ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನ ಬಳಕೆ ಅಪರಾಧಕ್ಕೆ ಕಡ್ಡಾಯವಾಗಿ ದಂಡ ವಿಧಿಸಿ- ಪ್ರಭಾರ ಜಿಲ್ಲಾಧಿಕಾರಿ ಸೂಚನೆ

0

ಶಾಲಾ,ಕಾಲೇಜು.ದೇವಸ್ಥಾನ ಆವರಣದಲ್ಲಿ ತಂಬಾಕು ಮುಕ್ತ ಪ್ರದೇಶ ಫಲಕ

ಮಂಗಳೂರು:ಸಿಗರೇಟ್ ಹಾಗೂ ತಂಬಾಕು ಬಳಕೆಗಳಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಶಾಲಾ,ಕಾಲೇಜುಗಳಲ್ಲಿ ಎಚ್ಚರಿಕೆ
ಬೋರ್ಡ್ಗಳನ್ನು ಹಾಕಬೇಕು.ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನಗಳ ಬಳಕೆಯ ಅಪರಾಧಕ್ಕೆ ಕಡ್ಡಾಯವಾಗಿ ದಂಡ ವಿಧಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಿಕ್ಷಣ ಸಂಸ್ಥೆಗಳಲ್ಲಿ, ದೇವಸ್ಥಾನಗಳಲ್ಲಿ, ಆಸ್ಪತ್ರೆಯ ಆವರಣದಲ್ಲಿ ತಂಬಾಕು ಮುಕ್ತ ಪ್ರದೇಶ ಎಂದು ಫಲಕಗಳನ್ನು ಅಳವಡಿಸಬೇಕು.ಗ್ರಾಮಗಳಲ್ಲಿ ಸಿಗರೇಟು ಮತ್ತು ತಂಬಾಕು ಬಳಕೆಯಿಂದ ಆಗುವ ಕ್ಯಾನ್ಸರ್ ಮತ್ತು ಬೇರೆ ಬೇರೆ ರೀತಿಯ ರೋಗಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಮಹಾನಗರ ಪಾಲಿಕೆಯ ಮೂಲಕ ನಡೆಯುವ ಸ್ವಚ್ಛತಾ ಕಾರ್ಯಕ್ರಮದಡಿ ತಂಬಾಕು ನಿಯಂತ್ರಣ ಕಾರ್ಯಕ್ರಮ ನಡೆಸಲಾಗುತ್ತಿದೆ, ಈ ಯೋಜನೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಚಟಕ್ಕೆ ಒಳಗಾದವರನ್ನು ಎನ್‌ಜಿಒ ಮುಖಾಂತರ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಈವರೆಗೆ ಚಟಕ್ಕೆ ಒಳಗಾಗಿದ್ದ 173 ಮಂದಿ ಸಿಗರೇಟ್ ಹಾಗೂ ತಂಬಾಕು ಮುಕ್ತ ಜೀವನ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರೋಗ್ಯ ಅಧಿಕಾರಿ ಡಾ.ಎಚ್.ಎಸ್. ತಿಮ್ಮಯ್ಯ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್, ಜಿಲ್ಲಾ ಸಲಹೆಗಾರ ಪುಂಡಲೀಕ್ ಲಕಾಟೆ, ಶೃತಿ ಸಾಲಿಯಾನ್, ವಿಜಯ್ ಕುಮಾರ್, ವಿದ್ಯಾ ಮತ್ತು ವಿಭಾಗೀಯ ಸಂಯೋಜಕ ಜೇಲ್ ಥಾಮಸ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here