ಕಾಣಿಯೂರು: ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗಳಲ್ಲಿಯೂ ಅವಕಾಶ ಒದಗಿಸುವಂತೆ ಚಾರ್ವಾಕ ಪ್ರಾಥಮಿಕ ಸಹಕಾರ ಸಂಘದ ಮೂಲಕ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರಿಗೆ ಮನವಿ ನೀಡಲಾಯಿತು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇದರ ವಾರ್ಷಿಕ ಮಹಾಸಭೆಯಲ್ಲಿ ಚರ್ಚಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರದ ಮಹತ್ವ ಪೂರ್ಣ ಯೋಜನೆಯಾದ ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯಲ್ಲಿ ಚಿಕಿತ್ಸೆ ಪಡೆಯಲು ಪುತ್ತೂರಿನಲ್ಲಿ ಯಾವುದೇ ಆಸ್ಪತ್ರೆಗಳು ಇಲ್ಲದಿರುವ ಬಗ್ಗೆ ಸದಸ್ಯರು ವಿಷಯ ಪ್ರಸ್ತಾಪಿಸಿದ್ದು, ಸಭೆಯಲ್ಲಿ ಸರಕಾರಕ್ಕೆ ಬರೆಯಲು ತೀರ್ಮಾನಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಯಶಸ್ವಿನಿ ಯೋಜನೆಯ ಪ್ರಯೋಜನ ಪಡೆಯಲು ಕನಿಷ್ಟ ಒಂದು ಆಸ್ಪತ್ರೆಯಲ್ಲಿ ಆದರೂ ಚಿಕಿತ್ಸೆಗೆ ಅವಕಾಶ ದೊರೆಯಲು ಶಾಸಕಿ ಭಾಗೀರಥಿ ಮುರುಳ್ಯ ರವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ ಯವರ ಸಮ್ಮುಖದಲ್ಲಿ ಚಾರ್ವಾಕ ಸಿ ಎ ಬ್ಯಾಂಕಿನ ಅಧ್ಯಕ್ಷರಾದ ಗಣೇಶ್ ಉದನಡ್ಕ ರವರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಡಬ ಸಿ ಎ ಬ್ಯಾಂಕಿನ ಅಧ್ಯಕ್ಷರಾದ ರಮೇಶ್ ಕಲ್ಪುರೆ, ನೆಲ್ಯಾಡಿ ಸಿ ಎ ಬ್ಯಾಂಕಿನ ಅಧ್ಯಕ್ಷರಾದ ಬಾಲಕೃಷ್ಣ ಬಾಣಜಾಲು,ಕಡಬ ತಾಲೂಕು ರೈತ ಕೃಷಿಕ ಅದ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ಚಾರ್ವಾಕ ಸಿ ಎ ಬ್ಯಾಂಕಿನ ಉಪಾಧ್ಯಕ್ಷರಾದ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕ ಪರಮೇಶ್ವರ ಅನಿಲ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ ಗೌಡ ರವರು ಉಪಸ್ಥಿತರಿದ್ದರು.