ಬಂಟ್ವಾಳ: ನೇರಳಕಟ್ಟೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್. ಅನುದಾನ ಹಾಗೂ ಎನ್.ಎಮ್.ಪಿ.ಎ. ಸಂಸ್ಥೆಯ ಸಿ.ಎಸ್.ಆರ್. ನಿಧಿಯಿಂದ ನಿರ್ಮಾಣವಾದ ನೂತನ ತರಗತಿ ಕೊಠಡಿಗಳ ಹಸ್ತಾಂತರ ಹಾಗೂ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಬಿ.ಆರ್, ಮಂಗಳೂರು ಎಂ.ಆರ್.ಪಿ.ಎಲ್ ನ ಎಚ್.ಆರ್ ಕೇಶವ ಪಿ, ಶಾಲಾ ನಾಯಕಿ ಕು| ಸಾದಿಯಾ ಅವರು ನೂತನ ಕೊಠಡಿಗಳನ್ನು ಉದ್ಘಾಟಿಸಿದರು.

ಪ್ರಸಕ್ತ ಸಾಲಿನಲ್ಲಿ ನೂತನವಾಗಿ ಆರಂಭಗೊಂಡ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಮಾತನಾಡಿ, ಎಲ್ಲಾ ಧರ್ಮೀಯರ ಜ್ಞಾನಕೇಂದ್ರವಾದ ವಿದ್ಯಾ ದೇಗುಲದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಕೈಜೋಡಿಸಿದಾಗ ಆ ಶಾಲೆ ನಮ್ಮದು ಅನ್ನುವ ಮನೋಭಾವ ಮೂಡಿಬರಲು ಸಾಧ್ಯ, ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಶಾಸಕ ಕಿಶೋರ್ ಬಿ.ಆರ್, ಮಾತನಾಡಿ ಧರ್ಮ, ಜಾತಿ, ಪಂಗಡ, ರಾಜಕೀಯ ಯಾವುದೇ ರೀತಿಯ ಭೇದವಿಲ್ಲದೆ ಎಲ್ಲರೂ ಒಂದಾಗಿ ಶಾಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಿದಾಗ ಆ ಶಾಲೆಯು ಸರ್ವ ಜನಾಂಗದ ಶಾಂತಿಯ ತೋಟವಾಗಿ ಮುಂದುವರಿಯಲು ಸಾದ್ಯ ಎಂದು ಅಭಿಪ್ರಾಯಪಟ್ಟರು. ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ಎಂ.ಆರ್.ಪಿ.ಎಲ್ ನ ಕೇಶವ ಪಿ., ಎನ್.ಎಂ.ಪಿ.ಎ ಯ ರಮೇಶ್ ಭಂಡಾರಿ ಬೊಟ್ಯಾಡಿ ಮಾತನಾಡಿ ಶುಭ ಹಾರೈಸಿದರು.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ. ಪೂಜಾರಿ, ಉಪಾಧ್ಯಕ್ಷ ಸತೀಶ್ ಪೂಜಾರಿ ಕೊಪ್ಪರಿಗೆ, ಸದಸ್ಯರಾದ ಕೆ.ಶ್ರೀಧರ ರೈ, ಅಶೋಕ ರೈ, ಧನುಂಜಯ ಗೌಡ, ಶಕೀಲಾ ಕೆ ಪೂಜಾರಿ, ಪ್ರೇಮ, ಲಕ್ಷ್ಮೀ, ಶಾಲಾ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷೆ ಲಕ್ಷ್ಮೀ ಕೆ. ಹೆಗ್ಡೆ ಉರ್ದಿಲಗುತ್ತು ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಎಂ.ಆರ್.ಪಿ.ಎಲ್ ನ ಕೇಶವ ಪಿ., ಎನ್.ಎಂ.ಪಿ.ಎ ಯ ರಮೇಶ್ ಭಂಡಾರಿ ಬೊಟ್ಯಾಡಿ, ಕಟ್ಟಡದ ಗುತ್ತಿಗೆದಾರ ಸಂದೀಪ್ ಶೆಟ್ಟಿ ಅರೆಬೆಟ್ಟು ಹಾಗೂ ನೇರಳಕಟ್ಟೆ ಶಾಲೆಯಲ್ಲಿ 12 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸೇಸಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಕೆ. ರಶೀದ್ ಪರ್ಲೊಟ್ಟು, ಉಪಾಧ್ಯಕ್ಷೆ ಶಶಿಕಲಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಠಲ ನಾಯ್ಕ್, ಶಾಲಾ ನಾಯಕಿ ಕು| ಸಾದಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕುಸುಮ ಸ್ವಾಗತಿಸಿ, ಶಾಲಾ ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ನಿರಂಜನ್ ರೈ ಪ್ರಸ್ತಾವನೆಗೈದರು. ಸಹ ಶಿಕ್ಷಕಿ ಗೀತಾ ಕುಮಾರಿ ಕೆ.ಎಸ್. ಸನ್ಮಾನಿತರನ್ನು ಪರಿಚಯಿಸಿದರು. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.