‘ಪತ್ರಕರ್ತರನ್ನೂ ಯಶಸ್ವಿನಿ ಯೋಜನೆ ವ್ಯಾಪ್ತಿಗೆ ತರಬೇಕು’ : ಕರ್ನಾಟಕ ಸರಕಾರಕ್ಕೆ ಶಿವಾನಂದ ತಗಡೂರು ಆಗ್ರಹ

0

ಬೆಂಗಳೂರು:ರಾಜ್ಯದ ಯಶಸ್ವಿನಿ ಯೋಜನೆಯನ್ನು ಸಮಗ್ರವಾಗಿ ಸರಳೀಕರಣಗೊಳಿಸಿ ಪರಿಷ್ಕರಿಸಿ, ಪತ್ರಕರ್ತರನ್ನೂ ಯೋಜನೆ ವ್ಯಾಪ್ತಿಗೆ ತರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸರಕಾರವನ್ನು ಆಗ್ರಹಿಸಿದ್ದಾರೆ.

ಯಶಸ್ವಿನಿ ಯೋಜನೆ ಸೂಕ್ತವಾಗಿ ಪರಿಷ್ಕೃತವಾಗಿಲ್ಲ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ತಗಡೂರು ಟೀಕಿಸಿದ್ದಾರೆ. ಈ ಸಂಬಂಧ ಅವರಿಂದು ಟ್ವೀಟ್ ಮಾಡಿದ್ದಾರೆ. ಈ ಯೋಜನೆಯಲ್ಲಿ ಪ್ರಸ್ತಾಪಿಸಿರುವ ಪ್ರಧಾನ ಅಂಶದ ಬಗ್ಗೆ ಅವರು ಸರ್ಕಾರದ ಗಮನ ಸೆಳೆದಿದ್ದಾರೆ. ‘ಪ್ರಧಾನ ಅರ್ಜಿದಾರರು ಮತ್ತು ಆತನ ಕುಟುಂಬದ ಯಾವುದೇ ಸದಸ್ಯನು ಸರ್ಕಾರಿ ನೌಕರನಾಗಿ ಅಥವಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ವೇತನ ಪಡೆಯುತ್ತಿದ್ದಲ್ಲಿ ಈ ಯೋಜನೆಗೆ ಅರ್ಹರಿರುವುದಿಲ್ಲ. ಪ್ರಧಾನ ಅರ್ಜಿದಾರರು ಅಥವಾ ಅವನ ಕುಟುಂಬದ ಸದಸ್ಯರು ಯಾವುದೇ ವಿಮಾ ಯೋಜನೆಯಡಿ ಸದಸ್ಯನಾಗಿದ್ದಲ್ಲಿ ಅಂತವರೂ ಯಶಸ್ವಿನಿ ಯೋಜನೆಯಡಿ ಸದಸ್ಯನಾಗಲು ಅರ್ಹರಿರುವುದಿಲ್ಲ’. ಹೀಗೆ ಉಲ್ಲೇಖಿಸಿರುವುದರಿಂದ ಅರ್ಹರು ಈ ಯೋಜನೆ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಕೊಟ್ಟಂಗೂ ಆಗಬೇಕು, ಸಿಗದಂಗೂ ಇರಬೇಕು ಎನ್ನುವುದಕ್ಕೆ ಯಶಸ್ವಿನಿ ಯೋಜನೆ ಸೇರ್ಪಡೆ ಆಗುತ್ತಿರುವುದು ತಾಜಾ ಉದಾಹರಣೆ ಎಂದಿರುವ ಶಿವಾನಂದ ತಗಡೂರು, ಸರ್ಕಾರಕ್ಕೆ ಜನಸಾಮಾನ್ಯರ ಆರೋಗ್ಯವೇ ಆದ್ಯತೆ ಆಗಬೇಕು. ಮತ್ತೊಮ್ಮೆ ಯಶಸ್ವಿನಿ ಯೋಜನೆಯನ್ನು ಸಮಗ್ರವಾಗಿ, ಸರಳೀಕರಣಗೊಳಿಸಿ ಪರಿಷ್ಕರಿಸಬೇಕು. ಪತ್ರಕರ್ತರನ್ನೂ ಯೋಜನೆ ವ್ಯಾಪ್ತಿಗೆ ತರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here