ನೆಲ್ಯಾಡಿ: 2025ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಲಾ ವಿದ್ಯಾರ್ಥಿನಿ, ಬಹುಮುಖ ಪ್ರತಿಭಟೆ ಅರ್ಚನಾ ಎಸ್.ಅವರಿಗೆ ಅದ್ದೂರಿ ಸ್ವಾಗತ ಹಾಗೂ 52ನೇ ಕನ್ನಡ ರಾಜ್ಯೋತ್ಸವ ಆಚರಣೆ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ವಿದ್ಯಾರ್ಥಿನಿ ಅರ್ಚನಾ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು. ಸಂಸ್ಥೆಯ ಸಂಚಾಲಕರಾದ ಡಾ| ಫಾ. ವರ್ಗೀಸ್ ಕೈಪಿನಡ್ಕ, ಕಾರ್ಯದರ್ಶಿ ಫಾ.ಸಾಮ್ಯುಯಲ್ ಜಾರ್ಜ್, ಜೊತೆ ಕಾರ್ಯದರ್ಶಿ ಫಾ.ವರ್ಗೀಸ್, ಉಪಪ್ರಾಂಶುಪಾಲ ಜೋಸ್ ಎಂ.ಜೆ., ಹೈಸ್ಕೂಲ್ ವಿಭಾಗದ ಮುಖ್ಯಶಿಕ್ಷಕ ಜಾರ್ಜ್ ಕೆ.ತೋಮಸ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕ ಜೋಸ್ ಪ್ರಕಾಶ್, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ನಡೆದ ಸಭೆಯಲ್ಲಿ ಹಿರಿಯ ಶಿಕ್ಷಕಿ ರಾಜಮ್ಮ, ಸಂಸ್ಥೆಯ ಕಾರ್ಯದರ್ಶಿ ಫಾ.ಸಾಮ್ಯುಯಲ್ರವರು ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿನಿ ಅರ್ಚನಾ ಎಸ್.ಅವರ ಸಾಧನೆಯನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸನ್ನಿ ಕೆ.ಎಸ್, ಸದಸ್ಯರು, ಉಪನ್ಯಾಸಕರು, ಶಿಕ್ಷಕರು, ಕಚೇರಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.