ಪ್ರತಿಯೊಂದು ಗಿಡಕ್ಕೂ ಒಬ್ಬೊಬ್ಬ ಕಾರ್ಗಿಲ್ ಯೋಧನ ಹೆಸರು!
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸಿಂಧೂರ ವನ ಎಂಬ ಉಪವನದ ನಿರ್ಮಾಣಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಗಿಡಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿ ಶುಭಹಾರೈಸಿದರು. ಕಾಲೇಜಿನ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್., ಉಪಪ್ರಾಂಶುಪಾಲ ಪ್ರದೀಪ್ ಕೆ.ವೈ, ಕ್ಯಾಂಪಸ್ ನಿರ್ದೇಶಕ ರಾಜೇಂದ್ರ ಪ್ರಸಾದ್, ಹಾಗೂ ಬೋಧಕ ಬೋಧಕೇತರ ವೃಂದದವರು ಹಾಜರಿದ್ದರು.

ಗ್ರೀನ್ ಕ್ಯಾಂಪಸ್ ಕಲ್ಪನೆಯಡಿ ಸುಮಾರು ಮೂವತ್ತು ಸೆಂಟ್ಸ್ ಜಾಗದಲ್ಲಿ ಹಾಗೂ ಕ್ಯಾಂಪಸ್ನ ಕೆಲವು ನಿಗದಿತ ಸ್ಥಳಗಳಲ್ಲಿ ಹಲವಾರು ಗಿಡಗಳನ್ನು ಬೆಳೆಸುವ ಯೋಜನೆ ಇದಾಗಿದೆ. ಅತ್ಯಧಿಕ ಆಮ್ಲಜನಕವನ್ನು ಹೊರಸೂಸುವ ಗಿಡಗಳಲ್ಲದೆ ಹಣ್ಣುಗಳನ್ನು ನೀಡುವ ಹಲಸು, ರಂಬುಟಾನ್ನಂತಹ ಗಿಡಗಳನ್ನೂ ಈ ಸಿಂಧೂರವನದಲ್ಲಿ ಬೆಳೆಸಲಾಗುತ್ತಿದೆ. ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಮಾದರಿಯ ಉಪವನದ ನಿರ್ಮಾಣವಾಗಬೇಕೆಂಬ ದೂರದೃಷ್ಟಿಯೊಂದಿಗೆ ಈ ಯೋಜನೆಗೆ ಅಡಿಯಿಡಲಾಗಿದೆ.

ಇತ್ತೀಚೆಗೆ ಪಾಕಿಸ್ಥಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರದ ನೆನಪಿಗಾಗಿ ಕಾರ್ಗಿಲ್ ಯೋಧರ ಹೆಸರನ್ನು ಶಾಶ್ವತವಾಗಿಸುವ ನೆಲೆಯಲ್ಲಿ ಈ ಸಿಂಧೂರವನವನ್ನು ಯೋಜಿಸಲಾಗಿದೆ. ಇಲ್ಲಿ ನೆಡುವ ಪ್ರತಿಯೊಂದು ಗಿಡಕ್ಕೂ ಕಾರ್ಗಿಲ್ ಯೋಧರ ಹೆಸರನ್ನಿಡುವ ಪ್ರಕ್ರಿಯೆ ನಡೆಸಲಾಗುತ್ತದೆ. ಇಲ್ಲಿ ನೆಡುವ ಗಿಡಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಲಿದ್ದು, ಅವುಗಳನ್ನು ರಕ್ಷಿಸುವ, ನೀರುಣಿಸುವ ಕಾಯಕವನ್ನು ನೆರವೇರಿಸಲಿದ್ದಾರೆ.