ಪಾಣಾಜೆ : ಪೋಳ್ಯ ನಿವಾಸಿ, ಕೊಡುಗೈದಾನಿ, ವಿದ್ಯಾಭಿಮಾನಿ, ವಿದೇಶದಲ್ಲಿ ಉದ್ಯಮಿ ಹಾಗೂ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ನ ಅಧ್ಯಕ್ಷ ಅಮ್ಜದ್ ಖಾನ್ ಹಾಗೂ ಅವರ ಧರ್ಮಪತ್ನಿ ಸುಬೋಧ ಪ್ರೌಢಶಾಲೆಯ 1996-97 ನೇ ಸಾಲಿನ ಹಿರಿಯ ವಿದ್ಯಾರ್ಥಿನಿ ತಸ್ನಿ ಅಮ್ಜದ್ ಅವರ ಜೊತೆಯಲ್ಲಿ ಸೆ. 3 ರಂದು ಶಾಲೆಗೆ ಭೇಟಿ ನೀಡಿದರು.
ಅವರನ್ನು ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ಹಾಗೂ ಮುಖ್ಯ ಶಿಕ್ಷಕಿ ನಿರ್ಮಲ ಸ್ವಾಗತಿಸಿದರು.
ಹಳ್ಳಿಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದನ್ನು ಶ್ಲಾಘಿಸಿದ ಅವರು ಗೌರವ ಶಿಕ್ಷಕರಾಗಿ ಶಾಲೆಯಲ್ಲಿ ದುಡಿಯುತ್ತಿರುವ ಶಿಕ್ಷಕರ ವೇತನವನ್ನು ಭರಿಸಲು ಸಹಾಯವಾಗುವಂತೆ ಪ್ರತಿ ತಿಂಗಳು ಶಾಲೆಗೆ ರೂ 10,000 ದಂತೆ ವರ್ಷಕ್ಕೆ ರೂ 1,20,000ವನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿ ಆಗಸ್ಟ್ ತಿಂಗಳ ದೇಣಿಗೆ ಹಣವನ್ನು ನಗದಾಗಿ ಶಾಲಾ ಸಂಚಾಲಕರಿಗೆ ಹಸ್ತಾಂತರಿಸಿದರು.

ಕಳೆದ ಸಾಲಿನಲ್ಲಿ ತಸ್ನಿ ಅಮ್ಜದ್ ಅವರು ರೂ 40,000/-ವನ್ನು ಶಾಲೆಗೆ ದೇಣಿಗೆಯಾಗಿ ನೀಡಿದ್ದನ್ನು ಸ್ಮರಿಸುತ್ತಾ, ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಮಾಡುತ್ತಿರುವ ಸೇವೆಯನ್ನು ಪ್ರಶಂಸಿಸಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪರವಾಗಿ ಸಂಚಾಲಕರು ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ತಸ್ನಿ ಅಮ್ಜದ್ ಅವರ ಸಹಪಾಠಿಗಳಾದ ಹರೀಶ್ ನೆಲ್ಲಿತ್ತಿಮಾರು, ಸವಿತಾ ಶೆಟ್ಟಿ, ರಾಜೇಶ್,ಸುರೇಶ್, ಸಂಘದ ಖಜಾಂಜಿ ಎ ಎನ್ ಕೊಳಂಬೆ ಹಾಗೂ ಚಿತ್ರಕಲಾ ಶಿಕ್ಷಕಿ ಶಾರದಾ ಉಪಸ್ಥಿತರಿದ್ದರು.