ಪುತ್ತೂರು: ಕರ್ನಾಟಕ ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರ ಧ್ವಜಸ್ತಂಭ ಪುತ್ತೂರಿನಲ್ಲಿ ನಿರ್ಮಾಣವಾಗಲಿದ್ದು, ಇದರ ಶಿಲಾನ್ಯಾಸ ಕಾರ್ಯಕ್ರಮ ಡಿ.6ರಂದು ಬೆಳಿಗ್ಗೆ ನಡೆಯಲಿದೆ.
ಪುತ್ತೂರು ಶಾಸಕ ಅಶೋಕ್ ರೈ ನೂತನ ಧ್ವಜಸ್ತಂಭಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪುತ್ತೂರಿನ ನೆಲ್ಲಿಕಟ್ಟೆ ಪಾರ್ಕ್ನಲ್ಲಿ ಈ ರಾಷ್ಟ್ರ ಧ್ವಜ ರಾರಾಜಿಸಲಿದೆ.
ಈ ಧ್ವಜದ ಕಂಬ 80 ಮೀಟರ್ ಎತ್ತರವನ್ನು ಹೊಂದಿದ್ದು, ಧ್ವಜವು 45 ಫೀಟ್ ಅಗಲ ಮತ್ತು 20 ಫೀಟ್ ಉದ್ದವನ್ನು ಹೊಂದಿದೆ. ಇದೇ ರೀತಿಯ ಧ್ವಜ ಕರ್ನಾಟಕದ ಬೆಳಗಾವಿಯಲ್ಲಿ ಅತೀ ದೊಡ್ಡದಾಗಿದ್ದು, ಎರಡನೇ ಸ್ಥಾನದಲ್ಲಿ ಹಂಪಿ ವಿಜಯನಗರದಲ್ಲಿರುವ ಧ್ವಜಸ್ತಂಭವಾಗಿದೆ. ಮೂರನೇಯ ಅತೀ ದೊಡ್ಡ ಧ್ವಜಸ್ತಂಭ ಪುತ್ತೂರಿನಲ್ಲಿ ನಿರ್ಮಾಣವಾಗಲಿದ್ದು, ನಾಲ್ಕನೇ ಸ್ಥಾನದಲ್ಲಿ ಮಂಗಳೂರಿನಲ್ಲಿರುವ ಧ್ವಜಸ್ತಂಭ ಈ ಸಾಲಿಗೆ ಸೇರಿದೆ.
ಕಾರ್ಯಕ್ರಮದಲ್ಲಿ ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ನಿಹಾಲ್ ಪಿ ಶೆಟ್ಟಿ, ನಗರಸಭೆಯ ಪೌರಾಯುಕ್ತರಾದ ವಿದ್ಯಾಕಾಳೆ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪೂಡಾ ಮತ್ತು ನಗರಸಭೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
