ಉಪ್ಪಿನಂಗಡಿ: ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ತನ್ನ ಸಂಬಂಧಿಕರಿಗೆ ತುರ್ತು ಅಗತ್ಯದ ನೆಲೆಯಲ್ಲಿ ಫೋನ್ ಪೇ ಮೂಲಕ ಕಳುಹಿಸಲಾದ ಹಣ ಕಣ್ತಪ್ಪಿನಿಂದಾಗಿ ಇನ್ನೊಬ್ಬರ ಖಾತೆಗೆ ಹೋದ ಪ್ರಕರಣದಲ್ಲಿ ಹಣ ಮರುಪಾವತಿ ಮಾಡಲು ನಿರಾಕರಿಸಿದ ಉಜಿರೆಯ ಉದ್ಯಮಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಉಪ್ಪಿನಂಗಡಿಯ ಮಠ ಎಂಬಲ್ಲಿ ಗ್ರಾನೈಟ್ ಉದ್ಯಮವನ್ನು ನಡೆಸಿಕೊಂಡಿರುವ ಹರಿರಾಮ್ ಎಂಬವರು ದೂರು ನೀಡಿದ್ದು, ತನ್ನ ರಾಜಸ್ಥಾನದಲ್ಲಿನ ಸಂಬಂಧಿಕನಾದ ಲಕ್ಷ್ಮೀಚಂದ್ ಎಂಬವರಿಗೆ ಕಳುಹಿಸಬೇಕಾದ 19,೦೦೦ ರೂ. ಮೊತ್ತ ಕಣ್ತಪ್ಪಿನಿಂದಾಗಿ ಉಜಿರೆಯಲ್ಲಿ ಬಟ್ಟೆ ಅಂಗಡಿ ಹಾಗು ತರಕಾರಿ ಅಂಗಡಿಯನ್ನು ಹೊಂದಿರುವ ಉದ್ಯಮಿಯೋರ್ವರ ಖಾತೆಗೆ ವರ್ಗಾವಣೆಗೊಂಡಿದ್ದು, ಈ ಮೊತ್ತದಲ್ಲಿ 10,೦೦೦ ರೂ. ವನ್ನು ಹಿಂದಿರುಗಿಸಿ ಉಳಿದ ಮೊತ್ತವನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
