ಆಳ್ವಾಸ್ ಉದ್ಯೋಗ ಮೇಳ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಹಿತಿ ಕಾರ್ಯಕ್ರಮ

0

ಕ್ಷೇತ್ರದಲ್ಲಿ ಯಾರೂ ನಿರುದ್ಯೋಗಿಗಳಿರಬಾರದು ಎಂಬುದೇ ನನ್ನ ಆಶಯವಾಗಿದೆ: ಶಾಸಕ ಅಶೋಕ್ ರೈ


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ನಾನು ಪಣತೊಟ್ಟಿದ್ದೇನೆ ಆದೇ ರೀತಿ ನನ್ನ ಕ್ಷೇತ್ರದಲ್ಲಿ ಯಾರೂ ನಿರುದ್ಯೋಗಿಗಳಿಬಾರದು ಎಂಬ ಉದ್ದೇಶ ನನ್ನಲ್ಲಿದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರತೀ ವರ್ಷವೂ ನಾನು ಉದ್ಯೋಗ ಮೇಳವನ್ನು ನಡೆಸಿಕೊಡಲಿದ್ದೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ಟ್ರಸ್ಟ್ ಕಚೇರಿಯಲ್ಲಿ ನಡೆದ ಉದ್ಯೋಗ ಮೇಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮ ಮಕ್ಕಳಿಗೆ ಉದ್ಯೋಗ ಸಿಗಬೇಕು ಎಂದು ಪ್ರತೀಯೊಬ್ಬ ತಂದೆ ತಾಯಿಯ ಆಸೆಯಾಗಿದೆ, ಆ ಆಸೆಯನ್ನು ಈಡೇರಿಸಬೇಕಾದ್ದು ಮಕ್ಕಳ ಕರ್ತವ್ಯವಾಗಿದೆ. ಮಕ್ಕಳಿಗೆ ಕಲಿತು ಉದ್ಯೋಗ ಸಿಗಬೇಕಾದರೆ ಅದಕ್ಕೆ ಪೂರಕ ವಾತಾವರಣವನ್ನು ನಾವು ಕಲ್ಪಿಸಬೇಕು. ಸರಕಾರಗಳು ಪ್ರತೀ ವರ್ಷ ಉದ್ಯೋಗವನ್ನು ಸೃಷ್ಟಿ ಮಾಡಬೇಕು, ಕ್ಷೇತ್ರದಲ್ಲಿ ಉದ್ಯಮಗಳ ಆರಂಭವಾಗಬೇಕು ಆಗಿದ್ದಲ್ಲಿ ಮಾತ್ರ ಉದ್ಯೋಗ ಸೃಷ್ಟಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಾಚಿಕೆ ಬಿಟ್ಟು ಬಿಡಿ
ಉದ್ಯೋಗ ಮೇಳದಲ್ಲಿ ಸಾವಿರಾರು ಉದ್ಯೋಗಗಳು ಇರುತ್ತದೆ,ಯಾವುದೇ ಸಂದರ್ಶನವನ್ನು ಎದುರಿಸಬೇಕಾದಲ್ಲಿ ಮನೋಸ್ಥೈರ್ಯ ಬೇಕಾಗುತ್ತದೆ. ಯಾವುದೇ ಉದ್ಯೋಗ ಸಿಕ್ಕಿದಲ್ಲಿ ಅದನ್ನು ನಾಚಿಕೆ ಇಲ್ಲದೆ ಮಾಡುವ ಮನಸ್ಸು ನಮ್ಮಲ್ಲಿರಬೇಕು. ನನಗೆ ಇಂಥದ್ದೇ ಕೆಲಸ ಬೇಕು ಎಂದು ಹಠ ಮಾಡದೆ ಸಿಕ್ಕ ಉದ್ಯೋಗವನ್ನು ಸೇರಿಕೊಳ್ಳುವ ಮೂಲಕ ನಾವು ಇನ್ನೊಂದು ಕೆಲಸದ ಬಗ್ಗೆ ತಿಳಿದುಕೊಳ್ಳುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಮೇಳದಲ್ಲಿ ಭಾಗವಹಿಸಿ
ಪ್ರತೀಯೊಬ್ಬರೂ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು. ಉದ್ಯೋಗ ಸಿಗಲಿ, ಅಥವಾ ಸಿಕ್ಕದೇ ಇರಲಿ ನೀವು ಭಾಗವಹಿಸುವ ಮೂಲಕ ಮೇಳದಲ್ಲಿ ಸಿಗುವ ಸೌಲಭ್ಯಗಳು ಮತ್ತು ವಿವಿಧ ಕಂಪೆನಿಗಳ ವಿಚಾರವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.ಕಳೆದ ವರ್ಷ ಟ್ರಸ್ಟ್ ವತಿಯಿಂದ ನಡೆದ ಉದ್ಯೋಗ ಮೇಳದಲ್ಲಿ ಪುತ್ತೂರಿನಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು ಅದರಲ್ಲಿ ಹಲವು ಮಂದಿಗೆ ವಿವಿಧ ಕಂಪೆನಿಯಲ್ಲಿ ಉದ್ಯೋಗವೂ ಪ್ರಾಪ್ತಿಯಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಟ್ರಟ್ಟ್ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಿದ್ದು ಪ್ರತೀಯೊಬ್ಬರೂ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಉದ್ಯೋಗ ಮೇಳದ ರುವಾರಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೆನಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ವಿನಯಚಂದ್ರ ಜೈನ್, ಡಾ. ಗುರುಪ್ರಸಾದ್ ಪೈ, ಶ್ರೀನಿವಾಸ್ ಭಾಗವಹಿಸಿ ಶಿಬಿರಾರ್ಥಿಗಳಿಗೆ ಮೇಳದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಆರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಜೂ.7 ಮತ್ತು 8 ರಂದು ಮೂಡಬಿದ್ರೆಯ ಆಳ್ವಾಸ್ ಸಂಸ್ಥೆಯಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಇಲ್ಲಿನ ಪ್ರತೀಯೊಬ್ಬ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಬೇಕು ಮತ್ತು ಮೇಳದಲ್ಲಿ ನಡೆಯುವ ಪ್ರತೀಯೊಂದು ಕಾರ್ಯಕ್ರಮದಲ್ಲೂ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ಈ ಮಾಹಿತಿ ಕಾರ್ಯಕ್ರಮ ನಿಮಗೆ ನೆರವಾಗಲಿದ್ದು ಇದಕ್ಕಾಗಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಟ್ರಸ್ಟ್ ಗೌರವ ಸಲಹೆಗಾರರಾದ ಮಹಮ್ಮದ್ ಬಡಗನ್ನೂರು, ಮಾಧ್ಯಮ ಸಲಹೆಗಾರ ಕೃಷ್ಣಪ್ರಸಾದ್ ಬೊಳ್ಳಾವು, ಜಯಪ್ರಕಾಶ್ ಬದಿನಾರ್, ಶಿವನಾಥ್ ರೈ ಮೇಗಿನಗುತ್ತು ಉಪಸ್ಥಿತರಿದ್ದರು.

ಸದಸ್ಯರಾದ ಯೋಗೀಶ್ ಸಾಮಾನಿ ಸ್ವಾಗತಿಸಿದರು. ಟ್ರಸ್ಟ್ ಪ್ರಮುಖರಾದ ನಿಹಾಲ್ ಶೆಟ್ಟಿ ವಂದಿಸಿದರು. ನಿರಂಜನ್ ರೈ ಮಟಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್‌ ಸದಸ್ಯರಾದ ರಿತೇಶ್‌ ಶೆಟ್ಟಿ ಮಂಗಳೂರು, ರೇವತಿ ಸುಳ್ಯಪದವು, ಜಯಶೀಲ ಶೆಟ್ಟಿ ಶಾಂತಿನಗರ, ಬಾಲಕೃಷ್ಣ ಪೂಜಾರಿ ಪಳ್ಳತ್ತಾರು, ಹಕೀಂ ನೆಕ್ಕಿಲಾಡಿ, ಸಾಹಿರಾ ಬನ್ನೂರು, ಸತೀಶ್ ನಿಡ್ಪಳ್ಳಿ, ಅನಿಮಿನೇಜಸ್, ಖಾದರ್ ಆದರ್ಶನಗರ, ಟ್ರಸ್ಟ್‌ನ ಸಿಬ್ಬಂದಿ ಲಿಂಗಪ್ಪ ಕೊಡಿಪ್ಪಾಡಿ, ರಚನಾ ರೈ ಕೆದಂಬಾಡಿ ಸಹಕರಿಸಿದರು.

ಶಿಬಿರದಲ್ಲಿ ಸುಮಾರು 500 ಮಂದಿ ಆಕಾಂಕ್ಷಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here