ಬಿಜೆಪಿಯವರು ಭ್ರಷ್ಟಾಚಾರ ಮಾಡಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಲಿ, ನಾನು ರೆಡಿ: ಶಾಸಕ ಅಶೋಕ್ ರೈ
ಪುತ್ತೂರು: ಕಳೆದ ಅವಧಿಯಲ್ಲಿ ಬಿಜೆಪಿ ಶಾಸಕರಿದ್ದಾಗ ಅಕ್ರಮ ಸಕ್ರಮ, 94 ಸಿ, ಸಿಸಿ ಕೊಡುವಲ್ಲಿ ಭೃಷ್ಟಾಚಾರ ಮಾಡಿಲ್ಲ ಎಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಮುಂದೆ ಪ್ರಮಾಣ ಮಾಡಲಿ ನಾನು ರೆಡಿಯಾಗಿದ್ದೇನೆ. ಪ್ರಮಾಣಕ್ಕೆ ಬಿಜೆಪಿಯವರು ಸಿದ್ದರಿದ್ದಾರ ಎಂದು ಶಾಸಕ ಅಶೋಕ್ ರೈ ಸವಾಲು ಹಾಕಿದರು. ಅವರು ಇಡ್ಕಿದುನಲ್ಲಿ ನಡೆದ ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಬಿಜೆಪಿಯವರು ಎಷ್ಟೋ ವರ್ಷದಿಂದ ಸುಳ್ಳು ಹೇಳಿ ಜನರನ್ನ ಮಂಗ ಮಾಡಿ ರಾಜಕೀಯ ಲಾಭ ಪಡೆಯುತ್ತಿದ್ದರು ಆದರೆ ಇನ್ನು ಬಿಜೆಪಿಗರ ಸುಳ್ಳು ನಡೆಯುವುದಿಲ್ಲ. ಪುತ್ತೂರಿನಲ್ಲಿ ಇವರ ಸುಳ್ಳಿನ ವಿರುದ್ದ ಯುದ್ದ ಆರಂಭ ಮಾಡಿದ್ದೇವೆ ಇದು ರಾಜ್ಯಾದ್ಯಂತ ನಡೆಯಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಸುಳ್ಳನ್ನೇ ಬಂಡವಾಳ ಮಾಡಿಕೊಂಡು ಎಷ್ಟು ವರ್ಷದಿಂದ ರಾಜಕೀಯ ಮಾಡುತ್ತಿದ್ದಾರೆ. ಶೇ.5 ರಷ್ಟು ಜನ ಇವರ ಸುಳ್ಳನ್ನು ನಂಬಿ ಬಿಡ್ತಾರೆ. ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ಬಿಜೆಪಿ ಬಂಡವಾಳವನ್ನು ಬಯಲು ಮಾಡಿ ತಿಳಿಸುತ್ತೇವೆ ಎಂದು ಹೇಳಿದರು.
ಗ್ಯಾಸ್ ಬೆಲೆ ಏರಿಕೆ ಮಾಡಿದ್ದು ಸಿದ್ದರಾಮಯ್ಯರಂತೆ:
ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಕೇಂದ್ರದ ಬಿಜೆಪಿ ಸರಕಾರ. ಆದರೆ ಬಿಜೆಪಿಯವರು ಇದನ್ನು ಕಾಂಗ್ರೆಸ್ ಏರಿಕೆ ಮಾಡಿದ್ದು ಎಂದು ಜನರ ನಡುವೆ ಸುಳ್ಳನ್ನು ತೇಲಿ ಬಿಟ್ಟಿದ್ದಾರೆ. ಆದರೆ ಜನ ಈಗ ವಿದ್ಯಾವಂತರಾಗಿದ್ದು ಬಿಜೆಪಿಯ ಸುಳ್ಳನ್ನು ತಿಳಿದುಕೊಂಡಿದ್ದಾರೆ ಆದರೂ ಜನತೆಗೆ ತಿಳಿಸುವುದು ನಮ್ಮ ಕರ್ತವ್ಯ ಎಂಬ ನಿಟ್ಟಿನಲ್ಲಿ ಅದನ್ನು ಜನರ ಮುಂದೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಶಾಸಕರು ಹೇಳಿದರು.
ಗ್ರಾಪಂ ನ್ನು ಹಾಳು ಮಾಡಿದ್ದೇ ಬಿಜೆಪಿ:
ಮನೆ ಕಟ್ಟುವಾಗ 9/11 ಅಗತ್ಯವಾಗಿ ಬೇಕಾಗಿದೆ ಅದು ಗ್ರಾಪಂ ಮೂಲಕ ಆಗಬೇಕು ಎಂದು ಈ ಹಿಂದೆ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಗ್ರಾಪಂಗೆ ಅಧಿಕಾರ ನೀಡಿತ್ತು. ಆದರೆ ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ 9/11 ಖಾತೆಯನ್ನು ಗ್ರಾ.ಪಂ. ನಿಂದ ತೆಗೆದು ಹಾಕಿ ಪುಡಾಕ್ಕೆ ವರ್ಗಾವಣೆ ಮಾಡಿತ್ತು. ಆ ಮೂಲಕ ಬಡವರ ಮೇಲೆ ಪ್ರಹಾರ ನಡೆಸಿದೆ. ಗ್ರಾ.ಪಂ. ನ ಬಹುತೇಕ ಅಧಿಕಾರವನ್ನು ಕಸಿದದ್ದು ಬಿಜೆಪಿ ಸರಕಾರ. ಬಿಜೆಪಿ ಗ್ರಾ.ಪಂ. ಗಳನ್ನು ಲಗಾಡಿ ಮಾಡಿದ್ದಾರೆ ಎಂದು ಅಶೋಕ್ ರೈ ಹೇಳಿದರು.
ಕಾಂಗ್ರೆಸ್ ಸೇರಲು ಬಿಜೆಪಿ ನಾಯಕರು ತುದಿಗಾಲಲ್ಲಿದ್ದಾರೆ:
ರಾಜ್ಯದ ಬಿಜೆಪಿಯ ಬಹುತೇಕ ಹಿರಿಯ ನಾಯಕರು ಮೂಲೆ ಗುಂಪಾಗಿದ್ದಾರೆ ಅವರೆಲ್ಲಾ ಕಾಂಗ್ರೆಸ್ ಸೇರಲು ತುದಿಗಾಲಲ್ಲಿದ್ದಾರೆ. ಆದರೆ ಕುಳಿತುಕೊಳ್ಳಿಸಲು ಕುರ್ಚಿ ಖಾಲಿ ಇಲ್ಲದ ಕಾರಣ ಸ್ವಲ್ಪ ತಡವಾಗಿದೆ.ಮುಂದಿನ 25 ವರ್ಷಗಳ ಕಾಲ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ಗೊತ್ತಾಗಿದೆ. ಆ ಕಾರಣಕ್ಕೆ ಮಹಾ ಸುಳ್ಳನ್ನು ಬಿಡುತ್ತಿದ್ದಾರೆ ಎಂದು ಅಶೋಕ್ ರೈ ವ್ಯಂಗ್ಯವಾಡಿದರು.
ಶಾಸಕರ ಅಭಿವೃದ್ದಿ ಕೆಲಸಕ್ಕೆ ಕೈ ಜೋಡಿಸಿ: ಎಂ ಎಸ್ ಮಹಮ್ಮದ್
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ರವರು ಮಾತನಾಡಿ ಜಿಲ್ಲೆಯಲ್ಲಿರುವ ಬಿಜೆಪಿ ಶಾಸಕರು ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಅಭಿವೃದ್ದಿ ಬೇಕಿಲ್ಲ, ಶಾಂತಿ ಕದಡಿದರೆ ಲಾಭವಾಗುತ್ತದೆ ಎಂಬ ಭಾವನೆ ಅವರಲ್ಲಿ ಮನೆ ಮಾಡಿದೆ. ಪುತ್ತೂರು ಶಾಸಕರು ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದಾರೆ ಇದನ್ನು ಕಂಡು ಸಹಿಸಲು ಬಿಜೆಪಿಯವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಈ ಕಾರಣಕ್ಕೆ ಸುಳ್ಳಿನ ಸಭೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಇಂದು ಬಡವರು ಮೂರು ಹೊತ್ತು ಊಟ ಮಾಡುತ್ತಿದ್ದರೆ ಅದಕ್ಕೆ ದೇಶವನ್ನಾಳಿದ ಕಾಂಗ್ರೆಸ್ ಸರಕಾರ ಕಾರಣವಾಗಿದೆ.ಇಂದು ಪಂಚ ಗ್ಯಾರಂಟಿಗಳನ್ನು ಜನ ಸ್ಬೀಕರಿಸಿದ್ದಾರೆ,ನೆಮ್ಮದಿಯ ಜೀವನ ಮಾಡಿವಂತಾಗಿದೆ ಎಂದು ಹೇಳಿದರು.
ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆ
ಕಾರ್ಯಕ್ರಮದಲ್ಲಿ ಇಡ್ಕಿದು ಗ್ರಾಮದ ಬಿಜೆಪಿ ಸಕ್ರೀಯ ಕಾರ್ಯಕರ್ತ ಚೇತನ್ ಗೌಡ ರವರು ಶಾಸಕ ಅಶೋಕ್ ರೈ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪ್ರವೀಣ್ ಚಂದ್ರ ಆಳ್ವ, ಡಾ.ರಾಜಾರಾಙ ಕೆ ಬಿ, ಮುರಳೀಧರ್ ರೈ ಮಟಂತಬೆಟ್ಟು, ಪ್ರವೀಣ್ ಶೆಟ್ಟಿ ಅಳಕೆಮಜಲು, ನಾಸಿರ್ ಕೋಲ್ಪೆ, ಕರೀಂ ಕುದ್ದುಪದವು, ಮೋಹನ್ ಗುರ್ಜಿನಡ್ಕ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಫ್, ಕೇಶವ ನಾಯ್ಕ, ಕುಸುಮಲತಾ ಶೆಟ್ಟಿ, ಕೇಶವ ಭಟ್ ಉಪಸ್ಥಿತರಿದ್ದರು.