![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಸುಳ್ಯದ ಎಲಿಮಲೆಯಲ್ಲಿ ಅಕ್ರಮವಾಗಿ ಗೋವುಗಳನ್ನು ಪಿಕಪ್ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಎಲಿಮಲೆಯ ಅಂಬೆಕಲ್ಲಿನಲ್ಲಿ ಸ್ಥಳೀಯರು ವಾಹನವನ್ನು ಅಡ್ಡಗಟ್ಟಿದ ಮತ್ತು ಜೀಪು ಚಾಲಕ ಪಡ್ಡಾಯೂರಿನ ಹರೀಶ್ ಮತ್ತು ಕೋಣಾಜೆಯ ಇಬ್ರಾಹಿಂ ಎಂಬವರಿಗೆ ದಿಗ್ಬಂಧನ ವಿಧಿಸಿದ ಘಟನೆ ಮೇ.23ರ ನಸುಕಿನ ಜಾವ ನಡೆದಿದೆ.
ಸುಳ್ಯದ ಎಲಿಮಲೆಯ ಅಂಬೆಕಲ್ಲು ಕಡೆಯಿಂದ 4 ದನಗಳನ್ನು ರಾತ್ರಿ 3 ಗಂಟೆಯ ವೇಳೆಗೆ (ಕೆಎ 21 ಎ 0824) ಪಿಕ ಅಪ್ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವ ಆರೋಪದಲ್ಲಿ ಎಲಿಮಲೆ ಅಂಬೆಕಲ್ಲು ರಸ್ತೆಯ ಕಲ್ಪಣೆ ಎಂಬಲ್ಲಿ ಸ್ಥಳೀಯರು ವಾಹನವನ್ನು ಅಡ್ಡ ಗಟ್ಟಿದರು. ಈ ವೇಳೆ ಜೀಪಿನಿಂದ ಇಬ್ಬರು ಪರಾರಿಯಾಗಿದ್ದು, ಮತ್ತಿಬ್ಬರನ್ನು ಸ್ಥಳೀಯರು ಹಿಡಿದಿದ್ದರು. ಅವರನ್ನು ವಿಚಾರಿಸಿದ ಪುತ್ತೂರಿನ ಪಡ್ಡಾಯೂರಿನ ಹರೀಶ್ ಮತ್ತು ಕೋಣಾಜೆಯ ಇಬ್ರಾಹಿಂ ಎಂದು ತಿಳಿದು ಬಂದಿದೆ.
ಸಾಗಾಟ ಪತ್ರವನ್ನು ಹರಿದ ಆರೋಪ:
ಎಲಿಮಲೆಯ ಮನೆಯೊಂದರಿಂದ ಅವರ ಅನುಮತಿಯಂತೆ ಗೋವುಗಳನ್ನು ಯಾವುದೇ ಹಿಂಸೆ ನೀಡದೆ ಸಾವಕಾಶವಾಗಿ ಪಿಕಪ್ ಜೀಪಿನಲ್ಲಿ ಸಾಗಾಟ ಮಾಡುತ್ತಿರುವಾಗ ಸ್ಥಳೀಯರು ಅಕ್ರಮ ಸಾಗಾಟ ಎಂದು ಗುಮಾನಿಯಿಂದ ಹಿಡಿದಿದ್ದಾರೆ. ವಾಹನದಲ್ಲಿ ಗೋವುವಿನ ಸಾಗಾಟಕ್ಕೆ ಪಶು ಇಲಾಖೆಯ ಪತ್ರವನ್ನು ವಾಹನ ಅಡ್ಡಗಟ್ಟಿದವರು ಹರಿದು ಹಾಕಿದ್ದಾರೆ. ವಾಹನದಲ್ಲಿ ಗೋವನ್ನು ನೀಡಿದ ಮನೆಯವರು ಸಹ ಇದ್ದರು. ಯಾವುದೇ ಅಕ್ರಮ ಗೋ ಸಾಗಾಟ ನಡೆದಿಲ್ಲ ಎಂದು ವಾಹನದ ಮಾಲಕರ ಸಹೋದರ ತಿಳಿಸಿದ್ದಾರೆ.