರ್ ಅಧಿಕಾರಿ ಮಾಧವ ಮಂಗಳೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ವರ್ಗದವರು ಹಾಗೂ ಪಾಪೆ ಮಜಲು ಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಿವೇಕಾನಂದ ಪದವಿ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ಪಾಲ್ಗೊಂಡರು.