ಪುತ್ತೂರು: ಕಡಬ ಗ್ರಾಮ ಪಂಚಾಯತಿನಿಂದ ಮೇಲ್ದರ್ಜೆಗೊಂಡು, ಹೊಸತಾಗಿ ಪಟ್ಟಣ ಪಂಚಾಯತ್ ಆಗಿ ಮಾರ್ಪಟ್ಟ, ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ, ಚುನಾವಣಾ ವೀಕ್ಷಕರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕೆ.ರವರು ನೇಮಕಗೊಳಿಸಿ ಆದೇಶಿಸಿರುತ್ತಾರೆ ಎಂದು ಡಿಕೆಡಿಸಿಸಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಚುನಾವಣಾ ವೀಕ್ಷಕರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮೊಹಮ್ಮದ್, ದ.ಕ ಜಿಲ್ಲಾ ಆರ್ ಜಿ ಪಿ ಆರ್ ಎಸ್ ಸಮಿತಿ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ ಕುಲಾಲು, ಮಾಜಿ ಮೇಯರ್ ಮಹಾಬಲ ಮಾರ್ಲ ಮತ್ತು ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ ರನ್ನು ನೇಮಕಗೊಳಿಸಲಾಗಿದೆ.
ಕಡಬ ಪಟ್ಟಣ ಪಂಚಾಯತ್ ವಾರ್ಡ್ ವಿಕ್ಷಕರನ್ನಾಗಿ ಪುತ್ತೂರಿನಿಂದ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷ ಎಮ್.ಬಿ.ವಿಶ್ವನಾಥ್ ರೈ, ಉಪ್ಪಿನಂಗಡಿ -ವಿಟ್ಲ ಬ್ಲಾಕ್ ಕಾಂಗ್ರೆಸ್ಸಿನ ನಿಕಟ ಪೂರ್ವ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಯುಟಿ ತೌಸೀಫ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಡಿಸಿಸಿ ಪದಾಧಿಕಾರಿಗಳಾದ ಉಲ್ಯಾಸ್ ಕೋಟ್ಯಾನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿನ ವಿವಿಧ ಪದಾಧಿಕಾರಿಗಳನ್ನು ಒಳಗೊಂಡ 26 ಮಂದಿಯನ್ನು, ಕಡಬ ಪಟ್ಟಣ ಪಂಚಾಯತಿನ 13, ವಿವಿಧ ವಾರ್ಡ್ ಗಳಿಗೆ ವೀಕ್ಷಕರನ್ನಾಗಿ ನೇಮಕಗೊಳಿಸಲಾಗಿದೆ.
ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ನಾಮಪತ್ರ ಸಲ್ಲಿಕೆಯು ಜುಲೈ 29 ರಿಂದ ಆಗಸ್ಟ್ 5ರವರೆಗೆ ನಡೆಯಲಿದ್ದು, ಆಗಸ್ಟ್ 6ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಆಗಸ್ಟ್ 8ರಂದು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಕೊನೆ ದಿನವಾಗಿರುತ್ತದೆ. ಕಡಬ ತಾಲ್ಲೂಕು ಘೋಷಣೆಗೊಂದ ನಂತರ, ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ ಕಡಬ, ಪಟ್ಟಣ ಪಂಚಾಯಿತಿಗೆ ನಡೆಯುವ ಪ್ರಪ್ರಥಮ ಚುನಾವಣೆ ಇದಾಗಿರುತ್ತದೆ. ಈ ಚುನಾವಣೆಯನ್ನು ಎಲ್ಲಾ ರಾಜಕೀಯ ಪಕ್ಷದವರು ಪ್ರತಿಷ್ಠೆಯಾಗಿ ಪರಿಗಣಿಸಿರುತ್ತಾರೆ.