ಉಪ್ಪಿನಂಗಡಿ: ಹಿಂದೂ ಸಂಘಟನೆಗೆ ಸೇರಿದವರಿಂದ ಹಿಂದೂಗಳ ಮೇಲೆ ಹಲ್ಲೆ-ರಕ್ಷಣೆಗೆ ಮುಂದಾದ ಮುಸ್ಲಿಮರು

0

ಪುತ್ತೂರು: ಕಟ್ಟಡ ವಿಚಾರವೊಂದಕ್ಕೆ ಸಂಬಂಧಿಸಿ ಹದಿನೈದು ದಿನಗಳ ಹಿಂದೆ ಹಿಂದೂ ಪರ ಸಂಘಟನೆಗೆ ಸೇರಿದ ಯುವಕರು ಆ ಕಟ್ಟಡಕ್ಕೆ ನುಗ್ಗಿ ಅಲ್ಲಿದ್ದ ಹಿಂದೂಗಳಿಗೆ ಹಲ್ಲೆ ನಡೆಸಿದ ಹಾಗೂ ಹಲ್ಲೆಗೊಳಗಾದವರನ್ನು ಸ್ಥಳೀಯ ಮುಸ್ಲಿಂ ಯುವಕರು ರಕ್ಷಿಸಲು ಮುಂದಾದ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ಈ ಘಟನೆ ಸೆ.23ರಂದು ಉಪ್ಪಿನಂಗಡಿಯಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಇದೀಗ ಈ ಕುರಿತ ವೀಡಿಯೋ ವೈರಲ್ ಆಗುತ್ತಿದೆ.
ಪ್ರಕರಣದ ವಿವರ: ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಾಂಗಟು ಪಾಸ್ವಾನ್ (35) ಎಂಬಾತ ಸೆ.24ರಂದು ದೂರು ನೀಡಿದ್ದು,`ತಾನು 34 ನೆಕ್ಕಿಲಾಡಿಯ ಜಗಜ್ಜೀವನ್ ರೈ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಸೆ.23ರಂದು ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ನನ್ನ ಧಣಿಯವರಿಗೆ ಸೇರಿದ ಹಳೆಯ ಕಟ್ಟಡದ ದುರಸ್ತಿ ಮಾಡುತ್ತಿದ್ದ ಸಂದರ್ಭ ಮಧ್ಯಾಹ್ನ 3:10ರ ಸುಮಾರಿಗೆ ಆರೋಪಿಗಳಾದ ಉಪ್ಪಿನಂಗಡಿ ನಿವಾಸಿ ಸುದರ್ಶನ ಹಾಗೂ 10-15 ಮಂದಿಯ ತಂಡ ಅಕ್ರಮ ಕೂಟ ಸೇರಿಕೊಂಡು ನನ್ನ ಧಣಿಯವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ನನ್ನನ್ನು ಉದ್ದೇಶಿಸಿ ಇಲ್ಲಿಂದ ಎಲ್ಲರೂ ಹೋಗಿ ಎಂದು ಹೇಳಿದ್ದಲ್ಲದೆ, ನನ್ನ ಜಾತಿ ನಿಂದನೆ ಮಾಡಿರುವುದಲ್ಲದೆ, ಕಾಲಿನ ಚಪ್ಪಲಿಯಿಂದ ನನಗೆ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ನನ್ನ ಧಣಿ ಜಗಜ್ಜೀವನ್ ರೈಯವರಿಗೆ 10-15 ಮಂದಿ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ನನ್ನ ಧಣಿಯವರು ಹಾಗೂ ಆರೋಪಿ ಸುದರ್ಶನ್‌ಗೂ ಜಾಗದ ಕಟ್ಟಡದ ವಿಚಾರದಲ್ಲಿ ತಕರಾರು ಇದ್ದು, ಧಣಿಯವರು ಕಟ್ಟಡದ ದುರಸ್ತಿ ಕೆಲಸವನ್ನು ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈ ಕೃತ್ಯವೆಸಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈರಲ್ ವಿಡಿಯೋದಲ್ಲೇನಿದೆ?: ಈ ಪ್ರಕರಣ ನಡೆದು ಹಲವು ದಿನಗಳಾದರೂ, ಹಲ್ಲೆಯ ವಿಡಿಯೋ ಅ.5ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಕರಣದ ಆರೋಪಿಯಾಗಿರುವ ಸುದರ್ಶನ್ ಎಂಬವರು ವಿಶ್ವ ಹಿಂದೂ ಪರಿಷತ್‌ನ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷರಾಗಿದ್ದು, ಅವರೂ ಸೇರಿದಂತೆ 10-15 ಜನರು ಈ ಕಟ್ಟಡದೊಳಗೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದವರನ್ನು ಹೊರಗಡೆ ದೂಡುವ ಹಾಗೂ ಜಗಜ್ಜೀವನ್ ರೈ ಸೇರಿದಂತೆ ಕೆಲವರಿಗೆ ಹಲ್ಲೆ ನಡೆಸುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಈ ಹಲ್ಲೆ ನಡೆಸಿದ 10- 15 ಜನ ಬಜರಂಗದಳ- ವಿಶ್ವಹಿಂದೂ ಪರಿಷತ್ ಸಂಘಟನೆಯಲ್ಲಿ ಗುರುತಿಸಿಕೊಂಡವರೆನ್ನಲಾಗಿದ್ದು, ಇದರಲ್ಲಿ ಓರ್ವ ಭರತ್ ಕುಮ್ಡೇಲು ಎಂದು ಹೇಳಲಾಗುತ್ತಿದೆ. ಈ ಹಲ್ಲೆ ನಡೆದ ಸಂದರ್ಭ ಸ್ಥಳೀಯ ಕೆಲವು ಮುಸ್ಲಿಮರು ಹಲ್ಲೆಗೊಳಗಾದವರ ರಕ್ಷಣೆಗೆ ಮುಂದಾಗಿದ್ದು, ವೈರಲ್ ಆದ ವೀಡಿಯೋದಲ್ಲಿ ಕಂಡು ಬರುತ್ತಿದೆ. ಒಟ್ಟಿನಲ್ಲಿ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಸೆ.23ರ ಘಟನೆಯ ವಿಡಿಯೋ ವೈರಲ್
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ ಘಟನೆಯ ಬಗ್ಗೆ ವಿವರಿಸಿದ ಜಗಜ್ಜೀವನ್ ರೈ ಅವರ ಪುತ್ರ ಭವಿಷ್ ಜೆ. ರೈ, ನನ್ನ ತಂದೆಗೆ ಹಾಗೂ ದರ್ಶನ್ ಎಂಟರ್‌ಪ್ರೈಸಸ್‌ನ ಸುದರ್ಶನ್ ಎಂಬವರಿಗೂ ಸುಮಾರು 45 ವರ್ಷದಿಂದ ಈ ಕಟ್ಟಡದ ಬಗ್ಗೆ ವಿರೋಧವಿದೆ. ಇದರ ಬಗ್ಗೆ ಸುದರ್ಶನ್ ಅವರ ತಂದೆ 1983ರಲ್ಲಿ ದಾವೆ ಹೂಡಿದ್ದರು. ಇದು ಧರ್ಮಸ್ಥಳದ ಮೂಲ ಗೇಣಿಯಲ್ಲಿರುವ ಜಾಗ. ಇಲ್ಲಿ ಕಟ್ಟಡ ಕಟ್ಟಿದ್ದು ತನ್ನ ತಂದೆ ಜಗಜ್ಜೀವನ್ ರೈಯವರ ತಂದೆಯಾದ ಬಾಳಪ್ಪ ರೈಯವರು. ಆದ್ದರಿಂದ ಇದರಲ್ಲಿ ಸುದರ್ಶನ್ ಅವರಿಗೆ ಯಾವುದೇ ಹಕ್ಕಿಲ್ಲ. ನ್ಯಾಯಾಲಯದಲ್ಲಿ ಅವರು ಅಪೀಲು ಮಾಡುತ್ತಲೇ ಇದ್ದು, ಈಗ ಇದು ಹೈಕೋರ್ಟ್‌ನಲ್ಲಿದೆ. 2018ರಲ್ಲಿ ಈ ಕಟ್ಟಡಕ್ಕೆ ಸುದರ್ಶನ್ ಅವರು ಬೆಂಕಿ ಕೊಟ್ಟಿದ್ದರು. ಆ ಬಗ್ಗೆ ಎಫ್‌ಐಆರ್ ಕೂಡಾ ದಾಖಲಾಗಿದೆ. ಇದರ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಇದನ್ನು ದುರಸ್ತಿ ಮಾಡಿಸಬಾರದು ಎಂದು ಸುದರ್ಶನ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದರೆ ಆ ತಡೆಯಾಜ್ಞೆ ವಜಾವಾಗಿದೆ. ಆದ್ದರಿಂದ ನಾವು ಮೇಲ್ಚಾವಣಿ ರಿಪೇರಿಗೆ ಮುಂದಾಗಿದ್ದೆವು. ಸೆ.8ರಂದು ಕೂಡಾ ಸುದರ್ಶನ್ ಸ್ಥಳೀಯ ಯುವಕರ ತಂಡವನ್ನು ಕಟ್ಟಿಕೊಂಡು ಬಂದು ಕಟ್ಟಡದೊಳಗೆ ಅಕ್ರಮ ಪ್ರವೇಶ ಮಾಡಿ ಪಿಲ್ಲರ್‌ಗಳಿಗೆ ಹಾನಿಯೆಸಗಿದ್ದು ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಸೆ.23ರಂದು ನಾವು ಮೇಲ್ಚಾವಣಿ ಕೆಲಸಕ್ಕೆ ಮುಂದಾದಾಗ ಸುಮಾರು 11 ಗಂಟೆಗೆ ಭರತ್ ಕುಂಮ್ಡೇಲು, ಉದಯ ಸವಣೂರು ಸೇರಿದಂತೆ 10-15 ಜನರನ್ನು ಕರೆದುಕೊಂಡು ಬಂದು ಕಟ್ಟಡದೊಳಗೆ ನುಗ್ಗಿ, ಕೆಲಸಕ್ಕೆ ಅಡ್ಡಿಪಡಿಸಿದ್ದರು. ಆಗ ನಮಗೆ ದುರಸ್ತಿಗೆ ನ್ಯಾಯಾಲಯವೇ ಅನುಮತಿ ನೀಡಿದೆ. ಹಾಗಾಗಿ ನೀವು ಬಜರಂಗದಳ ಅಂತ ಹೆಸರು ಹೇಳಿಕೊಂಡು ಬಂದು ಹಿಂದೂಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ ಅಂತ ನಾವು ಹೇಳಿದ್ದೆವು. ಆಗ ಪೊಲೀಸರು ಬಂದು ಕೆಲಸ ನಿಲ್ಲಿಸಲು ಸೂಚಿಸಿದ್ದರಲ್ಲದೆ, ಸಂಜೆ 3 ಗಂಟೆಗೆ ವೃತ್ತ ನಿರೀಕ್ಷಕರು ಬರುತ್ತಾರೆ. ಆಗ ಎರಡೂ ಕಡೆಯವರು ಬಂದು ಮಾತನಾಡಿ ಎಂದು ಹೇಳಿ ಹೋಗಿದ್ದರು. ಹಾಗಾಗಿ ನಾವು ಕೆಲಸ ನಿಲ್ಲಿಸಿದ್ದೆವು. ನಾನು ಮಧ್ಯಾಹ್ನ 2:30ಕ್ಕೆ ಪೊಲೀಸ್ ಠಾಣೆಗೆ ತೆರಳಿದ್ದೆ. ಸುದರ್ಶನ್ ಠಾಣೆಗೆ ಬಂದು ಮಾತನಾಡದೇ ಆ ಹೊತ್ತಿನಲ್ಲಿ ಏಕಾಏಕಿ ಜನರನ್ನು ಕಟ್ಟಿಕೊಂಡು ಬಂದು ಅಲ್ಲಿ ಕೆಲಸದವರು ಚಾ ಕುಡಿಯುತ್ತಿದ್ದ ಸಂದರ್ಭ ಕಟ್ಟಡದೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಆಗ ನಮ್ಮ ರಕ್ಷಣೆಗೆ ಸ್ಥಳೀಯ ಮುಸ್ಲಿಮರು ಬಂದಿದ್ದರು’ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here