ಪುತ್ತೂರು ಮೂಲದ ವೈದ್ಯ ಡಾ.ಕೃಷ್ಣಮೂರ್ತಿ ನಿಗೂಢ ಸಾವು ಪ್ರಕರಣ

0

ಕುಂದಾಪುರ, ಬದಿಯಡ್ಕ ಪೊಲೀಸರಿಂದ ಮುಂದುವರಿದ ಪ್ರತ್ಯೇಕ ತನಿಖೆ
ಸಿ.ಸಿ.ಟಿ.ವಿ. ಪರಿಶೀಲನೆ; ರೈಲ್ವೇ ಇಲಾಖೆಯಿಂದಲೂ ಮಾಹಿತಿ ಸಂಗ್ರಹ

ಪುತ್ತೂರು: ಮೂಲತಃ ಪುತ್ತೂರಿನವರಾಗಿದ್ದು ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಸುಮಾರು 30 ವರ್ಷಗಳಿಂದ ಹೆಸರಾಂತ ದಂತ ವೈದ್ಯರಾಗಿದ್ದ ಡಾ. ಕೃಷ್ಣಮೂರ್ತಿ ಸರ್ಪಂಗಳ (57 ವ.)ರವರು ಕುಂದಾಪುರದಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆಯ ತನಿಖೆ ಮುಂದುವರಿದಿದೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ನಾಪತ್ತೆ ಕೇಸ್ ದಾಖಲಿಸಿಕೊಂಡಿರುವ ಕಾಸರಗೋಡು ಬದಿಯಡ್ಕ ಠಾಣಾ ಪೊಲೀಸರು ಪ್ರತ್ಯೇಕ ತನಿಖೆ ಮುಂದುವರಿಸಿದ್ದಾರೆ. ಕಾಸರಗೋಡು, ಬದಿಯಡ್ಕ ಮತ್ತು ಕುಂದಾಪುರ ಪರಿಸರದಲ್ಲಿ ಸಿ.ಸಿ.ಟಿ.ವಿ. ಪರಿಶೀಲನಾ ಕಾರ್ಯ ನಡೆಯುತ್ತಿದ್ದು ರೈಲ್ವೇ ಇಲಾಖೆಯಿಂದಲೂ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಡಾ.ಕೃಷ್ಣಮೂರ್ತಿ ಸಾವಿನ ಪ್ರಕರಣ-ಮುಂದುವರಿದ ನಿಗೂಢತೆ:
ಕಾಸರಗೋಡು ಬದಿಯಡ್ಕದ ತನ್ನ ಕ್ಲಿನಿಕ್‌ನಿಂದ ನ.8ರಂದು ನಾಪತ್ತೆಯಾಗಿದ್ದ ಡಾ.ಕೃಷ್ಣಮೂರ್ತಿಯವರ ಮೃತದೇಹ ಕುಂದಾಪುರದ ಕುತಲ್ಲೂರು ಸಮೀಪದ ರಾಜಾಡಿಯ ಕಡೆಗೆ ತೆರಳುವ ರಸ್ತೆಯಲ್ಲಿನ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆ ಎಂಬಲ್ಲಿನ ರೈಲು ಹಳಿಯಲ್ಲಿ ಎರಡು ಭಾಗವಾದ ಸ್ಥಿತಿಯಲ್ಲಿ ನ.10ರಂದು ಪತ್ತೆಯಾಗಿತ್ತು. ದೇಹದ ತಲೆ ಭಾಗ ಒಂದು ಕಡೆ ಇದ್ದರೆ ಅಲ್ಲಿಂದ 50 ಮೀಟರ್ ದೂರದಲ್ಲಿ ದೇಹದ ಉಳಿದ ಭಾಗ ಪತ್ತೆಯಾಗಿತ್ತು. ಮೃತದೇಹ ಪತ್ತೆಯಾದ ಬಳಿಕ ರೈಲ್ವೇ ಟ್ರ್ಯಾಕ್‌ಮೆನ್ ಗಣೇಶ ಕೆ. ನೀಡಿದ ದೂರಿನಂತೆ ರೈಲು ಹಳಿಯಲ್ಲಿ ಮಲಗಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕುಂದಾಪುರ ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಪುತ್ತೂರಿನಲ್ಲಿ ಸರ್ಕಲ್

ಇನ್ಸ್‌ಪೆಕ್ಟರ್ ಆಗಿದ್ದು ಪ್ರಸ್ತುತ ಕುಂದಾಪುರದಲ್ಲಿ ಡಿವೈಎಸ್ಪಿಯಾಗಿರುವ ಶ್ರೀಕಾಂತ್ ನೇತೃತ್ವದಲ್ಲಿ ತನಿಖೆ ಆರಂಭವಾಗಿತ್ತು.

ವೃತ್ತ ನಿರೀಕ್ಷಕ ಗೋಪಿಕೃಷ್ಣ ಮತ್ತು ಕಂಡ್ಲೂರು ಠಾಣಾಧಿಕಾರಿ ಪವನ್ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದಂತೆಯೇ ಕಾಸರಗೋಡು ಬದಿಯಡ್ಕದಿಂದ ಡಾ.ಕೃಷ್ಣಮೂರ್ತಿಯವರು ನಾಪತ್ತೆಯಾದ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಬದಿಯಡ್ಕ ಠಾಣಾ ಪೊಲೀಸರು ಡಾ.ಕೃಷ್ಣಮೂರ್ತಿಯವರ ಮನೆಯವರೊಂದಿಗೆ ಕುಂದಾಪುರಕ್ಕೆ ತೆರಳಿದ್ದರು.
ನ.8ರಂದು ಬೆಳಗ್ಗೆ 8ರ ಸುಮಾರಿಗೆ ಡಾ. ಕೃಷ್ಣಮೂರ್ತಿ ಅವರು ತಮ್ಮ ಕ್ಲಿನಿಕ್‌ಗೆ ತೆರಳಿ ಎಂದಿನಂತೆ ಕೆಲಸ ಆರಂಭಿಸಿದ್ದರು. ಬೆಳಗ್ಗೆ 11ರ ಸುಮಾರಿಗೆ ಕ್ಲಿನಿಕ್‌ಗೆ ತಪಾಸಣೆಗೆಂದು ಮುಸ್ಲಿಂ ಯುವತಿಯೊಬ್ಬರು ಬಂದಿದ್ದರು. ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಡಾ.ಕೃಷ್ಣಮೂರ್ತಿ ಮೇಲೆ ಗುಂಪೊಂದು ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿತ್ತು. ಈ ವೇಳೆ ಅಲ್ಲಿದ್ದವರು ತಡೆದಿದ್ದರು. ಇದಲ್ಲದೆ ವೈದ್ಯರ ವಿರುದ್ಧ ಕೇಸು ದಾಖಲಿಸುವುದಾಗಿಯೂ ಆ ಗುಂಪು ಬೆದರಿಕೆ ಹಾಕಿತ್ತು ಎಂದು ಅದಾಗಲೇ ಮಾಹಿತಿ ಸಂಗ್ರಹಿಸಿದ್ದ ಬದಿಯಡ್ಕ ಪೊಲೀಸರು ನ.8ರಂದು ಮಧ್ಯಾಹ್ನ ತನ್ನ ಕ್ಲಿನಿಕ್‌ನಲ್ಲಿ ಮೊಬೈಲ್ ಫೋನ್ ಬಿಟ್ಟು ಹೋಗಿದ್ದ ಡಾ.ಕೃಷ್ಣಮೂರ್ತಿಯವರು 12 ಗಂಟೆಗೆ ತನ್ನ ಬೈಕನ್ನು ಬದಿಯಡ್ಕ ಪೇಟೆಯಲ್ಲಿಟ್ಟು ಆ ಬಳಿಕ ನಾಪತ್ತೆಯಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡಿದ್ದರು. ಮುಸ್ಲಿಂ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಡಾ.ಕೃಷ್ಣಮೂರ್ತಿಯವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದ ಬದಿಯಡ್ಕ ಪೊಲೀಸರು ಈ ಕುರಿತೂ ಮಾಹಿತಿ ಕಲೆ ಹಾಕುವುದರೊಂದಿಗೆ ಡಾ.ಕೃಷ್ಣಮೂರ್ತಿಯವರ ಮನೆಯವರೊಂದಿಗೆ ಕುಂದಾಪುರಕ್ಕೆ ತೆರಳಿದ್ದರು. ಮೃತದೇಹದ ಮೇಲಿದ್ದ ಜನಿವಾರ, ಹಿಂಬದಿ ದೇಹದಲ್ಲಿದ್ದ ಕಪ್ಪು ಮಚ್ಚೆ ಮತ್ತು ಒಳ ಉಡುಪುಗಳನ್ನು ಗುರುತಿಸಿ ಇದು ಕೃಷ್ಣಮೂರ್ತಿ ಅವರದೇ ಮೃತದೇಹ ಎಂದು ಡಾ.ಕೃಷ್ಣಮೂರ್ತಿಯವರ ಸಹೋದರ ಡಾ. ರಾಮ್‌ಮೋಹನ್ ಪುತ್ತೂರು, ಬಾವ ಮನೋಹರ್, ಸ್ನೇಹಿತ ಉದಯ್‌ಕುಮಾರ್, ಆಸ್ಪತ್ರೆ ಕಂಪೌಂಡರ್ ಸಿ.ಎಚ್. ಪರಮೇಶ್ವರ ಭಟ್ ಮತ್ತು ಡಾ.ಕೃಷ್ಣಮೂರ್ತಿಯವರ ಪುತ್ರಿ ವರ್ಷಾರವರು ಖಚಿತಪಡಿಸಿದ್ದರು.

ಪ್ರತ್ಯೇಕ ತನಿಖೆ: ಡಾ. ಕೃಷ್ಣಮೂರ್ತಿ ಅವರು ಮುಸ್ಲಿಂ ಯುವತಿಗೆ ಕಿರುಕುಳ ನೀಡಿದರೆಂಬ ಆರೋಪ ಎದುರಿಸಿರುವುದು ಅವರ ಸಾವಿಗೆ ಕಾರಣ ಆಯಿತೇ ಅಥವಾ ಜಾಗದ ವಿಚಾರಕ್ಕೆ ಸಂಬಂಧಿಸಿದ ತಗಾದೆ ಕಾರಣವಾಯಿತೇ ಎಂಬುದರ ಕುರಿತು ಬದಿಯಡ್ಕ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಜಾಗದ ವಿಚಾರವಾಗಿ ೬ ತಿಂಗಳುಗಳಿಂದ ಡಾ. ಕೃಷ್ಣಮೂರ್ತಿ ಅವರು ಕೆಲವರಿಂದ ನಿರಂತರ ಕಿರುಕುಳ, ಬೆದರಿಕೆ ಅನುಭವಿಸುತ್ತಿದ್ದರು. ಜಾಗವನ್ನು ತಮಗೇ ಮಾರಾಟ ಮಾಡಬೇಕೆಂದು ಕೆಲವರು ನಿರಂತರ ಒತ್ತಾಯಿಸುತ್ತಿದ್ದರು. ಅದಕ್ಕೆ ಒಪ್ಪದಿದ್ದಾಗ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರು. ಈ ವಿಚಾರದಿಂದ ವೈದ್ಯರು ನೊಂದಿದ್ದರು ಎಂದು ಹೇಳಲಾಗುತ್ತಿದೆ. ಇದಲ್ಲದೆ, ಮುಸ್ಲಿಂ ಯುವತಿಗೆ ಕಿರುಕುಳ ನೀಡಿರುವ ಆರೋಪ ತಮ್ಮ ಮೇಲೆ ಬಂತು ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡರೇ ಎಂಬ ಸಂಶಯ ಉಂಟು ಮಾಡಿದೆ. ಈ ಎರಡೂ ಘಟನೆಗಳನ್ನು ತಾಳೆ ಮಾಡಿಕೊಂಡು ಪೊಲೀಸರ ತನಿಖೆ ನಡೆಯುತ್ತಿದೆ. ನಾಪತ್ತೆಯಾದ ಬಳಿಕ ಡಾ.ಕೃಷ್ಣಮೂರ್ತಿಯವರು ಯಾವ ಕಡೆಗೆ ಹೋಗಿರಬಹುದು ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಕಾಸರಗೋಡು, ಬದಿಯಡ್ಕ ಮತ್ತು ಕುಂದಾಪುರ ಪರಿಸರದ ಹಲವೆಡೆ ಸಿ.ಸಿ.ಟಿ.ವಿ. ಪರಿಶೀಲನೆ ನಡೆಸಲಾಗುತ್ತಿದೆ. ಡಾ.ಕೃಷ್ಣಮೂರ್ತಿಯವರು ಸಾಯಲೇಬೇಕೆಂದು ನಿರ್ಧಾರ ಮಾಡಿದ್ದರೂ ಬದಿಯಡ್ಕದಿಂದ ಸುಮಾರು 180-190 ಕಿಲೋ ಮೀಟರ್ ದೂರದ ಕುಂದಾಪುರಕ್ಕೆ ಏಕೆ ಬಂದರು ಎಂದೂ ಪೊಲೀಸರು ಮಾಹಿತಿ ಸಂಗ್ರಹಿಸತೊಡಗಿದ್ದಾರೆ. ಕುಂದಾಪುರಕ್ಕೆ ರೈಲು, ಬಸ್ ಅಥವಾ ಬೇರೆ ಯಾವ ವಾಹನಗಳಲ್ಲಿ ಬಂದಿರಬಹುದು ಎಂಬುದಕ್ಕೆ ಯಾವುದೇ ಮಾಹಿತಿ, ದಾಖಲೆ ಲಭ್ಯವಾಗಿಲ್ಲ. ರೈಲಿನಲ್ಲಿಯೇ ಬಂದಿದ್ದರೂ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಮೃತದೇಹ ಪತ್ತೆಯಾದ ಹಟ್ಟಿಯಂಗಡಿಯ ಸ್ಥಳಕ್ಕೆ ಸುಮಾರು 12 ಕಿಲೋ ಮೀಟರ್ ದೂರವಿದೆ. ಅಲ್ಲಿಯವರೆಗೆ ಹಳಿಯಲ್ಲಿಯೇ ನಡೆದುಕೊಂಡೇ ಬಂದರೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅಲ್ಲದೆ, ರಾತ್ರಿ ವೇಳೆ ಮೊಬೈಲ್ ಫೋನ್ ಅಥವಾ ಬೆಳಕಿನ ವ್ಯವಸ್ಥೆಯಿಲ್ಲದೆ ಹಳಿಯಲ್ಲಿಯೇ ಅಷ್ಟು ದೂರ ನಡೆದುಕೊಂಡು ಬರಲು ಸಾಧ್ಯವೇ ಎಂದೂ ಮಾಹಿತಿ ಕಲೆ ಹಾಕಲಾರಂಭಿಸಿದ್ದಾರೆ. ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣ, ಕುಂದಾಪುರ ಬಸ್ ನಿಲ್ದಾಣ, ಶಾಸ್ತ್ರಿ ಸರ್ಕಲ್, ಕೊಲ್ಲೂರು, ತಲ್ಲೂರು ಜಂಕ್ಷನ್ ಸಹಿತ ವಿವಿಧೆಡೆ ಶೋಧ ನಡೆಸಿರುವ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದ ಪೊಲೀಸರ ತಂಡ ರೈಲ್ವೇ ಟಿಕೆಟ್ ಪಡೆದುಕೊಂಡಿರಬಹುದಾದ ಬಗ್ಗೆ ರೈಲ್ವೇ ಇಲಾಖೆಯಿಂದ ಮಾಹಿತಿ ಸಂಗ್ರಹಿಸುತ್ತಿದೆ.

ಡಾ. ಕೃಷ್ಣಮೂರ್ತಿ ಅವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬದಿಯಡ್ಕ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿದ್ದ ಮುಳ್ಳೇರಿಯ ಹವ್ಯಕ ಮಂಡಲ ಮತ್ತು ಬದಿಯಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ಹರತಾಳ ನಡೆಸಿದ್ದ ಬದಿಯಡ್ಕ ವಿಹಿಂಪ ಪ್ರಖಂಡ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಮತ್ತೆ ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದವರನ್ನು ಒತ್ತಾಯಿಸಿದ್ದಾರೆ. ಈ ಮಧ್ಯೆ, ಡಾ.ಕೃಷ್ಣ ಮೂರ್ತಿಯವರಿಗೆ ಅವರ ಕ್ಲಿನಿಕ್‌ಗೆ ನುಗ್ಗಿ ಕೊಲೆ ಬೆದರಿಕೆ ಒಡ್ಡಿದ ಆರೋಪದಡಿ ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂಲೀಗ್ ಪದಾಧಿಕಾರಿ ಆಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಪದಾಧಿಕಾರಿಗಳಾದ ಮುಹಮ್ಮದ್ ಹನೀಫ್ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಎಂಬವರನ್ನು ಬದಿಯಡ್ಕ ಪೊಲೀಸರ ತಂಡ ಬಂಧಿಸಿದೆ.

ಸಮಗ್ರ ತನಿಖೆ ನಡೆಸಲು ಗೃಹ ಸಚಿವ ಅರಗ ಜ್ಞಾನೇಂದ್ರರಿಗೆ ಮನವಿ

ಡಾ.ಕೃಷ್ಣಮೂರ್ತಿಯವರ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರರವರನ್ನು ಹಲವರು ಒತ್ತಾಯಿಸಿದ್ದಾರೆ. ಪುತ್ತೂರಿನ ಖ್ಯಾತ ವೈದ್ಯರುಗಳಾದ ಡಾ. ರಾಮಮೋಹನ್ ಮತ್ತು ಡಾ. ಅರವಿಂದ್ ಅವರ ಸಹೋದರರಾಗಿರುವ ಡಾ. ಕೃಷ್ಣಮೂರ್ತಿಯವರ ಪುತ್ರಿ ವರ್ಷಾ, ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ವಿಶ್ವಹಿಂದೂ ಪರಿಷದ್ ಮುಖಂಡರಾದ ಶರಣ್ ಪಂಪ್‌ವೆಲ್, ಜಗದೀಶ್ ಶೇಣವ, ಭುಜಂಗ ಕುಲಾಲ್ ಮುಂತಾದವರು ಅರಗ ಜ್ಞಾನೇಂದ್ರರವರನ್ನು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಭೇಟಿಯಾಗಿ ಸಮರ್ಪಕ ತನಿಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ ಡಾ.ಕೃಷ್ಣಮೂರ್ತಿಯವರ ಸಾವಿನ ಕುರಿತು ಕರ್ನಾಟದಲ್ಲಿ ಪ್ರತ್ಯೇಕ ಕೇಸು ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಡಾ.ಕೃಷ್ಣ ಮೂರ್ತಿಯವರು ಪತ್ನಿ, ದರ್ಬೆ ನಿವಾಸಿಯಾಗಿದ್ದು ಪುತ್ತೂರಿನ ಸಂತಫಿಲೋಮಿನಾ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಎಸ್.ಈಶ್ವರ ಭಟ್ ಅವರ ಪುತ್ರಿ ಪ್ರೀತಿ, ತಂದೆ ಡಾ.ಎಸ್.ಎಸ್.ಭಟ್, ತಾಯಿ ಭಾರತಿ ಮತ್ತು ಪುತ್ರಿ ಎಂ.ಬಿ.ಬಿ.ಯಸ್. ಬಳಿಕ ಉನ್ನತ ಶಿಕ್ಷಣ ಪಡೆಯಲು ತಯಾರಿ ನಡೆಸುತ್ತಿರುವ ವರ್ಷಾರವರನ್ನು ಅಗಲಿದ್ದಾರೆ.

ಮರಣೋತ್ತರ ಪರೀಕ್ಷಾ
ವರದಿಗೆ ಕಾಯುತ್ತಿರುವ ಪೊಲೀಸರು

ಡಾ.ಕೃಷ್ಣಮೂರ್ತಿಯವರ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಕೊಲೆಯೇ, ಆತ್ಮಹತ್ಯೆಯೇ ಎಂದು ಖಚಿತಪಡಿಸಿಕೊಂಡ ಬಳಿಕ ತನಿಖೆ ಮತ್ತಷ್ಟು ತೀವ್ರಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ. ಎಫ್.ಎಸ್.ಎಲ್. ವರದಿಯೂ ಕೆಲವೇ ದಿನದಲ್ಲಿ ಪೊಲೀಸರ ಕೈ ಸೇರುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here