ನೆಲ್ಯಾಡಿ: ಮಿನಿ ಗೂಡ್ಸ್ ವಾಹನ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಎರಡೂ ವಾಹನಗಳು ಜಖಂಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯ ಗ್ರಾಮದ ಪರ್ಕಳ ಎಂಬಲ್ಲಿ ಆ.6ರಂದು ಮಧ್ಯಾಹ್ನ ನಡೆದಿದೆ.
ಹಾಸನದಿಂದ ಉಡುಪಿ ಕಡೆಗೆ ಬರುತ್ತಿದ್ದ, ಉದ್ಯಮಿ ಆಹಿಲ್ ಪಿರ್ದೋಸ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಹಾಗೂ ಉಡುಪಿಯಿಂದ ಆಂಧ್ರಪ್ರದೇಶಕ್ಕೆ ಮೀನು ಸಾಗಿಸುತ್ತಿದ್ದ ಇರ್ಷಾದ್ ಎಂಬವರು ಚಲಾಯಿಸುತ್ತಿದ್ದ ಮಿನಿ ಗೂಡ್ಸ್ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎರಡು ವಾಹನಗಳೂ ಜಖಂಗೊಂಡಿದ್ದು ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ 112 ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ನಡೆದ ಅಪಘಾತದ ಸ್ಥಳದಲ್ಲೇ ಆ.5ರಂದು ಸಂಜೆ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರು ಚಾಲಕ ಗಂಭೀರ ಗಾಯಗೊಂಡಿದ್ದರು. ಇಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಯಾವುದೇ ಸೂಚನಾ ಫಲಕ ಹಾಕದೆ ಏಕಮುಖ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.