ಪುತ್ತೂರು: ಬೆಂಗಳೂರು ತುಳುಕೂಟದ ಅಧ್ಯಕ್ಷ, ಕೆದಂಬಾಡಿ ಗ್ರಾಮದ ಕುಕ್ಕುಂಜೋಡು ನಿವಾಸಿ ಸುಂದರರಾಜ್ ರೈ (55 ವ.) ಹೃದಯಾಘಾತದಿಂದ ನಿಧನರಾದರು.
ದೀಪಾವಳಿ ಹಿನ್ನೆಲೆಯಲ್ಲಿ ಕುಕ್ಕುಂಜೋಡು ಮನೆಗೆ ಬಂದಿದ್ದ ಸುಂದರ್ ರಾಜ್ ರೈ ಅವರು ಅ.22ರಂದು ಬೆಂಗಳೂರಿನ ಮನೆಗೆ ತೆರಳಿದ್ದರು. ಅವರ ಜೊತೆಗಿದ್ದವರು ಮನೆ ಬಳಿ ಡ್ರಾಪ್ ಮಾಡಿ ಬಳಿಕ ತೆರಳಿದ್ದರು. ಅ.23 ಮಧ್ಯಾಹ್ನ ವೇಳೆ ನಿಧನರಾದ ಬಗ್ಗೆ ವಿಷಯ ತಿಳಿದಿರುವುದಾಗಿ ಅವರ ಸಹೋದರ ಮಹಾಬಲ ರೈ ಅವರು ಮಾಹಿತಿ ನೀಡಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಮೊದಲ ಬಾರಿಗೆ ಬೆಂಗಳೂರು ಕಂಬಳ ನಡೆದ ಸಂದರ್ಭದಲ್ಲಿ ಸುಂದರ್ ರಾಜ್ ರೈಯವರು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡು ಕಂಬಳದ ಯಶಸ್ಸಿನ ಓರ್ವ ರೂವಾರಿಯಾಗಿ ಗುರುತಿಸಿಕೊಂಡಿದ್ದರು.
ಅವರ ನಿಧನದ ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಬೆಂಗಳೂರು ಪ್ರಯಾಣ ಬೆಳೆಸಿದ್ದು, ಸುಂದರರಾಜ್ ರೈ ಅವರ ಮೃತದೇಹವನ್ನು ಕೆದಂಬಾಡಿ ಕುಕ್ಕುಂಜೋಡು ನಿವಾಸಕ್ಕೆ ತಂದು ಅ.24ರಂದು ಅಂತ್ಯಕ್ರಿಯೆ ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಪುತ್ರಿ, ಸಹೋದರರಾದ ಪ್ರಮೋದ್ ಕುಮಾರ್ ರೈ, ರಮೇಶ್ ರೈ, ಭಾರತೀಯ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ಮಹಾಬಲ ರೈ ಕುಕ್ಕುಂಜೋಡು, ಸಹೋದರಿಯರಾದ ಮಮತಾ ರೈ, ಸುಧಾ ರೈ, ಮಲ್ಲಿಕಾ ರೈ ಅವರನ್ನು ಅಗಲಿದ್ದಾರೆ.