ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೆ.11 ರಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ “ಗುರು ನಮನ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಇಲ್ಲಿನ ಸಹ ಶಿಕ್ಷಕರಾದ ಶ್ರೀ ರಾಧಾಕೃಷ್ಣ ರೈ ಎಂ, ಶ್ರೀಮತಿ ಪುಷ್ಪಲತಾ ಆರ್ ಕಾಮತ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿ, ಹಾಗೂ ಬಪ್ಪಳಿಗೆ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಮಿತ್ರ ಹರೀಶ್ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗೌರವ ವಂದನೆಯನ್ನು ಸ್ವೀಕರಿಸಿದ ಶ್ರೀ ರಾಧಾಕೃಷ್ಣ ರೈ ಎಂ ಮಾತನಾಡಿ, ಶಿಕ್ಷಕರಾದವರು ಮೊದಲು ಶಿಕ್ಷಣವನ್ನು, ಮಕ್ಕಳನ್ನು, ಪಾಠದ ವಿಷಯವನ್ನು ಪ್ರೀತಿಸಿ ಇದರಿಂದ ಉತ್ತಮ ಶಿಕ್ಷಕರಾಗಬಲ್ಲರಿ ಹಾಗೂ ಶಿಕ್ಷಕರಿಂದ ಪುಟ್ಟ ಮಕ್ಕಳ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಬೋಧನೆ ಎಂಬುದು ಮಾತಿನಲ್ಲಿ ಮಾತ್ರವಲ್ಲದೆ ದೇಹದಲ್ಲಿ ಹುದುಗಿ ಹೋಗಿರಬೇಕು ಎಂದರು.
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಮಿತ್ರ ಹರೀಶ್, ಅಂಗನವಾಡಿ ಕೇಂದ್ರದ ಮಹತ್ವ ,ಸೇವೆಗಳು ಮತ್ತು ಕಾರ್ಯಕ್ರಮಗಳ ಕುರಿತು ಸವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಾ. ಶೋಭಿತ ಸತೀಶ್ ಪ್ರಸ್ತಾವಿಕ ಮಾತುಗಳನ್ನಾಡಿ, ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಅನುರಾಧ ಸ್ವಾಗತಿಸಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಪ್ರಾಣೇಶ್ ಗುರುಗಳ ಕುರಿತಾಗಿ ಹಾಡಿದರು.
ಪ್ರಶಿಕ್ಷಣಾರ್ಥಿಗಳಾದ ಅಂಕಿತ, ಅನನ್ಯ, ಚರಿತ ಪ್ರಾರ್ಥಿಸಿ, ದೀಕ್ಷಾ, ರೇಣುಕಾ, ಜಸ್ಮಿತ, ಜಯಶ್ರೀ ಅತಿಥಿಗಳ ಕಿರು ಪರಿಚಯ ಮಾಡಿದರು. ಅನುಷಾ ವಂದನಾರ್ಪಣೆ ಸಲ್ಲಿಸಿದರು.