ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಇದರ ಆಶ್ರಯದಲ್ಲಿ ಯಕ್ಷರಂಗ ಪುತ್ತೂರು ಇದರ ವತಿಯಿಂದ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗ ಇವರ ಸಹಭಾಗಿತ್ವದೊಂದಿಗೆ 19 ನೇ ವರ್ಷದ ಯಕ್ಷಗಾನ ತಾಳಮದ್ದಳೆ ಹಾಗೂ ವಿಟ್ಲ ಜೋಷಿ ಹಾಗೂ ನಯನ ಕುಮಾರ್ ಸಂಸ್ಮರಣೆ ಅ. 2 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಜರಗಲಿದೆ.
ಪೂರ್ವಾಹ್ನ 9.30 ರಿಂದ ಯಕ್ಷಗಾನ ಹವ್ಯಕ ತಾಳಮದ್ದಳೆ – ಭೂಮಿಂಜಯನ ಬೊಬ್ಬೆ (ಸೇರಾಜೆ ಸೀತಾರಾಮ ಭಟ್ ವಿರಚಿತ ಹವ್ಯಕ ಪೌರಾಣಿಕ ಕಥಾನಕ) ಜರಗಲಿದೆ. ಮಧ್ಯಾಹ್ನ 12.30ರಿಂದ ರಸಿಕ ರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಗುರುಶಿಷ್ಯ – ಸಂಸ್ಕರಣೆ ಕಾರ್ಯಕ್ರಮ ಜರಗಲಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ರವರು ಭಾಗವಹಿಸಲಿದ್ದಾರೆ. ಸಂಸ್ಮರಣೆಯ ಕಾರ್ಯಕ್ರಮವನ್ನು ತೆಂಕುತಿಟ್ಟು ಯಕ್ಷಗಾನ ವೇದಿಕೆಯ ಪ್ರವರ್ತಕ ಡಾ.ಚಂದ್ರಶೇಖರ್ ದಾಮ್ಲೆ ಹಾಗೂ ಯಕ್ಷಗಾನ ಕಲೋಪಾಸಕ ಗೋವಿಂದ ಭಟ್ರವರು ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 2ರಿಂದ ಯಕ್ಷಗಾನ ತಾಳಮದ್ದಳೆ – ಶನೀಶ್ವರ ಮಹಾತ್ಮೆ ( ಗಣೇಶ್ ಕೊಲೆಕ್ಕಾಡಿ ವಿರಚಿತ ಪೌರಾಣಿಕ ಕಥಾನಕ) ನಡೆಯಲಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಆಡಳಿತಾಧಿಕಾರಿ ಶ್ರೀನಿವಾಸ ಕೆ.ವಿ ಹಾಗೂ ಪುತ್ತೂರು ಯಕ್ಷರಂಗ ಸಂಸ್ಥೆಯ ಅಧ್ಯಕ್ಷ ಸೀತಾರಾಮ ಶಾಸ್ತ್ರಿ ಕಾಡೂರು ತಿಳಿಸಿದ್ದಾರೆ.