ಗ್ಯಾರೇಜ್ ಕಾರ್ಮಿಕರನ್ನು ಸರ್ಕಾರದ ಕಾರ್ಮಿಕ ಯೋಜನೆಗೆ ಸೇರಿಸಲಾಗಿದೆ: ಅಶೋಕ್ ರೈ
ಗ್ಯಾರೇಜ್ ಮ್ಹಾಲಕರ ಸಂಘ ಸಾರ್ಥಕ ಕಾರ್ಯ ನಡೆಸುತ್ತಿದೆ: ದಯಾನಂದ ಕತ್ತಲ್ ಸರ್
ವಿಟ್ಲ: ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯದ ಮಹಾ ಸಭೆ ಹಾಗೂ ಪದಗ್ರಹಣ ಸಮಾರಂಭ ಚಂದಳಿಕೆ ಭಾರತ ಆಡಿಟೋರಿಯಂ ನಲ್ಲಿ ನಡೆಯಿತು.
ಪುತ್ತೂರು ಶಾಸಕ ಅಶೋಕ ಕುಮಾರ ರೈರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ,ಗ್ಯಾರೇಜ್ ಕಾರ್ಮಿಕರನ್ನು ಸರ್ಕಾರದ ಕಾರ್ಮಿಕ ಯೋಜನೆಗೆ ಸೇರಿಸಲಾಗಿದೆ.
ಇನ್ನು ಎರಡು ವರ್ಷಗಳ ಒಳಗೆ ಸುಮಾರು 60 ಕೋಟಿ ವೆಚ್ಚದಲ್ಲಿ ಕಬಕ ವಿಟ್ಲ ರಸ್ತೆ ಚತುಷ್ಪಥವಾಗಲಿದೆ. ವಿಟ್ಲ ವಲಯ ಗ್ಯಾರೇಜ್ ಮ್ಹಾಲಕರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕೊಡುವಲ್ಲಿ ಪೂರಕವಾಗಿ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪೂರ್ವಾಧ್ಯಕ್ಷ ದಯಾನಂದ ಜಿ. ಕತ್ತಲ್ ಸರ್ ಮಾತನಾಡಿ, ದಕ್ಷಿಣ ಕನ್ನಡ ಗ್ಯಾರೇಜ್ ಮ್ಹಾಲಕರ ಸಂಘ ಸಾರ್ಥಕ ಕಾರ್ಯ ನಡೆಸುತ್ತಿದೆ. ಏಕತ್ವ ತತ್ವ, ಸಿದ್ಧಾಂತಗಳೊಂದಿಗೆ ಸತ್ಕಾರ್ಯ ನಡೆಸುವ ಸಂಸ್ಥೆಯಾಗಿ ಬೆಳೆಯುತ್ತಿದೆ. ಗ್ಯಾರೇಜ್ ಕಾರ್ಮಿಕರಲ್ಲಿ ವೃತ್ತಿ ಬದ್ಧತೆಯೊಂದಿಗೆ ಸೇವಾ ಮನೋಭಾವ ಇದ್ದಾಗ ಜನಮಾನಸದಲ್ಲಿ ಗುರುತಿಸಿ ಕೊಳ್ಳುತ್ತಾರೆ. ಗ್ಯಾರೇಜ್ ಸಹಾಯವಾಣಿ ಇದ್ದರೆ ಜನರಿಗೆ ಅನುಕೂಲವಾಗುತ್ತದೆ. ಗ್ಯಾರೇಜ್ ಕಾರ್ಮಿಕರು ಜೀವವಿಮೆಯಂತಹ ಭದ್ರತೆಯನ್ನು ಮಾಡಬೇಕು ಎಂದರು.
ವಿಟ್ಲ ಜೂನಿಯರ್ ಕಾಲೇಜು ನಿವೃತ್ತ ಪ್ರಾಂಶುಪಾಲ ಎಚ್. ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿಟ್ಲ ವಲಯ ಗ್ಯಾರೇಜ್ ಮ್ಹಾಲಕರ ಸಂಘದ ಅಧ್ಯಕ್ಷ ಲಿಯೋ ಡಿ ಲಸ್ರಾದೋ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಎಚ್. ಸುಬ್ರಹ್ಮಣ್ಯ ಭಟ್, ದಯಾನಂದ ಜಿ. ಕತ್ತಲ್ ಸಾರ್, ಉದ್ಯಮಿ ಅಝೀಝ್ ಸನ, ಪೊಲೀಸ್ ಅಧಿಕಾರಿ ರಫೀಕ್ ಕೆ. ಎಂ., ದಿನೇಶ್ ಬಂಗೇರ ಮಂಗಳೂರು ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಗೌರವ ಸಲಹೆಗಾರ ಎನ್. ಸುಂದರ ಆಚಾರ್ಯ ಸ್ವಾಗತಿಸಿದರು. ಲೆಕ್ಕಪರಿಶೋಧಕ ಪಡಾರು ಚಂದ್ರಶೇಖರ ಭಟ್ ಪ್ರಸ್ತಾವನೆಗೈದು, ವರದಿ ವಾಚಿಸಿದರು. ಮಾಜಿ ಕಾರ್ಯದರ್ಶಿ ರಾಜಶೇಖರ ವಂದಿಸಿದರು. ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು.