ಮಕ್ಕಳನ್ನು ಶಾಲೆಗೆ ಕಳುಹಿಸದೇ ಸಾಂಕೇತಿಕ ಪ್ರತಿಭಟನೆ
ಶಿಕ್ಷಕಿಯ ವರ್ಗಾವಣೆ ಆದೇಶ ಹಿಂಪಡೆಯಲು ಆಗ್ರಹ
ಪುತ್ತೂರು: ಇರ್ದೆ ಗ್ರಾಮದ ಪೇರಲ್ತಡ್ಕ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಪೋಷಕರ ಅಸಮಾಧಾನ ಸ್ಪೋಟಗೊಂಡಿದ್ದು ಸೆ.10ರಂದು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಸಾಂಕೇತಿಕ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಪೇರಲ್ತಡ್ಕ ಸ.ಉ.ಹಿ.ಪ್ರಾ.ಶಾಲೆಯಲ್ಲಿ 93 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು ಶಿಕ್ಷಕರ ಕೊರತೆಯೂ ಇಲ್ಲಿರಲಿಲ್ಲ, ಆದರೆ ಇತ್ತೀಚೆಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಿಂದಾಗಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಉಂಟಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಇದೀಗ ಶಾಲೆಯ ಇನ್ನೋರ್ವ ಶಿಕ್ಷಕಿ ಹಿಲ್ಡಾಜೆನೆಟ್ ಗೀತಾ ಲೋಬೋ ಅವರಿಗೆ ವರ್ಗಾವಣೆ ಆದೇಶ ಬಂದಿದ್ದು ಇದಕ್ಕೆ ಪೋಷಕರು ಮತ್ತು ಎಸ್ಡಿಎಂಸಿಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಹಿಲ್ಡಾಜೆನೆಟ್ ಗೀತಾ ಲೋಬೋ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಪಟ್ಟು ಹಿಡಿದು ಪ್ರತಿಭಟನೆಗೂ ಮುಂದಾಗಿದ್ದಾರೆ.
ಶಾಲೆಯ 93 ವಿದ್ಯಾರ್ಥಿಗಳ ಪೈಕಿ ಸೆ.10ರಂದು ಕೆಲವೇ ಕೆಲವು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದು ಶಿಕ್ಷಕರ ವರ್ಗಾವಣೆ ಸಮಸ್ಯೆ ಸರಿಪಡಿಸುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗ್ರಾಮಾಂತರ ಪ್ರದೇಶವಾಗಿರುವ ಪೇರಲ್ತಡ್ಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಬಾರದು ಎನ್ನುವ ಕಾರಣಕ್ಕೆ ನಾವು ಪ್ರಯತ್ನ ಪಡುವಾಗ ಇಲ್ಲಿನ ಶಿಕ್ಷಕ/ಶಿಕ್ಷಕಿಯರನ್ನು ಬೇಕಾದ ರೀತಿಯಲ್ಲಿ ಇಲ್ಲಿಂದ ವರ್ಗಾವಣೆ ಮಾಡುವುದಕ್ಕೆ ನಮ್ಮ ವಿರೋಧವಿದೆ, ನಮ್ಮ ಬೇಡಿಕೆಗೆ ಸಂಬಂಧಪಟ್ಟವರು ಸ್ಪಂಧಿಸದೇ ಇದ್ದರೆ ಪ್ರತಿಭಟನೆ ನಡೆಸಲೂ ನಾವು ಹಿಂಜರಿಯುವುದಿಲ್ಲ ಎಂದು ಪೋಷಕರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಶ್ರಫ್ ಪ್ರತಿಕ್ರಿಯಿ ನಾವು ಸರಕಾರಿ ಶಾಲೆಯನ್ನು ಉಳಿಸಲು ಶ್ರಮಿಸುತ್ತಿದ್ದರೆ ಶಿಕ್ಷಕರನ್ನು ಬೇಕಾಬಿಟ್ಟಿ ವರ್ಗಾವಣೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ, ಸರಕಾರಿ ಶಾಲೆ ಉಳಿಯಬೇಕಾದರೆ ಅಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇರಬೇಕು, ಈಗಿರುವ ಶಿಕ್ಷಕರನ್ನು ವರ್ಗಾವಣೆ ಮಾಡುವುದು ಸರಿಯಲ್ಲ, ವರ್ಗಾವಣೆ ವಿಚಾರದಲ್ಲಿ ಈ ಹಿಂದೆ ಶಾಸಕರ ಜೊತೆ ಮಾತನಾಡಿದ್ದು ಇದೀಗ ಮತ್ತೊಮ್ಮೆ ಶಾಸಕರ ಜೊತೆ ನಾವು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ. ಶಿಕ್ಷಕರ ವರ್ಗಾವಣೆ ವಿಚಾರದಿಂದ ಬೇಸತ್ತಿರುವ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ, ಶಿಕ್ಷಕರ ವರ್ಗಾವಣೆಯೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಎಂದು ಅವರು ತಿಳಿಸಿದರು.