*ಸೆ.27 ಹೊಸಅಕ್ಕಿ ನೈವೇದ್ಯ ಸಮರ್ಪಣೆ
*ಸೆ.28 ಚಂಡಿಕಾಯಾಗ
*ಸೆ.29 ತುಲಾಭಾರ ಸೇವೆ
*ಅ.1 ಆಯುಧ ಪೂಜೆ

ಪುತ್ತೂರು: ರೈಲು ನಿಲ್ದಾಣದ ಬಳಿಯ ಕಾರಣಿಕ ಕ್ಷೇತ್ರ ಲಕ್ಷ್ಮೀದೇವಿ ಬೆಟ್ಟದ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ನವರಾತ್ರಿ ಉತ್ಸವಗಳಿಗೆ ಸೆ.22ರಂದು ಚಾಲನೆ ದೊರೆಯಿತು.
ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಕ್ಷೇತ್ರದ ಪಾಷಾಣಮೂರ್ತಿ, ಗುಳಿಗ ದೈವಗಳಿಗೆ ತಂಬಿಲದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಿತು. ನಂತರ ಸುಳ್ಯಪದವು ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ಭಕ್ತಾದಿಗಳಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನೆರವೇರಿತು. ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಜನೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಉತ್ಸವದಲ್ಲಿ ವಿಶೇಷವಾಗಿ ಸೆ.27ರಂದು ಮಧ್ಯಾಹ್ನ ಶ್ರೀದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ, ಸೆ.28ರಂದು ಚಂಡಿಕಾ ಯಾಗ, ಮಹಾಪೂಜೆ, ದೇವಿದರ್ಶನ, ಸೆ.29ರಂದು ತುಲಾಭಾರ ಸೇವೆ, ಅ.1ರಂದು ಸಂಜೆ ಆಯುಧ ಪೂಜೆ, ಅ.2ರಂದು ಬೆಳಿಗ್ಗೆ ಭಜನೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಭಜನೆ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಳ್ಳಲಿದೆ ಎಂದು ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.