ಜಾತಿ ಸಂಘಟನೆಯ ಮೂಲಕ ರಾಷ್ಟ್ರ ಸಂಘಟನೆ ಮಾಡಬೇಕು: ದುರ್ಗಾಪ್ರಸಾದ್ ರೈ
ಹಿರೇಬಂಡಾಡಿ: ಬಂಟರ ಸಂಘ ಹಿರೆಬಂಡಾಡಿ ಇದರ ವತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಸ್ವಜಾತಿಯ ಪ್ರತಿಭಾನ್ವಿತ ಮಕ್ಕಳನ್ನು ಪಾಲೆತ್ತಡಿ ಸಮುದಾಯ ಭವನದಲ್ಲಿ ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದುರ್ಗಾಪ್ರಸಾದ್ ರೈ ಅವರು ಮಾತನಾಡಿ, ಹಿರೇಬಂಡಾಡಿ ಗ್ರಾಮ ಸಮಿತಿಯ ಚಟುವಟಿಕೆಗಳಿಗೆ ಮೆಚ್ಚುಗೆ ಸೂಚಿಸಿದರು. ಜಾತಿ ಸಂಘಟನೆಗಳು ಸಮಾಜದ ಕಲ್ಯಾಣಕ್ಕಾಗಿ ದುಡಿಯಬೇಕು. ಎಲ್ಲಾ ಸಮಾಜದ ಸದಸ್ಯರನ್ನು ಗೌರವಿಸುತ್ತಾ ರಾಷ್ಟ್ರ ಸಂಘಟನೆ ಮಾಡಬೇಕು ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ರವೀಂದ್ರ ದರ್ಬೆ ಸ್ವಾಗತಿಸಿ ಮಾತನಾಡಿ, ಮುಂದಿನ ದಿವಸಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಲು ಕರೆ ನೀಡಿದರು.
ವಿದ್ಯಾರ್ಥಿಗಳಿಗೆ ಸನ್ಮಾನ:
ಎಸ್ಎಸ್ಎಲ್ಸಿಯಲ್ಲಿ ಶೇ.94ಅಂಕ ಗಳಿಸಿದ ಪಡ್ಯೂಟ್ಟು ನಿವಾಸಿ ಯತೀಶ್ ಶೆಟ್ಟಿ ಹಾಗೂ ರಕ್ಷ ದಂಪತಿಯ ಪುತ್ರ ಅಮೋಘ ವೈ. ಶೆಟ್ಟಿ, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.96 ಅಂಕ ಪಡೆದ ಎರ್ಪೆ ನಿವಾಸಿ ಸದಾಶಿವ ಶೆಟ್ಟಿ ಹಾಗೂ ಸ್ಮಿತಾ ದಂಪತಿಯ ಪುತ್ರ ಸಾದ್ವಿತ್ ಶೆಟ್ಟಿ, ಶೇ 98.6 ಅಂಕ ಪಡೆದ ಕೆಮ್ಮಾರ ನಿವಾಸಿ ಅರವಿಂದ ಭಂಡಾರಿ ಹಾಗೂ ದೀಪಾರವರ ಪುತ್ರಿ ಅಧಿತಿ ಭಂಡಾರಿಯವರನ್ನು ಸನ್ಮಾನಿಸಲಾಯಿತು.

ನುಡಿನಮನ:
ಇತ್ತೀಚಿಗೆ ನಿಧನರಾದ ಕೆಮ್ಮಾರಗುತ್ತು ಸದಾನಂದ ಶೆಟ್ಟಿಯವರಿಗೆ ಸಭೆಯಲ್ಲಿ ನುಡಿನಮನ ಸಲ್ಲಿಸಲಾಯಿತು. ಬೆಳ್ಳಿಪ್ಪಾಡಿ ಪ್ರಕಾಶ್ ರೈಯವರು ನುಡಿನಮನ ಸಲ್ಲಿಸಿ, ಮೃತರ ಗುಣಗಾನ ಮಾಡಿದರು.
ಸಂಘದ ಗೌರವ ಸಲಹೆಗಾರರಾದ ನಿತ್ಯಾನಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನುರಾಧ ಶೆಟ್ಟಿ ವಂದಿಸಿದರು. ಸತೀಶ ಹೆನ್ನಾಳ ನಿರೂಪಿಸಿದರು. ಆದ್ಯಪುರಂದರ ಪ್ರಾರ್ಥಿಸಿದರು.