![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ತುಮಕೂರಿನಲ್ಲಿ ನಡೆಯಲಿರುವ, ಸ್ವಾಮೀ ವಿವೇಕಾನಂದರ ಸರ್ವ ಧರ್ಮ ಸಮ್ಮೇಳನದ ಚಿಕಾಗೋ ಭಾಷಣದ 129ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡರವರು ಸ್ವಾಮೀ ವಿವೇಕಾನಂದ ಭಾವೈಕ್ಯ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅ 30ರಂದು ತುಮಕೂರಿನ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜಿನ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಭವನದಲ್ಲಿ ಶ್ರೀ ಬೇಲಿ ಮಠ ಮಹಾ ಸಂಸ್ಥಾನ ಬೆಂಗಳೂರು ಇದರ ಶ್ರೀ ವಿ.ಪ್ರ.ಶಿವಾನುಭವ ಚರಪೂರ್ತಿ ಮಹಾಸ್ವಾಮೀಗಳ ಸಾನಿಧ್ಯದಲ್ಲಿ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಲಂಚ ರಹಿತವಾಗಿ ಉತ್ತಮ ಸೇವೆ ನೀಡುತ್ತಿರುವ ಅಧಿಕಾರಿಯಾಗಿ ಸುದ್ದಿ ಜನಾಂದೋಲನ ವೇದಿಕೆ ಮೂಲಕ ಜನರಿಂದ ಆಯ್ಕೆಯಾಗಿರುವುದನ್ನು ಗುರುತಿಸಿ ಅಶೋಕ್ ಗೌಡ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಳೆದ ಬಾರಿ ಸಮಾಜ ಸೇವೆಯನ್ನು ಗುರುತಿಸಿ ಸಿದ್ದಗಂಗಾ ಶ್ರೀ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೂ ಆಯ್ಕೆಯಾಗಿದ್ದ ಅಶೋಕ್ರವರು ಮೈಸೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣದ ಮೂಲಕ ಅರ್ಥಶಾಸವನ್ನು ಅಧ್ಯಯನ ಮಾಡಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರೈಸಿರುತ್ತಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಶೋಕ್ರವರು ತಾನು ವಿದ್ಯಾಭ್ಯಾಸ ಮಾಡಿರುವ ಉಪ್ಪಿನಂಗಡಿ ಪುಳಿತ್ತಡಿ ಸ.ಹಿ.ಪ್ರಾ.ಶಾಲೆಯಲ್ಲಿ ನಾಮ ನಿರ್ದೇಶಿತ ಶಿಕ್ಷಣ ತಜ್ಞನಾಗಿ ಹಾಗೂ ಶಾಲಾ ಸುವರ್ಣ ಮಹೋತ್ಸವ ಸಮಿತಿಯಲ್ಲಿ ಜತೆ ಕಾರ್ಯದರ್ಶಿಯಾಗಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರಾಗಿ, ಪುಳಿತ್ತಡಿ ಮಯೂರ ಮಿತ್ರ ವೃಂದದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ತುಳು ನಾಟಕಗಳಲ್ಲಿ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ. ಪ್ರಸ್ತುತ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿಯಾಗಿರುವ ಇವರು ಉಪ್ಪಿನಂಗಡಿ ಪುಳಿತ್ತಡಿ ಸುದ್ದಿ ಬಿಡುಗಡೆ ಏಜೆಂಟ್ ಶೇಷಪ್ಪ ಗೌಡ ಮತ್ತು ಕಮಲ ದಂಪತಿಯ ಪುತ್ರ.