ಪುತ್ತೂರು: ಬೀರಮಲೆ ಬೆಟ್ಟಕ್ಕೆ ಸುತ್ತಾಡಲು ಬಂದ ಜೋಡಿಗೆ ತಂಡವೊಂದು ಕಿರುಕುಳ ನೀಡಿದ ಘಟನೆ ಜೂ.5ರ ಸಂಜೆ ನಡೆದಿದ್ದು, ಯುವಕರ ತಂಡ ಜೋಡಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗನ ತಂದೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನೀಡಿದ ದೂರಿನಲ್ಲಿ ಅಪ್ರಾಪ್ತ ಪ್ರಾಯದ ಮಗನು, ಮೋಟಾರು ಸೈಕಲ್ ನಲ್ಲಿ ಜು.5ರಂದು ರಂದು ಮಧ್ಯಾಹ್ನ ಸಮಯ, ಆತನ ಪರಿಚಯದ ಬಾಲಕಿಯೊಂದಿಗೆ ಪುತ್ತೂರು ಕಸ್ಬಾ ಗ್ರಾಮದ ಬೀರಮಲೆ ಬೆಟ್ಟ ಎಂಬಲ್ಲಿ ಕುಳಿತುಕೊಂಡಿದ್ದಾಗ, ಇಬ್ಬರು ಅಪರಿಚಿತ ವ್ಯಕ್ತಿಗಳು ತನ್ನ ಮಗನನ್ನು ಹಾಗೂ ಬಾಲಕಿಯನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಕೆ ಹಾಕಿರುವುದಲ್ಲದೆ, ತನ್ನ ಮಗನನ್ನು ಅನ್ಯಧರ್ಮದವನೆಂದು ನಿಂದಿಸಿ, ಸ್ಥಳದಲ್ಲಿದ್ದ ಇತರ ಸಾರ್ವಜನಿಕರನ್ನು ಕರೆದು ಅವಮಾನಿಸಿ ವಿಡಿಯೋ ಮಾಡಿರುತ್ತಾರೆ. ಆನಂತರ ಅಪರಿಚಿತ ವ್ಯಕ್ತಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮತ್ತು ಇನ್ ಸ್ಟ್ರಾಗ್ರಾಮ್ ನಲ್ಲಿ ಹರಿಯಬಿಟ್ಟು, ತನ್ನ ಮಗನನ್ನು ಅನ್ಯಧರ್ಮದವನೆಂದು ವೀಡಿಯೋದಲ್ಲಿ ಹೇಳಿರುತ್ತಾರೆ ಎಂದು ದೂರು ನೀಡಿದ್ದರು.
ಪ್ರಕರಣವನ್ನು ಕೈಗೆತ್ತಿಗೊಂಡ ಪೊಲೀಸರು ಅ.ಕ್ರ: 54/2025, ಕಲಂ: 126(2), 352, 351(2), 353(1)(C), 57, 196(1)(a) ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿತರಾದ ಕಡಬದ ಕುದ್ಮಾರು ನಿವಾಸಿ ಪುರುಷೋತ್ತಮ (43) ಹಾಗೂ ಪುತ್ತೂರಿನ ಆರ್ಯಾಪು ನಿವಾಸಿ ರಾಮಚಂದ್ರ (38) ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಸಂತ್ರಸ್ಥರಿಬ್ಬರೂ ಅಪ್ರಾಪ್ತರಾಗಿರುವುದರಿಂದ, ಪ್ರಕರಣದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯಾವುದೇ ಮಾಧ್ಯಮಗಳು ಪ್ರಸಾರ ಮಾಡುವಾಗ ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ ನ್ಯಾಯ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.