ಆಲಂಕಾರು: ಸಚಿವ ಅಂಗಾರ ಎಸ್.ರವರು ಸೀಮಾ ದೇವಸ್ಥಾನವಾದ ಶ್ರೀಕ್ಷೇತ್ರ ಶರವೂರು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದು ಬಳಿಕ ದೇವಾಲಯದ ಜೀರ್ಣೋದ್ದಾರ ಕುರಿತು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಹಾಗು ಸದಸ್ಯರೊಂದಿಗೆ ಸಭೆ ನಡೆಸಿದರು.
ಶ್ರೀದೇವಳದ ಗರ್ಭಗುಡಿ ಹಾಗೂ ಗೋಪುರ ಶಿಥಿಲಗೊಂಡಿರುವುದರಿಂದ ಪುನರ್ ನಿರ್ಮಾಣವಾಗಬೇಕೆಂದು ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿರುವಂತೆ ವ್ಯವಸ್ಥಾಪನಾ ಸಮಿತಿಯು ದೇವಾಲಯದ ಜೀರ್ಣೋದ್ಧಾರಕ್ಕಾಗಿ ಮಾಸ್ಟರ್ ಪ್ಲಾನ್ ಯೋಜನೆಯಂತೆ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ಸಚಿವರು ವ್ಯವಸ್ಥಾಪನಾ ಸಮಿತಿಯವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ದೇವಸ್ಥಾನದ ಪುನರ್ ನಿರ್ಮಾಣ ಹಾಗೂ ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿಯ ಬಗ್ಗೆ ಇನ್ನೊಮ್ಮೆ ಜೋತಿಷಿಯವರ ಮುಖಾಂತರ ಶ್ರೀಕ್ಷೇತ್ರದಲ್ಲಿ, ಭಕ್ತಾಧಿಗಳ ಹಾಗೂ ತಂತ್ರಿಯವರ ಉಪಸ್ಥಿತಿಯಲ್ಲಿ ಶೀಘ್ರವಾಗಿ ಪ್ರಶ್ನೆ ಚಿಂತನೆ ಮಾಡಿಸಿ ಆನಂತರ ಭಕ್ತಾಧಿಗಳು ಮತ್ತು ಸರ್ಕಾರದ ಸಹಕಾರದಿಂದ ಶ್ರೀದೇವಾಲಯ ಪುನರ್ ನಿರ್ಮಾಣ ಹಾಗೂ ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಕೆಲಸ ಕಾರ್ಯಗಳನ್ನು ಮಾಡಲು ಸರ್ಕಾರದ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಕಾನೂನು, ನಿಯಮಗಳನ್ನು ಪಾಲಿಸಿಕೊಂಡು ಮುಂದುವರಿಯಲು ವ್ಯವಸ್ಥಾಪನಾ ಸಮಿತಿಯವರಿಗೆ ಸಚಿವರು ಸೂಚನೆ ನೀಡಿದರು ಹಾಗು ದೇವಾಲಯದ ಸಮಗ್ರ ಅಭಿವೃದ್ಧಿಗೆ ಸರಕಾರದಿಂದ ಹಾಗೂ ವೈಯ್ಯಕ್ತಿಕ ವಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆ ಸ್ವಾಗತಿಸಿ ದೇವಲಯಾದ ವತಿಯಿಂದ ಸಚಿವರನ್ನು ಗೌರವಿಸಿದರು. ಸಮಿತಿಯ ಸದಸ್ಯರಾದ ರಾಘವೇಂದ್ರ ಪ್ರಸಾದ್.ಟಿ, ಶೀನಪ್ಪ ಕುಂಬಾರ ಪ್ರಶಾಂತ್ ಕುಮಾರ್ ರೈ ಮನವಳಿಕೆ, ಲಕ್ಷ್ಮೀ ನಾರಾಯಣ ಅಡೀಲು, ಬಾಬು ಕುಪ್ಲಾಜೆ ಮರುವಂತಿಲ, ಅಶಾ ಈಶ್ವರಭಟ್, ಮಂಜುಳಾ ಚಂದ್ರಶೇಖರ್ ಕಲ್ಲೇರಿ ಉಪಸ್ಥಿತರಿದ್ದರು ಹಾಗು ಪ್ರಮುಖರು ಉಪಸ್ಥಿತರಿದ್ದರು.