ಗ್ರಾಮೀಣ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ನೀಡುವ ಚಿಂತನೆ ಪತ್ರಿಕಾಗೋಷ್ಠಿಯಲ್ಲಿ ಡಾ. ಕಿರಾಶ್ ಪರ್ತಿಪ್ಪಾಡಿ
ವಿಟ್ಲ: ಜನಪ್ರಿಯ ಫೌಂಡೇಶನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಾಸನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಂಗಳೂರಿನಲ್ಲಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯು ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಇದೀಗ ವಿಟ್ಲದಲ್ಲಿ ಮೊಟ್ಟ ಮೊದಲ ಬಾರಿಗೆ ಜನಪ್ರಿಯ ಹೆಲ್ತ್ ಸೆಂಟರ್ ವಿಟ್ಲದ ಬೊಬ್ಬೆಕೇರಿಯಲ್ಲಿ ಆ.24ರಂದು ಉದ್ಘಾಟನೆಗೊಳ್ಳಲಿದೆ ಎಂದು ಮಂಗಳೂರು ಜನಪ್ರಿಯ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಸಿಇಓ ಡಾ. ಕಿರಾಶ್ ಪರ್ತಿಪ್ಪಾಡಿ ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂಲತಃ ವಿಟ್ಲ ಕಂಬಳಬೆಟ್ಟು ನಿವಾಸಿ ಬದ್ರಿಯಾ ಮನೆತನದ ಡಾ. ವಿ.ಕೆ ಅಬ್ದುಲ್ ಬಶೀರ್ ಅವರ ನೇತೃತ್ವದಲ್ಲಿ 2014ರಲ್ಲಿ ಹಾಸನದಲ್ಲಿ ಆರಂಭಗೊಂಡ ಆಸ್ಪತ್ರೆಯು 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು , ಈ ಆಸ್ಪತ್ರೆಯ ಮೂಲಕ ಅದೆಷ್ಟೋ ಬಡ ರೋಗಿಗಳ ಜೀವನವನ್ನು ಹಸನಾಗಿಸಿದೆ. ಇಲ್ಲಿ ಸಂಪೂರ್ಣವಾಗಿ ಬೇರ್ಪಟ್ಟ ಕೈ ಕಾಲುಗಳ ಜೋಡಣೆಯನ್ನು ಯಶಸ್ವಿಯಾಗಿ ನಡೆಸಿದ ಹಿರಿಮೆ ನಮ್ಮ ಆಸ್ಪತ್ರೆಗಿದೆ. ಈಗಾಗಲೇ ಒಂದು ವರ್ಷದ ಹಿಂದೆ ಮಂಗಳೂರಿನ ಪಡೀಲ್ ನಲ್ಲಿ ಖ್ಯಾತ ವೈದ್ಯರನ್ನೊಳಗೊಂಡ ಅಸ್ಪತ್ರೆಯು ಆರಂಭಿಸಲಾಗಿದೆ. ವೈದ್ಯಕೀಯ ಸೇವೆಯ ಜೊತೆಗೆ ಜನಪ್ರಿಯ ಫೌಂಡೇಶನ್ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ 2021 ರಿಂದ ವಿಟ್ಲದ ಕಂಬಳಬೆಟ್ಟುವಿನಲ್ಲಿ ಜನಪ್ರಿಯ ಸೆಂಟ್ರಲ್ ಸ್ಕೂಲ್ ಅನ್ನು ಆರಂಭಿಸಲಾಗಿದ್ದು, ಅದು ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಗ್ರಾಮೀಣ ಭಾಗದ ಜನತೆಗೆ ಇನ್ನಷ್ಟು ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ವಿಟ್ಲದ ಬೊಬ್ಬೆಕೇರಿ ಪಾಣೆಮಜಲು ಎಂಬಲ್ಲಿರುವ ಹರಿಹರ ಕಾಂಪ್ಲೆಕ್ಸ್ ನಲ್ಲಿ ಸುಸಜ್ಜಿತ ಹಾಗೂ ನುರಿತ ವೈದ್ಯರನ್ನೊಳಗೊಂಡ ಜನಪ್ರಿಯ ಹೆಲ್ತ್ ಸೆಂಟರ್ ನ ಲೋಕಾರ್ಪಣ ಕಾರ್ಯಕ್ರಮವು ನಡೆಯಲಿದೆ.
ವಿವಿಧ ದಿನಗಳಲ್ಲಿ ಬೇರೆ ಬೇರೆ ವಿಭಾಗದ ತಜ್ಞ ವೈದ್ಯರು ಬೇಟಿ ನೀಡಿ ರೋಗಿಗಳ ಸಂದರ್ಶನ ನಡೆಸಲಿದ್ದಾರೆ. ಎಕ್ಸ್ ರೇ, ಪ್ರಯೋಗಾಲಯ, ಸ್ಕ್ಯಾನಿಂಗ್, ಔಷಧಾಲಯ ಒಳಗೊಂಡಿದೆ.
ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದು, ಧಾರ್ಮಿಕ ಪಂಡಿತರಾದ ಅಲ್ ಹಾಜಿ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹಾಗೂ ವಿಟ್ಲ ಶೋಕ ಮಾತಾ ಇಗರ್ಜಿಯ ಧರ್ಮಗುರುಗಳಾದ ಫಾ. ಐವನ್ ಮೈಕಲ್ ರೊಡ್ರಿಗಸ್ ಸಂದೇಶ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಪ್ರಿಯ ಫೌಂಡೇಶನ್ ಇದರ ಅಧ್ಯಕ್ಷರಾದ ವಿ.ಕೆ ಅಬ್ದುಲ್ ಬಶೀರ್ ಅವರು ವಹಿಸಲಿದ್ದಾರೆ.
ಜನಪ್ರಿಯ ಹೆಲ್ತ್ ಸೆಂಟರ್ ಅನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ. ಸ್ಕ್ಯಾನಿಂಗ್ ಮತ್ತು ಎಕ್ಸ್ ರೇ ಕೊಠಡಿಯನ್ನು ಮಾಜಿ ಸಚಿವರಾದ ಬಿ ರಮಾನಾಥ ರೈ ಅವರು ಉದ್ಘಾಟಿಸಲಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಪ್ರಯೋಗಾಲಯವನ್ನು ಯು ಟಿ ಇಫ್ತಿಕಾರ್ ಫರೀದ್ ಅಲಿ ಅವರು ಉದ್ಘಾಟಿಸಲಿದ್ದಾರೆ. ಔಷಧಾಲಯವನ್ನು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಅಶೋಕ್ ರೈ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ ಉದ್ಘಾಟನಾ ಸಮಾರಂಭ ಪ್ರಯುಕ್ತ ಅಂದೇ ವಿಟ್ಲ ಅಸುಪಾಸಿನ ಜನರಿಗಾಗಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಕೂಡ ಹಮ್ಮಿಕೊಳ್ಳಲಾಗಿದೆ. ಈ ಅರೋಗ್ಯ ಶಿಬಿರದಲ್ಲಿ ಇಸಿಜಿ, ಸಕ್ಕರೆಯ ರಕ್ತಪರೀಕ್ಷೆ, ರಕ್ತದೊತ್ತಡ ಹಾಗೂ ವೈದ್ಯರ ಸಲಹೆಗಳು ಉಚಿತವಾಗಿರುತ್ತದೆ. ತಜ್ಞ ವೈದ್ದರುಗಳಾದ ಮೂಳೆತಜ್ಞರು, ಜನರಲ್ ಮೆಡಿಸಿನ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ನರರೋಗ ತಜ್ಞರು, ಕಿವಿ ಮೂಗು ಗಂಟಲು ತಜ್ಞರು ಗಳಾದ ವೈದ್ಯರ ತಂಡ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆ.25ರಿಂದ ರಿಂದ ಆ.31ರ ವರೆಗೆ ರಕ್ತ ಪರೀಕ್ಷೆ ಪ್ರಯೋಗಾಲಯದಲ್ಲಿ ಶೇಕಡಾ 30ರಷ್ಟು, ಔಷಧಿಗಳಲ್ಲಿ ಶೇಕಡಾ 10ರಷ್ಟು ರಿಯಾಯಿತಿ ದರದಲ್ಲಿ ದೊರೆಯಲಿದೆ. ಈ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗೊಡಿಸಬೇಕೆಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶಕ ನೌಶೀನ್ ಬದ್ರಿಯಾ, ಮಂಗಳೂರು ಜನಪ್ರಿಯ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಇಕ್ಬಾಕ್ ವಿಟ್ಲ, ಜನಪ್ರಿಯ ಹೆಲ್ತ್ ಸೆಂಟರ್ ವೈದ್ಯ ಡಾ. ಬದ್ರುದ್ದೀನ್, ಜನಪ್ರಿಯ ಫೌಂಡೇಶನ್ ಜನರಲ್ ಮ್ಯಾನೇಜರ್ ಮೋನಿಸ್ ಅಲಿ, ಜನಪ್ರಿಯ ಆಸ್ಪತ್ರೆಯ ಮಾರ್ಕೆಟಿಂಗ್ ಮುಖ್ಯಸ್ಥ ಉಮೇಶ್ ಗೌಡ, ಪಿ ಆರ್ ಓ ಬಾತೀಷ್ ಅಳಕೆಮಜಲು ಉಪಸ್ಥಿತರಿದ್ದರು.