ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 2.03 ಕೋಟಿ ರೂ.ಪಡೆದು ವಂಚನೆ ಆರೋಪ

0


ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಶೇಖರ್ ಸಹಿತ ಇಬ್ಬರ ವಿರುದ್ಧ ಕೊಟ್ಟೂರು ಠಾಣೆಯಲ್ಲಿ ಎಫ್‌ಐಆರ್

ಪುತ್ತೂರು:ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ 2 ಕೋಟಿ 3 ಲಕ್ಷ ರೂ.ಹಣವನ್ನು ಪಡೆದುಕೊಂಡು, ಟಿಕೆಟ್ ಕೊಡಿಸದೆ ಹಣವನ್ನೂ ವಾಪಸ್ ಕೊಡದೆ ಬೆದರಿಕೆಯೊಡ್ಡಿದ ಆರೋಪದಲ್ಲಿ, ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯೋರ್ವರ ಸಹಿತ ಇಬ್ಬರ ವಿರುದ್ಧ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿ.ಶಿವಮೂರ್ತಿ ತಂದೆ ಬಸಪ್ಪ, (ನಿವೃತ್ತ ಸಹಾಯಕ ಅಭಿಯಂತರರು ಪಿಡಬ್ಲ್ಯೂಡಿ)ವಾಸ ಹನಸಿ ಗ್ರಾಮ, ಹಗರಿಬೊಮ್ಮನಹಳ್ಳಿ ತಾಲೂಕು, ಹಾಲಿ ವಾಸ ಬಸವೇಶ್ವರನಗರ ಕೊಟ್ಟೂರುಪಟ್ಟಣ ವಿಜಯನಗರ ಎಂಬವರು ನೀಡಿರುವ ದೂರಿನ ಮೇರೆಗೆ ರೇವಣಸಿದ್ಧಪ್ಪ ಬೆನಕನಹಳ್ಳಿ ಮತ್ತು ಶೇಖರ್ ಎನ್.ಪಿ.(ಪುರುಷೋತ್ತಮ ನಿರ್‍ಲಕಟ್ಟೆರವರ ಮಗ)ಪುತ್ತೂರು ಟೌನ್ ಎಂಬವರ ವಿರುದ್ಧ ಐಪಿಸಿ 1860(T/o 420,506,34)ಯಡಿ ಪ್ರಕರಣ ದಾಖಲಾಗಿದೆ.

ದೂರಿನ ಸಾರಾಂಶ:
ಬೆನಕನಹಳ್ಳಿ ಗ್ರಾಮದ ಬಿಜೆಪಿ ಮುಖಂಡರಾದ ರೇವಣ್ಣ ಸಿದ್ಧಪ್ಪ ಎಂಬವರು ನನ್ನನ್ನು ಪರಿಚಯ ಮಾಡಿಕೊಂಡು ಕೊಟ್ಟೂರು ಪಟ್ಟಣದಲ್ಲಿರುವ ನನ್ನ ಮನೆಗೆ ಬಂದು, ತನಗೆ ಕರ್ನಾಟಕ ರಾಜ್ಯದ ಬಿಜೆಪಿ ಪಕ್ಷದ ಹಿರಿಯ ಮುಖಂಡರುಗಳ ಪರಿಚಯ ಇದೆ ಎಂದು ಹೇಳಿ, ಮುಖಂಡರ ಜೊತೆ ತೆಗೆಸಿಕೊಂಡಿರುವ ಫೊಟೋಗಳನ್ನು ತೋರಿಸಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಎಂ.ಎಲ್.ಸಿ ಟಿಕೆಟ್‌ನ್ನು ನಿಮಗೆ ಕೊಡಿಸುತ್ತೇನೆ. ನೀವು ಟಿಕೆಟ್ ಪಡೆಯಲು ಯೋಗ್ಯರು ಎಂದು ಹೇಳಿ ನಂಬಿಸಿ, ರೇವಣ್ಣ ಸಿದ್ಧಪ್ಪರವರು ತನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಹೊಟೇಲ್ ಒಂದರಲ್ಲಿ ಪುತ್ತೂರಿನ ಬಿಜೆಪಿ ಮುಖಂಡರಾದ ಆರೋಪಿ ಎನ್.ಪಿ.ಶೇಖರ್‌ರವರನ್ನು ಪರಿಚಯಿಸಿದ್ದರು. ರೇವಣ್ಣ ಸಿದ್ಧಪ್ಪ ಮತ್ತು ಎನ್.ಪಿ.ಶೇಖರ್ ಇಬ್ಬರೂ ಸೇರಿ ನನಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್.ಸಿ.ಮೀಸಲು ಕ್ಷೇತ್ರದ ಬಿಜೆಪಿ ಟೆಕೆಟ್ ಕೊಡಿಸುವುದಾಗಿ ನಂಬಿಸಿ 9-10-2022ರಿಂದ 30-04-2023ರ ಮಧ್ಯದ ಅವಧಿಯಲ್ಲಿ ಒಟ್ಟು 2 ಕೋಟಿ 03 ಲಕ್ಷ ರೂ.ಹಣವನ್ನು ಪಡೆದುಕೊಂಡಿದ್ದರು. ಬಳಿಕ ಟಿಕೆಟ್ ಕೊಡಿಸದೆ ವಂಚನೆ ಮಾಡಿದ್ದು ಹಣವನ್ನು ವಾಪಸ್ ಕೊಡುವಂತ ಕೇಳಿದ್ದಕ್ಕೆ, ಹಣ ಕೊಡುವಂತೆ ಪೀಡಿಸಿದರೆ ನಿನಗೆ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ಶಿವಮೂರ್ತಿಯವರು ದೂರಿನಲ್ಲಿ ಆರೋಪಿಸಿದ್ದಾರೆ. ತನ್ನಿಂದ ಹಣ ಪಡೆದುಕೊಂಡು ವಂಚನೆ ಮಾಡಿ ಜೀವಬೆದರಿಕೆ ಹಾಕಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿ ಅವರು ಅ.19ರಂದು ಕೊಟ್ಟೂರು ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕೊಟ್ಟೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಶೇಖರ್: ಪ್ರಕರಣದಲ್ಲಿ ಆರೋಪಿಯಾಗಿರುವ ಶೇಖರ್ ಎನ್.ಪಿ.ಯಾನೆ ರಾಜಶೇಖರ್‌ರವರು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಪುತ್ತಿಲ ಪರಿವಾರದ ಚುನಾವಣಾ ಪ್ರಚಾರ ಸಭೆಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ದೂರಿನಲ್ಲಿ ಈತನನ್ನು ಪುತ್ತೂರಿನ ಬಿಜೆಪಿ ಮುಖಂಡ ಎಂದು ನಮೂದಿಸಲಾಗಿದೆ.

LEAVE A REPLY

Please enter your comment!
Please enter your name here