ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾನೂನು ಅರಿವು – ನೆರವು ಘಟಕ ಹಾಗೂ ಭಾರತೀಯ ಕಿಸಾನ್ ಸಂಘ ಎಣ್ಮುರು ವಲಯ ಇದರ ಸಹಯೋಗದಲ್ಲಿ ‘ಯುವ ಮತ್ತು ಮಹಿಳಾ ಸಬಲೀಕರಣ ಹಾಗೂ ನಾಗರಿಕ ಶಿಷ್ಟಚಾರ ಅರಿವು’ ಎಂಬ ವಿಶೇಷ ಕಾರ್ಯಕ್ರಮ ನಿಂತಿಕಲ್ಲಿನ ಕಟ್ಟ ಚಂದ್ರಬಾಗಿ ಕಾಂತಪ್ಪ ಶೆಟ್ಟಿ ಸಭಾಭವನದಲ್ಲಿ ನ.15ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಂ. ಜಿ ಸತ್ಯನಾರಾಯಣ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮಾಡುವ ಮೂಲಕ ನೆರವೇರಿಸಿದರು.
ಪುತ್ತೂರಿನ ಖ್ಯಾತ ನ್ಯಾಯವಾದಿ ಹಾಗೂ ಪುತ್ತೂರು ವಿವೇಕಾನಂದ ಕಾನೂನು ಮಹಾ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ನಾಗೇಶ್ ಶರ್ಮ ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಕರ್ನಾಟಕ ಭೂಕಂದಾಯ ಕಾಯ್ದೆ– ಆಕ್ರಮ ಸಕ್ರಮ, ಕುಮ್ಮಿ ಹಾಗೂ ಭೂ ಪರಿವರ್ತನೆ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ಸುಮಾರು ಎರಡೂ ಗಂಟೆಗಳ ಕೃಷಿಕರೊಂದಿಗೆ ವಿಶೇಷ ಸಂವಾದವನ್ನು ನಡೆಸಿದರು. ಸುಳ್ಯ ತಾಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎನ್.ಜಿ ಪ್ರಭಾಕರ ರೈ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕ ಲಕ್ಷ್ಮಿಕಾಂತ ಎ. ಪ್ರಾಸ್ತವಿಕವಾಗಿ ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿದರು.
ವೇದಿಕೆಯಲ್ಲಿ ವಲಯ ಕಿಸಾನ್ ಸಂಘದ ಅಧ್ಯಕ್ಷ ಶ್ರೀನಂದನ್ ಕೆ. ಉಪಸ್ಥಿತರಿದ್ದರು. ಕಾನೂನು ವಿದ್ಯಾರ್ಥಿ ಹಿತಾಶ್ರೀ ಪ್ರಾರ್ಥಿಸಿ, ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕು. ದೇವಿಕಾ ಸ್ವಾಗತಿಸಿ, ವರದಶಂಕರ ಕೆ ವಂದಿಸಿದರು. ಸುಳ್ಯ ತಾಲೂಕಿನ ಕಿಸಾನ್ ಸಂಘದ ಸದಸ್ಯರು ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.