ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನ ಮೌಲ್ಯ ಶಿಕ್ಷಣ ವಿಭಾಗದ ವತಿಯಿಂದ ಮೊಹರಂ ಸಂದೇಶ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತ ಬಿ.ಡಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೌಲ್ಯ ಶಿಕ್ಷಣ ವಿಭಾಗದ ಉಪನ್ಯಾಸಕಿ ರಾಬಿಯ ಅಬ್ದುಲ್ ರಹೀಮ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಹಿಜರಿ ಕ್ಯಾಲೆಂಡರ್ ನ ಚರಿತ್ರೆಯನ್ನು ವಿವರಿಸುವುದರೊಂದಿಗೆ ಅದರ ಪ್ರಥಮ ತಿಂಗಳಾದ ಮೊಹರಂ ನ ಮಹತ್ವವನ್ನು ಸವಿಸ್ತಾರವಾಗಿ ತಿಳಿಸಿದರು. ಮೊಹರಂ ಮರ್ದಿತರಿಗೆ ದೇವನ ಕಡೆಯಿಂದ ಸಹಾಯ ಒದಗಿ ಬಂದ ಮಾಸವಾಗಿದೆ, ಮರ್ದಿತನು ನಿರಂತರ ಮರ್ದಿಸಲ್ಪಡುತ್ತಲೇ ಇರಲು ಸಾಧ್ಯವಿಲ್ಲ. ಒಂದು ದಿನ ಅವನ ಪಾಲಿಗೆ ಖಂಡಿತ ದೇವನ ಸಹಾಯ ಬಂದೇ ಬರುವುದು. ಅದಕ್ಕಾಗಿ ಸಹನೆಯಿಂದ ಸತ್ಯ ಮತ್ತು ನ್ಯಾಯದ ಮೇಲೆ ಸ್ಥಿರವಾಗಿ ನಿಂತು ಮರ್ದಕನ ವಿರುದ್ಧ ಹೋರಾಡುತ್ತಲೇ ಇರಬೇಕಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಸಲಹಾ ಸಮಿತಿಯ ಕಾರ್ಯದರ್ಶಿ ತಾರಾಕ್ಷಿ, ಪದವಿ ಪೂರ್ವ ವಿಭಾಗದ ಸಂಯೋಜಕಿ ಮಮಿತಾ ಎಸ್.ರೈ, ಪದವಿ ವಿಭಾಗದ ಸಂಯೋಜಕಿ ಆಬಿದಾ ಬಿ.ಉಪಸ್ಥಿತರಿದ್ದರು.
ಕಾಲೇಜಿನ ಸಲಹಾ ಸಮಿತಿಯ ಸದಸ್ಯರಾದ ನವ್ಯ ಮತ್ತು ಶಫೀಕಾ, ಉಪನ್ಯಾಸಕ ವೃಂದದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದ್ವಿತೀಯ ವಿಜ್ಞಾನ ವಿಭಾಗದ ಖದೀಜ ಮಾಹಿರಾ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.