ಕರಾವಳಿ ಕ್ರೈಸ್ತರ ಕುಟುಂಬದ ಹಬ್ಬ-ಮೊಂತಿ ಫೆಸ್ಟ್

0

ಮೊಂತಿ ಹಬ್ಬ ಕುಟುಂಬದ ಸಾಮರಸ್ಯವನ್ನು ಸಾರುತ್ತದೆ-ವಂ|ಲೋಹಿತ್ ಅಜೇಯ್

ಪುತ್ತೂರು:ಪ್ರಭು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯು ನಮ್ಮೆಲ್ಲರ ತಾಯಿಯಾಗಿದ್ದಾರೆ. ಮೇರಿ ಮಾತೆಯಲ್ಲಿರುವ ಧನಾತ್ಮಕ ಚಿಂತನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಮೇರಿ ಮಾತೆಯನ್ನು ಕುಟುಂಬದ ಮಾತೆ ಎಂದು ಪೂಜಿಸಲಾಗುತ್ತಿದ್ದು ಈ ಹಬ್ಬ ಕುಟುಂಬದ ಸಾಮರಸ್ಯವನ್ನು ಸಾರುತ್ತದೆ ಎಂದು ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಲೋಹಿತ್ ಅಜೇಯ್ ಮಸ್ಕರೇನ್ಹಸ್‌ರವರು ಹೇಳಿದರು.


ಕರಾವಳಿ ಕ್ರೈಸ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಸೆ.8ರಂದು ಆಚರಿಸಲ್ಪಡುವ ಪ್ರಭು ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ ಮೊಂತಿ ಫೆಸ್ಟ್ (ತೆನೆ ಹಬ್ಬ)-ಕುಟುಂಬದ ಹಬ್ಬ’ ಆಚರಣೆಯ ಸಂದರ್ಭ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಬೈಬಲ್ ವಾಚಿಸಿ ಅವರು ಹಬ್ಬದ ಸಂದೇಶ ನೀಡಿದರು. ಮನುಷ್ಯನಾಗಿ ಈ ಭೂಮಿಯಲ್ಲಿ ಜನ್ಮ ತಾಳಿರುವುದು ನಮ್ಮ ಭಾಗ್ಯ. ಅದರಲ್ಲೂ ದೇವರು ನಮಗೆ ತಂದೆ-ತಾಯಿಯನ್ನೊಳಗೊಂಡ ಕುಟುಂಬ ಎಂಬುದನ್ನು ಕರುಣಿಸಿರುವುದು ಮತ್ತೊಂದು ಭಾಗ್ಯ. ಕುಟುಂಬದಲ್ಲಿ ಜೀವಿಸುವಾಗ ನಾವು ಪರಸ್ಪರ ವಿಧೇಯತೆ, ಗೌರವವನ್ನು ಅನುಸರಿಸಿದಾಗ ಆ ಕುಟುಂಬವನ್ನು ದೇವರು ಆಶೀರ್ವದಿಸುತ್ತಾನೆ. ಅದರಂತೆ ಭೂಮಿ ನಮಗೆ ತಾಯಿ ಇದ್ದಾಗೆ. ಈ ಭೂಮಿಯಲ್ಲಿ ನಮಗೆ ಸಿಗುವ ಬೆಳೆಯು ನಮ್ಮ ಜೀವನದ ಅಭಿವೃದ್ಧಿಗೆ ಕಾರಣವಾಗುತ್ತದೆ. ಸ್ತ್ರೀ ಕುಟುಂಬದ ಕಣ್ಣು. ಅವಳು ಕುಟುಂಬದ ಏಳೆಗೆಗಾಗಿ ಹಲವಾರು ರೀತಿಯ ಪಾತ್ರ ವಹಿಸುತ್ತಾಳೆ ಎಂದ ಅವರು ಮೇರಿ ಮಾತೆಯು ಸಾಧಾರಣ ಸ್ತ್ರೀ ಆಗಿರದೆ ದೇವರ ಅಪ್ಪಣೆಯಂತೆ ಯೇಸು ಕ್ರಿಸ್ತರನ್ನು ತನ್ನ ಪುತ್ರನಾಗಿ ಜನಿಸಲು ಸಂಪೂರ್ಣ ಒಪ್ಪಿಗೆ ಸೂಚಿಸಿ ದೇವರ ಆಜ್ಞೆಯನ್ನು ಪಾಲಿಸಿದ ಮೇರಿ ಮಾತೆಯು ಕ್ರೈಸ್ತ ಬಾಂಧವರಿಗೆ ಆದರ್ಶಪ್ರಾಯರಾಗಿದ್ದಾರೆ. ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಹೊಸ ಅಕ್ಕಿ ಊಟವನ್ನು ಸೇವನೆ ಮಾಡುವ ಮೂಲಕ ಕುಟುಂಬವು ಸಮೃದ್ಧಿಗೊಳ್ಳುವುದು ಎಂದು ಅವರು ಹೇಳಿದರು.

(ಮಾಯಿದೆ ದೇವುಸ್ ಚರ್ಚ್)

ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಧರ್ಮಗುರುಗಳಾದ ವಂ|ಅಶೋಕ್ ರಾಯನ್ ಕ್ರಾಸ್ತಾ, ವಂ|ಸ್ಟ್ಯಾನಿ ಪಿಂಟೋ, ವಂ|ರೂಪೇಶ್ ತಾವ್ರೋರವರು ಭಕ್ತಾಧಿಗಳೊಂದಿಗೆ ದಿವ್ಯಬಲಿಪೂಜೆಯಲ್ಲಿ ಪಾಲ್ಗೊಂಡರು. ಅದರಂತೆ ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ಕಾಪುಚಿನ್ ಸಂಸ್ಥೆಯ ಧರ್ಮಗುರು ವಂ|ಜೀವನ್ ಡಿ’ಮೆಲ್ಲೋ ಫರಂಗಿಪೇಟೆ, ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ಸಹಾಯಕ ಧರ್ಮಗುರು ವಂ|ಬೆನೆಡಿಕ್ಟ್ ಗೋಮ್ಸ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೊರವರೊಂದಿಗೆ ಹಬ್ಬದ ಬಲಿಪೂಜೆಗಳು ನೆರವೇರಿದವು. ಆಯಾ ಚರ್ಚ್‌ನ ಧರ್ಮಭಗಿನಿಯರು, ಪಾಲನಾ ಸಮಿತಿ, ವಾಳೆ ಗುರಿಕಾರರು, ವೇದಿ ಸೇವಕರು, ಗಾಯನ ಮಂಡಳಿ, ಸ್ಯಾಕ್ರಿಸ್ಟಿಯನ್, ಸಂಘ-ಸಂಸ್ಥೆಗಳು ಸಹಕರಿಸಿದರು.

(ಮರೀಲು ಚರ್ಚ್)

ಹಬ್ಬದಿಂದ ಕೌಟುಂಬಿಕ ಸಾಮರಸ್ಯ: ಹಬ್ಬದ ಇನ್ನೊಂದು ವಿಶೇಷವೆಂದರೆಹೊಸ ಅಕ್ಕಿ ಊಟ’ ನವ ದಂಪತಿಗಳಿಗೆ, ಒಂದು ವರ್ಷ ತುಂಬುವ ಮಗುವಿಗೆ ಈ ಹಬ್ಬ ಇನ್ನೂ ವಿಶೇಷವಾಗಿದೆ. ಪೂರ್ವಿಕರಿಂದಲೇ ಅಚರಿಸುವ ಈ ಹಬ್ಬವು ತನ್ನದೇ ವಿಶಿಷ್ಟ ಸಂಸ್ಕೃತಿಯಿಂದ, ಸಂಪ್ರದಾಯವನ್ನು ಎತ್ತಿ ಹಿಡಿಯಲಾಗುತ್ತದೆ. ಚರ್ಚುಗಳಲ್ಲಿ ಭಕ್ತಿಪೂರ್ವಕವಾಗಿ ತೆನೆಯನ್ನು ಮೆರವಣಿಗೆಯ ಮೂಲಕ ದೇವಾಲಯದ ಒಳಗೆ ತಂದು ಧರ್ಮಗುರುಗಳಿಂದ ಆಶೀರ್ವಾದದ ಬಳಿಕ ಮನೆಗೆ ತಂದು ಮೇಣದ ಭತ್ತಿಯನ್ನು ಉರಿಸಿ ಆ ಭತ್ತದ ತೆನೆಯನ್ನು ಬೆಸಸಂಖ್ಯೆ ಆಧಾರದಲ್ಲಿ ಪುಡಿಮಾಡಿ ಹಾಲು ಅಥವಾ ಪಾಯಸದಲ್ಲಿ ಸೇರಿಸಿ ಮನೆಯ ಎಲ್ಲಾ ಸದಸ್ಯರು ಸೇವಿಸುತ್ತಾರೆ. ಅಂದಿನ ಹಬ್ಬದ ಎಲ್ಲಾ ಅಡುಗೆ ರುಚಿಗಳು ಸಸ್ಯಾಹಾರವಾಗಿದ್ದು ಸಾಂಬಾರು ಅಥವಾ ಪದಾರ್ಥಗಳು ಬೆಸ ಸಂಖ್ಯೆ ಆಧಾರದಲ್ಲಿ ಇರುತ್ತದೆ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಗೆ ಪೋಸ್ಟ್ ಮೂಲಕ ಕಳುಹಿಸಿ ಕೊಡಲಾಗುತ್ತದೆ. ಹೀಗೆ ಕೌಟುಂಬಿಕ ಸಾಮರಸ್ಯವನ್ನು ಈ ಹಬ್ಬದ ಮೂಲಕ ಸಾರಲಾಗುತ್ತದೆ.

(ಬನ್ನೂರು ಚರ್ಚ್)


ಭತ್ತದ ತೆನೆಗಳ ಪವಿತ್ರೀಕರಣ..
ರೈತರು ಬೆಳೆಸಿದ ಭತ್ತದ ತೆನೆ(ಹೊಸ ಅಕ್ಕಿ ಊಟ)ಗಳನ್ನು ಆಯಾ ಚರ್ಚ್‌ನಲ್ಲಿ ಪ್ರಮುಖರು ಸಂಗ್ರಹಿಸಿ, ಈ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯ. ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಆಯಾ ಚರ್ಚ್‌ಗಳಲ್ಲಿ ಭಕ್ತರಿಗೆ ದಿವ್ಯಬಲಿಪೂಜೆಯ ಬಳಿಕ ಹಂಚಲಾಯಿತು ಹಾಗೂ ಜೀವನದುದ್ದಕ್ಕೂ ಬಾಳಿನಲ್ಲಿ ಸಿಹಿಯು ಮನೆ ಮಾಡಲಿ ಎಂದು ಸಿಹಿಯ ಪ್ರತೀಕವಾದಂತಿರುವ ಕಬ್ಬನ್ನು ಹಬ್ಬದ ಸಂದರ್ಭದಲ್ಲಿ ಆಯಾ ಚರ್ಚ್‌ನಲ್ಲಿ ವಿತರಿಸುವುದು ಸಂಪ್ರದಾಯವಾಗಿದ್ದು, ಅದರಂತೆ ತಾಲೂಕಿನ ಆಯಾ ಚರ್ಚ್‌ಗಳಲ್ಲಿ ಭಕ್ತರಿಗೆ ಸಿಹಿತಿಂಡಿ ಹಾಗೂ ಕಬ್ಬನ್ನು ವಿತರಿಸಲಾಯಿತು.

(ಉಪ್ಪಿನಂಗಡಿ ಚರ್ಚ್)


ಮೇರಿ ಮಾತೆಗೆ ಹೂ ಅರ್ಪಣೆ..
ಮೊಂತಿ ಫೆಸ್ತ್-ಕುಟುಂಬದ ಹಬ್ಬ ಆಚರಣೆಯು ಒಂಭತ್ತು ದಿವಸದ ಹಿಂದೆಯೇ ಆರಂಭಗೊಂಡಿದ್ದು, ಕರಾವಳಿಯ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಯ ಜೊತೆಗೆ ಪುಟ್ಟ ಮಕ್ಕಳು ಮೇರಿ ಮಾತೆಗೆ ಹೂಗಳನ್ನು ಅರ್ಪಿಸುವ ಕಾರ್‍ಯ ಪ್ರಾರಂಭಗೊಂಡಿತ್ತು. ಆಯಾ ಚರ್ಚ್‌ಗಳಲ್ಲಿ ಪುಟ್ಟ ಮಕ್ಕಳು ಪ್ರಕೃತಿಯಲ್ಲಿ ದೊರೆಯುವ ಚೆಂದದ ಹೂಗಳನ್ನು ಹೆಕ್ಕಿ, ಆರಿಸಿ ಬುಟ್ಟಿಯಲ್ಲಿ ಸೊಗಸಾಗಿ ಜೋಡಿಸಿ ಚರ್ಚ್‌ಗೆ ಬಂದು ತಾವು ತಂದ ಹೂಗಳನ್ನು ಧಾರ್ಮಿಕ ವಿಧಿವಿಧಾನದೊಂದಿಗೆ ಮೇರಿ ಮಾತೆಗೆ ಅರ್ಪಿಸುವುದು ಸಂಪ್ರದಾಯವಾಗಿದೆ. ಅದರಂತೆ ಮಕ್ಕಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೇರಿ ಮಾತೆಗೆ ಹಬ್ಬದ ದಿನದಂದು ಹೂವುಗಳನ್ನು ಅರ್ಪಿಸಲಾಯಿತು.

(ಉಪ್ಪಿನಂಗಡಿ ಚರ್ಚ್)

LEAVE A REPLY

Please enter your comment!
Please enter your name here