ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 26 ಸಾವಿರ ಮೌಲ್ಯದ ಮಣೆಗಳನ್ನು ದಾನಿಗಳಿಬ್ಬರು ಸಮರ್ಪಣೆ ಮಾಡಿದರು.
ಸಾಮೆತ್ತಡ್ಕ ಸುಭೀಕ್ಷಾ ನಿಲಯದ ನಿವಾಸಿ ಲಕ್ಷ್ಮೀ ಟಿಂಬರ್ ಫರ್ನಿಚರ್ಸ್ನ ಭೀಮಯ್ಯ ಭಟ್ ಅವರು ಸುಮಾರು ರೂ. 18 ಸಾವಿರ ಮೌಲ್ಯದ ಹಲಸಿನ ಮರದ ಹಲಗೆಯನ್ನು ಕೊಡುಗೆಯಾಗಿ ದೇವಳಕ್ಕೆ ನೀಡಿದ್ದರು. ಅದೇ ಹಲಗೆಯಿಂದ ಮೋಹನ ಗೌಡ ವಾಲ್ತಾಜೆ ಎಂಬವರು ಸುಮಾರು ರೂ.8 ಸಾವಿರ ಮೌಲ್ಯದ ದೇವರ ಕಾರ್ಯಗಳಿಗೆ ಉಪಯೋಗ ಆಗುವ ಮಣೆಗಳನ್ನು ನಿರ್ಮಾಣ ಮಾಡಿ ಕೊಡುಗೆಯಾಗಿ ನೀಡಿದರು.
ಇಬ್ಬರು ದಾನಿಗಳಿಗೆ ದೇವಳದ ಶ್ರೀ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿಸಿ ಪ್ರಸಾದ ನೀಡಿ, ಶಲ್ಯ ಹೊದಿಸಿ ಗೌರವಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಾರ್ಥನೆ ಮಾಡಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದ ಗೌರವಾರ್ಥವಾಗಿ ಶಲ್ಯ ತೊಡಿಸಿದರು.