ಹಿಂದೂ ನಾವೆಲ್ಲ ಒಂದು ಎಂಬ ಸ್ಲೋಗನ್ ವೇದಿಕೆಯ ರಾಜಕೀಯಕ್ಕೆ ಮಾತ್ರ – ಮೂನಿಶ್ ಅಲಿ
ಪುತ್ತೂರು: ಬಿಜೆಪಿ ಮುಖಂಡರೋರ್ವರ ಪುತ್ರನಿಂದ ವಂಚನೆ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಜು.2 ರಂದು ಪುತ್ತೂರು ಎಸ್ ಡಿ ಪಿ ಐ ವತಿಯಿಂದ ಪುತ್ತೂರು ನಗರಸಭೆಯ ಎದುರು ಪ್ರತಿಭಟನೆ ನಡೆಯಿತು.

ಹಿಂದು ನಾವೆಲ್ಲ ಒಂದು ಎಂಬ ಸ್ಲೋಗನ್ ವೇದಿಕೆಯ ರಾಜಕೀಯಕ್ಕೆ ಮಾತ್ರ :
ಎಸ್ ಡಿ ಪಿ ಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮತ್ತು ಬಂಟ್ವಾಳ ಪುರಸಭೆ ಉಪಾಧ್ಯಕ್ಷ ಮೂನಿಶ್ ಅಲಿ ಬಂಟ್ವಾಳ ಅವರು ಮಾತನಾಡಿ, ದಕ್ಷಿಣ ಕನ್ನಡ ಸಂಘ ಪರಿವಾರದ ಕೇಂದ್ರ ಭಯವನ್ನು ಉತ್ಪಾದಿಸುವ ಘಟಕ ಇದಾಗಿದೆ. ಇಲ್ಲಿ ಹಿಂದು ನಾವೆಲ್ಲ ಒಂದು ಎಂಬ ಸ್ಲೋಗನ್ ವೇದಿಕೆಯ ರಾಜಕೀಯಕ್ಕೆ ಮಾತ್ರ ಎಂದ ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವುದು, ರಾಜಕೀಯಕ್ಕಾಗಿ ಹಿಂದುಗಳ ಮನಸ್ಸಿನಲ್ಲಿ ದ್ವೇಷ ಹುಟ್ಡಿಸುವುದು ಸಂಘಪರಿವಾರದ ಕೆಲಸವಾಗಿದೆ. ಆದರೆ ಓರ್ವ ತಾಯಿಗೆ ನ್ಯಾಯ ಕೊಡಲು ಆಗದ ಹಿಂದು ಸಮಾಜದ ಮುಖಂಡರು ಇವರ ಅಸಲಿಯತ್ತು ಈಗ ಗೊತ್ತಾಗಿದೆ. ಇಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುವ ಒಂದು ಹಿಂದು ಸಂಘಟನೆಯೂ ಇಲ್ಲ. ಜಾತಿ ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ಇವರದಾಗಿದೆ ಎಂದರು.
ಹಿಂದು ಮುಖಂಡ ಪ್ರಭಾಕರ ಭಟ್ ಮಂಡ್ಯಕ್ಕೆ ಸಂತ್ರಸ್ತೆಯ ಪರವಾಗಿ ಭಾಷಣ ಮಾಡಲು ಹೋಗುತ್ತಾರೆ. ಆದರೆ ಊರಲ್ಲೆ ನಡೆದ ಘಟನೆಯ ಬಗ್ಗೆ ಖಂಡನೆ ನೀಡಲು ಅಗುವುದಿಲ್ಲ. ಹಿಂದುತ್ವವಾದಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇವತ್ತು ಯಾವ ಮಂಚದ ಅಡಿಯಲ್ಲಿ ಮಲಗಿದ್ದಾರೆ ? ಇದೇ ಊರಿನ ಶೋಭಾ ಕರಂದ್ಲಾಜೆ ಎಲ್ಲಿದ್ದಾರೆ.? ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಸಂಜೀವ ಮಠಂದೂರು ರವರು ಯಾಕೆ ಸಂತ್ರಸ್ತೆಯ ಪರವಾಗಿ ನಿಲ್ಲುವುದಿಲ್ಲ. ಇದರ ಜೊತೆಗೆ ಪೊಲೀಸರು ಆರೋಪಿಯನ್ನು ಯಾಕೆ ಬಂಧಿಸುತ್ತಿಲ್ಲ, ಘಟನೆ ನಡೆದ ಮನೆಗೆ ಪರಿಶೀಲನೆ ಹೋಗುತ್ತಿಲ್ಲ. ಈ ಘಟನೆಯಲ್ಲಿ ನಮ್ಮ ವಿಷಯ ಬಿಡಿ ನಮ್ಮನ್ನು ಬ್ಯಾರಿಗಳು ಎಂದು ಹೇಳುತ್ತಾರೆ ಎಂದ ಅವರು ಇವತ್ತು ಸಂತ್ರಸ್ತೆಯ ನ್ಯಾಯದ ಹೋರಾಟಕ್ಕೆ ಎಸ್ ಡಿಪಿಐ ಪುತ್ತೂರು ನಾಯಕರು ಇದ್ದಾರೆ ಎಂದರು.
ನನಗೆ ನ್ಯಾಯ ಸಿಗದಾಗ ನಾನು ನನಗೆ ಬೇಕಾದ ಸಂಘಟನೆಗೆ ಜೊತೆ ಬಂದಿದ್ದೇನೆ:
ಸಂತ್ರಸ್ತೆಯ ತಾಯಿ ನಮಿತಾ ಅವರು ಮಾತನಾಡಿ, ನಾನು ಎಲ್ಲಾ ಹಿಂದು ಮುಖಂಡರಲ್ಲಿ ಮಾತನಾಡಿದ್ದೇನೆ. ಎಲ್ಲರು ಮಗುವನ್ನು ತೆಗೆಸಿ ಎಂದು ಹೇಳಿದ್ದಾರೆ ಹೊರತು ಮದುವೆ ಮಾಡಿ ಕೊಡಬೇಕೆಂದು ಯಾರು ಹೇಳಿಲ್ಲ. ಇವತ್ತು ಹುಡುಗನನ್ನು ಅವರ ಅಪ್ಪನೆ ಅಡಗಿಸಿಟ್ಟಿದ್ದಾರೆ. ನನಗೆ ನ್ಯಾಯ ಸಿಗದಾಗ ನಾನು ನನಗೆ ಬೇಕಾದ ಸಂಘಟನೆಗೆ ಜೊತೆ ಬಂದಿದ್ದೇನೆ. ನನ್ನ ಮಗಳ ಮಗುವಿಗೆ ತಂದೆಯ ಸ್ಥಾನ ಕೊಡಿಸಿ, ಹುಡಗನೊಂದಿಗೆ ರಿಜಿಸ್ಟ್ರರ್ ಮ್ಯಾರೇಜ್ ಆಗಬೇಕು ಎಂದು ಪಟ್ಟು ಹಿಡಿದರು.
ಎಸ್ ಡಿ ಪಿ ಐ ಜಿಲ್ಲಾ ಸದಸ್ಯೆ ಜೀನತ್ ಬಂಟ್ವಾಳ ಅವರು ಮಾತನಾಡಿ, ವಿಚಿತ್ರವಾದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಭಾರತದ ಪ್ರಜೆ ಎಂದು ಹೇಳಿ ಅನ್ಯಾಯದ ವಿಷಯ ಬಂದಾಗ ಒಂದು ವರ್ಗವನ್ನು, ಧರ್ಮವನ್ನು ಗುರಿಯಾಗಿಸಿ ನ್ಯಾಯ ಕೊಡುವುದು. ಅತ್ಯಾಚಾರ ಎಸಗಿದವನು ಮೇಲ್ವರ್ಗ,ಬಿಜೆಪಿ ಮುಖಂಡನಾಗಿದ್ದರೆ ಅಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುವುದಿಲ್ಲ.ಅದೇ ಯಾವುದೋ ಅಬ್ದುಲ್ಲ, ಜೋಸಫ್ ಆಗಿದ್ದಾರೆ. ಶೋಭಕ್ಕ ಬೆಂಕಿ ಹಚ್ಚುತ್ತಿದ್ದರು. ಇವತ್ತು ಅವರ ಪತ್ತೆ ಇಲ್ಲ ಎಂದರು. ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಪ್ ಬಾವು ಅಧ್ಯಕ್ಷತೆ ವಹಿಸಿದರು. ತಾಜುದ್ದಿನ್ ಸಾಲ್ಮರ ಮಾತನಾಡಿದರು. ನಗರಸಭೆ ಸದಸ್ಯೆ ಪಾತಿಮಾತ್ ಝೋರಾ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಉಸ್ಮಾನ್ ಎ ಕೆ ನಿರೂಪಿಸಿದರು.