ಮುಳಿಯ ಗಾನರಥ ಕರೋಕೆ ಹಾಡುಗಳ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ-ಜೂನಿಯರ್ ವಿಭಾಗದಲ್ಲಿ ಪಲ್ಲವಿ ಆರ್.ಕೆ, ಸೀನಿಯರ್ ವಿಭಾಗದಲ್ಲಿ ಮಾಳವಿಕ ವಿನ್ನರ್

0

ಪುತ್ತೂರು: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಪುತ್ತೂರಿನ ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್‌ನ ವತಿಯಿಂದ ನಡೆಸಲಾದ ಮುಳಿಯ ಗಾನರಥ ಕರೋಕೆ ಹಾಡುಗಳ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯು ಆ.26ರಂದು ಇನ್ನರ್ ವ್ಹೀಲ್ ಕ್ಲಬ್‌ನ ಸಹಯೋಗದಲ್ಲಿ ಜೈನ ಭವನದಲ್ಲಿ ನಡೆಯಿತು.

ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡ ಗಾನರಥ ಗಾಯನ ಸ್ಪರ್ಧೆಯು ಕಲ್ಲಡ್ಕ, ವಿಟ್ಲ, ಈಶ್ವರಮಂಗಲ, ಕಬಕ, ಉಪ್ಪಿನಂಗಡಿ, ನೆಲ್ಯಾಡಿ, ಬೆಳ್ಳಾರೆ, ಸುಬ್ರಹ್ಮಣ್ಯ ಹಾಗೂ ಪುತ್ತೂರು ಸೇರಿದಂತೆ ಒಟ್ಟು 9 ಕಡೆಗಳಲ್ಲಿ ಯಶಸ್ವಿಯಾಗಿ ನಡೆದು ಬಂದಿದ್ದು ಇದರಲ್ಲಿ ಒಟ್ಟು 400ಕ್ಕಿಂತಲೂ ಅಧಿಕ ಮಂದಿ ಭಾಗವಹಿಸಿದ್ದರು. ಉದಯ ಕುಮಾರ್ ಲಾಯಿಲರವರ ನೇತೃತ್ವದಲ್ಲಿ ಗಾನರಥವು ಸಂಯೋಜನೆಗೊಂಡಿತು. ಗ್ರ್ಯಾಂಡ್ ಫಿನಾಲೆಯನ್ನು ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿಕೃಷ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಪ್ರಾರಂಭಗೊಂಡ ಗ್ರ್ಯಾಂಡ್ ಫಿನಾಲೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಬಾಗದಲ್ಲಿ ಸ್ಪರ್ಧೆಗಳು ನಡೆದವು.

ಜೂನಿಯರ್ ವಿಭಾಗದಲ್ಲಿ ಪಲ್ಲವಿ ಆರ್.ಕೆ(ಪ್ರ), ಮೃನಾಲ್(ದ್ವಿ), ವಿಭಾಶ್ರೀ(ತೃ) ಸೀನಿಯರ್ ವಿಭಾಗದಲ್ಲಿ ಮಾಳವಿಕ(ಪ್ರ), ವಿನೋದ್ ಜಾಲ್ಸೂರ್(ದ್ವಿ) ಹಾಗೂ ಪವಿತ್ರ ಆರ್(ತೃ) ಬಹುಮಾನ ಪಡೆದರು. ಪ್ರಥಮ ಸ್ಥಾನ ಪಡೆದವರಿಗೆ ಗಾನ ಕೋಗಿಲೆ, ಚಿನ್ನದ ನಾಣ್ಯ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ಹಾಗೂ ಬೆಳ್ಳಿನಾಣ್ಯ ಮತ್ತು ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು. ಗಣೇಶ್ ಮಂಗಳೂರು, ಮಿಥುನ್‌ರಾಜ್ ಕಬಕ ಹಾಗೂ ವಿದ್ಯಾಶ್ರೀ ಕಲ್ಲಡ್ಕ ತೀರ್ಪುಗಾರರಾಗಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನೃತ್ಯೋಪಾಸನಾ ಕಲಾ ಕೇಂದ್ರದ ನಿರ್ದೇಶಕಿ ಶಾಲಿನಿ ಆತ್ಮಭೂಷನ್ ಮಾತನಾಡಿ, ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಮುಳಿಯ ಜ್ಯುವೆಲ್ಸ್ ಗ್ರಾಮಿಣ ಪ್ರತಿಭೆಗಳನ್ನು ಹುಡುಕಿ ಅವರಿಗೆ ವೇದಿಕೆ ನೀಡುವ ಮಹತ್ತರವಾದ ಕಾರ್ಯ ಮಾಡಿರುವುದು ಶ್ಲಾಘನೀಯ. ಇದರಿಂದಾಗಿ ದೂರದ ಬೆಂಗಳೂರು, ಮಂಗಳೂರುಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಪುತ್ತೂರಿನಲ್ಲಿಯೂ ಕಾಣುವಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಳಿಯ ಜ್ಯುವೆಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಗ್ರಾಮಿಣ ಪ್ರತಿಭೆಗಳಿಗೆ ಅವಕಾಶ ನೀಡುವ ಮುಳಿಯ ಗಾನರಥ ಸೀಸನ್-1 ಮುಕ್ತಾಯಗೊಂಡಿದೆ. ಇನ್ನು ಸೀಸನ್-2 ಸೆಪ್ಟಂಬರ್ ಕೊನೆಯ ವಾರದಲ್ಲಿ ಪ್ರಾರಂಭಗೊಂಡು ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಗಾನ ಮತ್ತು ನೃತ್ಯ ಒಂದೇ ನಾಣ್ಯದ ಎರಡು ಮುಖಗಳು. ಪ್ರತಿಭೆಗಳು ಬೆಳೆಯಲು ಪರಿಶ್ರಮ ಮುಖ್ಯ ಎಂದರು.

ತೀರ್ಪುಗಾರೆ ವಿದ್ಯಾಶ್ರೀ ಕಲ್ಲಡ್ಕ ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೆ ಸ್ಥಳೀಯವಾಗಿ ವೇದಿಕೆ ಒದಗಿಸುವ ಉತ್ತಮ ಯೋಜನೆಯನ್ನು ರೂಪಿಸಿರುವ ಮುಳಿಯ ಜ್ಯುವೆಲ್ಸ್‌ಗೆ ಅಭಿನಂದನೆ ಸಲ್ಲಿಸಿದರು. ಗಣೇಶ್ ಮಂಗಳೂರು ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೆ ಮುಳಿಯ ಜ್ಯುವೆಲ್ಸ್ ಚಿನ್ನದಂತ ವೇದಿಕೆ ಒದಗಿಸಿದೆ. ಇಲ್ಲಿನ ಪ್ರತಿಭೆಗಳು ವಜ್ರದಂತೆ ಹೊರಹೊಮ್ಮಲಿ ಎಂದರು.

ಮುಳಿಯ ಜ್ಯುವೆಲ್ಸ್‌ನ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಮಾತನಾಡಿ, ಕಲೆ, ಸಾಹಿತ್ಯ, ರಾಗ, ತಾಳವನ್ನು ಗಮನದಲ್ಲಿಟ್ಟುಕೊಂಡು ಹಾಡಿದಾಗ ಸ್ತೋತ್ರುಗಳಿಗೆ ರೋಮಾಂಚನ ಉಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಕಲೆಯನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಎಂದರು.

ನಾಯಕ್ ಕಿಚನ್ಸ್ ಯೂ ಟ್ಯೂಬ್ ಬ್ಲಾಗರ್ ಆಶಾ ನಾಯಕ್ ಅತಿಥಿಯಾಗಿ ಆಗಮಿಸಿದ್ದರು. ತೀರ್ಪುಗಾರ ಮಿಥುನ್ ರಾಜ್, ಮುಳಿಯ ಜ್ಯುವೆಲ್ಸ್‌ನ ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಳಿಯ ಜ್ಯುವೆಲ್ಸ್ ಶೋರೂಂ ಮ್ಯಾನೇಜರ್ ನಾಮದೇವ ಮಲ್ಯ ಸ್ವಾಗತಿಸಿದರು. ಸಹಪ್ರಬಂಧಕ ಯತೀಶ್, ಮೋಹಿನಿ, ನಯನಾ, ಹರಿಣಾಕ್ಷಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ವಂದಿಸಿದರು. ನಿರೂಪಕಿ ಪ್ರಜ್ಞಾ ಓಡಿಲ್ನಾಲ ಕಾರ್ಯಕ್ರಮ ನಿರೂಪಿಸಿದರು. ನಾಟ್ಯರಂಜಿನಿ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here