ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದ.ಕ. ಜಿಲ್ಲಾ ಸಂಸ್ಕಾರ ಭಾರತಿ ಪುತ್ತೂರು ವಿಭಾಗದ ವತಿಯಿಂದ ತ್ಯಾಗರಾಜ ಆರಾಧನಾ ಮಹೋತ್ಸವ ಮಾ.12ರಂದು ಸಂಜೆ ದೇವಳದ ಒಳಾಂಗಣದ ಗೋಪುರದಲ್ಲಿ ನಡೆಯಿತು.
ಸಂಸ್ಕಾರ ಭಾರತೀಯ ಹಿರಿಯ ಸದಸ್ಯರು ಹಾಗೂ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿರುವ ವತ್ಸಲಾ ರಾಜ್ಞಿ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಪುತ್ತೂರಿನ ವಿವಿಧ ಸಂಗೀತ ಶಾಲಾ ಗುರುಗಳು ಹಾಗೂ ವಿದುಷಿಯರಾದ, ವೀಣಾ ರಾಘವೇಂದ್ರ, ವಿದ್ಯಾ ಈಶ್ವರ ಚಂದ್ರ, ರಮಾ ಪ್ರಭಾಕರ್, ಪ್ರೀತಿಕಲಾ, ಪಾರ್ವತಿ ಹೊಸಮೂಲೆ, ಸ್ವರ್ಣ ಭಟ್, ಗೀತಾ ಸಾರಡ್ಕ ಮುಂತಾದವರು ಭಾಗವಹಿಸಿ, ಪಂಚರತ್ನ ಕೀರ್ತನೆ ಗೋಷ್ಠಿ ಗಾಯನವನ್ನು ನಡೆಸಿಕೊಟ್ಟರು. ಹಿಮ್ಮೇಳನವಾದ ಮೃದಂಗದಲ್ಲಿ ಶ್ಯಾಮ ಭಟ್ ಸುಳ್ಯ ಮತ್ತು ಪ್ರಸನ್ನ ಭಟ್ ಬಲ್ನಾಡು, ವೀಣೆಯಲ್ಲಿ ಮಧುಲಿತಾ ಹಾಗೂ ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ ಮತ್ತು ಅನನ್ಯ ಪುಳು ಸಹಕರಿಸಿದರು. ಸಂಸ್ಕಾರ ಭಾರತೀ ದ.ಕ.ಜಿಲ್ಲಾ ಉಪಾಧ್ಯಕ್ಷೆ ರೂಪಲೇಖಾ, ಸದಸ್ಯರಾದ ವಿದುಷಿ ಮೇಘನಾ ಪಾಣಾಜೆ, ವಿದ್ವಾನ್ ದೀಪಕ್ ಕುಮಾರ್, ವಿದ್ವಾನ್ ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು. ಸದಸ್ಯರಾದ ಶಂಕರಿ ಶರ್ಮ ಸ್ವಾಗತಿಸಿ, ಪದ್ಮ ಕೆ. ಆರ್ ಆಚಾರ್ಯ ವಂದಿಸಿದರು.