ಆಪರೇಷನ್ ಸಿಂದೂರ ಆತ್ಮನಿರ್ಭರ ಭಾರತದ ಯಶೋಗಾಥೆ : ಚಕ್ರವರ್ತಿ ಸೂಲಿಬೆಲೆ
ಪುತ್ತೂರು: ಭಾರತದಲ್ಲಿ ಸಿಂದೂರಕ್ಕೆ ವಿಶೇಷವಾದ ಮಹತ್ವವಿದೆ. ಕಳೆದ ಕೆಲವು ತಿಂಗಳ ಹಿಂದೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಅಮಾಯಕರ ಮೇಲಿನ ದಾಳಿಗೆ ಹಲವು ಹೆಣ್ಣು ಮಕ್ಕಳು ತಮ್ಮ ಪತಿಯಂದಿರನ್ನು ಕಳೆದುಕೊಂಡ ಘಟನೆಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ತೆಗೆದುಕೊಂಡ ಧೀರ ನಡೆಗೆ ಸಂಪೂರ್ಣ ಜಗತ್ತು ಬೆರಗುಗೊಂಡಿತು. ಭಾರತದ ಈ ನಡೆ ಆತ್ಮವಿಶ್ವಾಸವನ್ನು ದುಪ್ಪಟ್ಟು ಮಾಡಿದ್ದು ಮಾತ್ರವಲ್ಲದೆ ಆತ್ಮನಿರ್ಭರ ಭಾರತದ ಯಶೋಗಾಥೆಯನ್ನು ಜಗತ್ತಿಗೆ ಸಾರಿತು ಎಂದು ಖ್ಯಾತ ವಾಗ್ಮಿಗಳು ಹಾಗೂ ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಇವರು ಅಭಿಪ್ರಾಯಪಟ್ಟರು.

ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಆಸಕ್ತ ಸಾರ್ವಜನಿಕರಿಗಾಗಿ ನಡೆಸಿದ ’ಸಿಂದೂರ- ಭಾರತದ ವಿಶ್ವರೂಪ ದರ್ಶನ’ ಎಂಬ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿ ಮಾತನಾಡಿದರು. ಇಂದು ಭಾರತವು ತಂತ್ರಜ್ಞಾನ, ಆರ್ಥಿಕತೆಯಲ್ಲಿ ಸಾಗುತ್ತಿರುವ ವೇಗವನ್ನು ಗಮನಿಸಿದರೆ ಮುಂದೊಂದು ದಿನ ಜಗದ್ವಂದ್ಯ ಭಾರತವಾಗಿ ಎಲ್ಲಾ ವಿಚಾರಗಳಲ್ಲಿ ಅಗ್ರಮಾನ್ಯ ರಾಷ್ಟ್ರ ಎಂದಿನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಭಾರತದ ಅಡಳಿತ ವ್ಯವಸ್ಥೆಯ ಬಗ್ಗೆ ವಿದೇಶಗಳಲ್ಲಿ ಕೂಗು ಎಬ್ಬಿಸುತ್ತಾ ಭಾರತ ವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವ ಹಾಗೂ ಜಾತಿ-ಜಾತಿಗಳ ನಡುವೆ ಬೆಂಕಿ ಹಚ್ಚುವ ಪ್ರಯತ್ನಗಳನ್ನು ನಡೆಸುತ್ತಿರುವವರ ವಿರುದ್ಧ ನಾವು ಇಂದು ಎಚ್ಚರಿಕೆಯಿಂದ ಇರಬೇಕಾಗಿದೆ. ಪಹಲ್ಗಾಮ್ ನಲ್ಲಿ ನಡೆದ ಘಟನೆ ಇಂದು ನಮಗೆ ಪಾಠ ಆಗಬೇಕಾಗಿದೆ ಎಂದು ನುಡಿದು ಬಳಿಕ ಈ ಕುರಿತು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಸಚಿನ್ ಶಂಕರ್ ಹಾರಕೆರೆ, ಆರ್ಥೋಪೆಡಿಕ್ ಸರ್ಜನ್ , ಮಹಾವೀರ ಆಸ್ಪತ್ರೆ, ಪುತ್ತೂರು ಇವರು ಮಾತನಾಡುತ್ತಾ? ಭಾರತದ ಸಿಂದೂರದಂತಿರುವ ಪಹಲ್ಗಾಮ್ ನಲ್ಲಿ ಭಾರತದ ಹೆಣ್ಣು ಮಕ್ಕಳ ಸಿಂದೂರಕ್ಕೆ ಧಕ್ಕೆ ತಂದಿರುವ ಪಾಕಿಸ್ತಾನಕ್ಕೆ ಸರಿಯಾದ ತಿರುಗೇಟು ನೀಡುವ ಮೂಲಕ ಭಾರತವು ನಮ್ಮೆಲ್ಲರ ರಾ?ಭಿಮಾನ ಹಾಗೂ ಆತ್ಮಗೌರವನ್ನು ಹೆಚ್ಚಿಸಿದೆ ಎಂದು ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ದೈವ ನರ್ತಕರಾದ ಹೊನ್ನಪ್ಪ ಕಲ್ಲೇಗ ಉಪಸ್ಥಿತರಿದ್ದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಅಧ್ಯಕ್ಷರಾದ ರವೀಂದ್ರ. ಪಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲರಾದ ದೇವಿ ಚರಣ್ ರೈ ಎಂ ಇವರು ವಂದಿಸಿದರು. ಕುಮಾರಿ ದೀಪ್ತಿ ಪ್ರಭು ವೈಯಕ್ತಿಕ ಗೀತೆಯನ್ನು ಹಾಡಿದರು ಹಾಗೂ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಹಂಶಿನಿ ಪ್ರಾರ್ಥಿಸಿ, ನರಸಿಂಹ ಪೈ ಕಾರ್ಯಕ್ರಮವನ್ನು ನಿರೂಪಿಸಿದರು.