ಜೆಸಿಬಿ,ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾನಿ – ಸುಬ್ಬಯ್ಯ ನಾಯ್ಕ
ನಿಡ್ಪಳ್ಳಿ: ಕಾರ್ಖಾನೆ, ಜೆ.ಸಿ.ಬಿ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಪರಿಸರಕ್ಕೆ ಹಾನಿ ಆಗ್ತಾ ಇದೆ. ಇದನ್ನು ಸರಿಪಡಿಸುವ ಕೆಲಸ ಮುಂದಿನ ಭವಿಷ್ಯತ್ ನಿರ್ಮಾಣದ ವಿದ್ಯಾರ್ಥಿಗಳಿಂದ ಆಗಬೇಕಾಗಿದೆ ಎಂದು ಅರಣ್ಯ ಇಲಾಖೆಯ ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕರವರು ಹೇಳಿದರು.

ಇವರು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆರ್ಲಪದವು, ನಾಗರಿಕ ಹಿತ ರಕ್ಷಣಾ ವೇದಿಕೆ ಇದರ ಆಶ್ರಯದಲ್ಲಿ ವಿದ್ಯಾವರ್ಧಕ ಸಂಘ ಪಾಣಾಜೆ ಹಾಗೂ ಸುಬೋಧ ಪ್ರೌಢಶಾಲೆ ಪಾಣಾಜೆ ಇದರ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆ ಪುತ್ತೂರು ಇದರ ಸಹಕಾರದಲ್ಲಿ ಪಾಣಾಜೆ ಸುಬೋಧ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ವನಮಹೋತ್ಸವ ಮತ್ತು ಸಸಿ ವಿತರಣಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ನಿಮ್ಮ ಅಮ್ಮನ ಹೆಸರಿನಲ್ಲಿ ಒಂದೊಂದು ಗಿಡವನ್ನು ನೆಟ್ಟು ಬೆಳೆಸಿ ಪರಿಸರದ ಜೊತೆಯಲ್ಲಿ ಬಾಂಧವ್ಯವನ್ನು ಒಗ್ಗೂಡಿಸಬೇಕು ಎಂದು ಕರೆ ನೀಡಿದರು. ಸಸಿ ವಿತರಣೆ ಮಾಡಿದ ಉಕ್ಕಿನಡ್ಕ ವಶಿಷ್ಟಾಶ್ರಮ ಶಾಲೆಯ ಅಧ್ಯಕ್ಷ ಪಿ. ಜಿ. ಶಂಕರ ನಾರಾಯಣ ಭಟ್ ಮಾತನಾಡಿ ಹಿರಿಯರು ಮಾಡಿದಂತಹ ಕಟ್ಟುಪಾಡುಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಸಕ್ತ ಸನ್ನಿವೇಶದಲ್ಲಿ ಬಿದಿರು ಬೆಳೆಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು.
ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ಮಾತನಾಡಿ ಗಿಡಗಳನ್ನು ನೆಟ್ಟರೆ ಸಾಲದು ಅದನ್ನು ಪೋಷಿಸುವ ಜವಾಬ್ದಾರಿ ಸರ್ವರದ್ದೂ ಆಗಿರಬೇಕು.ಮನೆಯ ಸುತ್ತ ನೀರು ಮತ್ತು ಆಹಾರ ಪ್ರಾಣಿ ಪಕ್ಷಿಗಳಿಗೆ ನೀಡುವಂತಾಗಬೇಕು. ಅಶ್ವತ್ಥ ಮರದ ಮಹತ್ವ ಹಾಗೂ ವಿದ್ಯಾರ್ಥಿಗಳು ಗಿಡ ನೆಟ್ಟು ಬೆಳೆಸುವ ಬಗ್ಗೆ ಪ್ರೇರಣೆಯ ಮಾತುಗಳನ್ನಾಡಿ ಶುಭ ಹಾರೈಸಿದರು. ಅಬೂಬಕ್ಕರ್ ಆರ್ಲಪದವುರವರು ಮಾತನಾಡುತ್ತಾ ಗಿಡ ಬೆಳೆಸೋಣ ಪರಿಸರ ಉಳಿಸೋಣ ಎಂಬ ಮಹತ್ವದ ಸಾರಾಂಶವನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಮಾತನಾಡುತ್ತಾ ಪರಿಸರದ ಮಹತ್ವವನ್ನು ತಿಳಿಸಿದರು. ನೆಟ್ಟ ಬೆಲೆಬಾಳುವ ಗಿಡವನ್ನು ಜನರಿಗೆ ಉಪಯೋಗಿಸುವ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಅರಣ್ಯ ಇಲಾಖೆಯಲ್ಲಿ ವಿನಂತಿಸಿಕೊಂಡರು. ಪಾಣಾಜೆ ರೇಂಜ್ ಉಪವಲಯ ಅರಣ್ಯ ಅಧಿಕಾರಿ ಮದನ್ ರವರು ಮಾತನಾಡುತ್ತಾ ಮರಗಳನ್ನು ಕಡಿಯುವ ಬಗ್ಗೆ ಸಾಗಾಣಿಕೆ ಬಗ್ಗೆ ಅರಣ್ಯ ಇಲಾಖೆಯ ಕಾನೂನಿನ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು. ಗ್ರಾಮಜನ್ಯ ಸಂಸ್ಥೆಯ ನಿರ್ದೇಶಕ ರಾಮ್ ಪ್ರತೀಕ್ ಕನಿಯಾಲ ಮಾತನಾಡುತ್ತಾ ಬಿದಿರು ಬೆಳೆಸುವುದರಿಂದ ಇರುವ ಮಹತ್ವ ಪರಿಸರಕ್ಕೆ ಹೇಗೆ ಇದು ಸಹಕಾರಿ ಎಂದು ತಿಳಿಸಿದರು.
ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ರವರು ರಚಿಸಿದ ಪರಿಸರ ಗೀತೆಯನ್ನು ಶಾಲಾ ಶಿಕ್ಷಕಿಯರಾದ ಕವಿತಾ ಜಿ ಹಾಗೂ ಪವಿತ್ರ ಕಡಂದೇಲು ರವರ ಸ್ವರ ಸಂಯೋಜನೆಯಲ್ಲಿ ಶಾಲೆಯ ವಿದ್ಯಾರ್ಥಿನಿಯರಾದ ಸಿಂಚನ ಎಸ್, ರಚನಾ ಎಸ್, ಸಿಂಚನ ಎ ಅರ್ಪಿತ , ದೀಪಿಕಾ ಪಿ ಎಸ್, ಸ್ವಸ್ತಿಕಾ, ಶ್ರಾವ್ಯ , ಲಾವಣ್ಯ, ಚೈತನ್ಯ ಮತ್ತು ದೀಪ್ತಿ ಲಕ್ಷ್ಮಿ ರವರು ಹಾಡಿದರು. ವೇದಿಕೆಯಲ್ಲಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಕಡಂದೇಲು, ನಾಗರಿಕ ಹಿತ ರಕ್ಷಣಾ ವೇದಿಕೆ ಪಾಣಾಜೆ ಇದರ ಅಧ್ಯಕ್ಷ ಬಾಬುರೈ ಕೋಟೆ, ಆರ್ಲಪದವು ಬೀಟ್ ಫಾರೆಸ್ಟ್ ಅಧಿಕಾರಿ ಸುನೀಶ್, ಬೆಟ್ಟಂಪಾಡಿ ಬೀಟ್ ಫಾರೆಸ್ಟ್ ಅಧಿಕಾರಿ ಪ್ರಜ್ಞಾ ಬಿ ಉಪಸ್ಥಿತರಿದ್ದರು. ಸಿಂಚನ ಎಸ್ ಪ್ರಾರ್ಥಿಸಿ, ಗಡಿನಾಡ ಶ್ರೇಯೋಭಿವೃದ್ದಿ ಟ್ರಸ್ಟ್ ಆರ್ಲಪದವು ಇದರ ಅಧ್ಯಕ್ಷ ಡಾ.ಹಾಜಿ.ಎಸ್. ಅಬೂಬಕ್ಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಗುರು ನಿರ್ಮಲ ಕೆ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್. ಎಸ್ ಪಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು,ಸಿಬ್ಬಂದಿಗಳು, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.