![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ದಿನನಿತ್ಯ ನೂರಾರು ಜನರು ಓಡಾಟ ನಡೆಸುತ್ತಿರುವ ಪುಟ್ಪಾತ್ನಲ್ಲೇ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ನೆಲ್ಯಾಡಿ ಪೇಟೆಯ ಸರ್ವಿಸ್ ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಿಸಲಾಗಿದ್ದು, ಚರಂಡಿ ಮಧ್ಯದಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿದೆ. ಸ್ಥಳೀಯಾಡಳಿತ ಇಲ್ಲವೇ ಸಾರ್ವಜನಿಕರಲ್ಲಿ ಚರ್ಚಿಸದೆ ಏಕಾಏಕಿ ಇಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರು, ಶಾಲಾ ಮಕ್ಕಳು ನಡೆದಾಡುವ ಸ್ಥಳ ಇದಾಗಿದೆ. ಮಳೆಗಾಲದಲ್ಲಿ ವಿದ್ಯುತ್ ಅವಘಡಗಳು ಹೆಚ್ಚಾಗಿರುವುದುರಿಂದ ಕೂಡಲೇ ಪರಿವರ್ತಕವನ್ನು ಸ್ಥಳಾಂತರಿಸಬೇಕೆಂಬ ಆಗ್ರಹ ಜನರಿಂದ ಕೇಳಿಬಂದಿದೆ.
ಬದಲಿಸಲು ಸಿದ್ಧ:
ಹೆದ್ದಾರಿ ಕಾಮಗಾರಿ ನಡೆಯುವ ಸಂದರ್ಭ ಎಚ್.ಟಿ. ಲೈನ್ ಸ್ಥಳಾಂತರ ಮಾಡುವ ಅನಿವಾರ್ಯತೆ ಇತ್ತು. ಹೆದ್ದಾರಿ ಪ್ರಾಧಿಕಾರದವರು ಸೂಚಿಸಿದ ಜಾಗದಲ್ಲಿ ಪರಿವರ್ತಕ ಅಳವಡಿಸಲಾಗಿದೆ. ಪರಿವರ್ತಕ ಅಳವಡಿಸಿದ ಜಾಗ ಪಾದಾಚಾರಿಗಳು ಸಂಚರಿಸುವ ಜಾಗವೆಂಬ ಮಾಹಿತಿಯನ್ನು ನೀಡದೇ ಇರುವುದು ಇದಕ್ಕೆ ಕಾರಣ. ಒಂದು ವೇಳೆ ಪರಿವರ್ತಕವಿರುವ ಜಾಗ ಪಾದಾಚಾರಿಗಳು ಸಂಚರಿಸುವ ಮಾರ್ಗವಾಗಿದ್ದಲ್ಲಿ ಹೆದ್ದಾರಿ ಪ್ರಾಧಿಕಾರದವರು ಬದಲಿ ಜಾಗ ಸೂಚಿಸಿದರೆ ಸ್ಥಳಾಂತರ ಮಾಡಬಹುದು. ಪರಿಸ್ಥಿತಿಯ ಗಂಭೀರತೆ ಅರಿತು ಟಿ.ಸಿ. ಹಾಕಿದ ಜಾಗದಲ್ಲಿ ಬೇಲಿ ನಿರ್ಮಿಸುವಂತೆ ಹೆದ್ದಾರಿ ಇಲಾಖೆಯವರಿಗೆ ತಿಳಿಸಲಾಗುವುದು ಎಂದು ಮೆಸ್ಕಾಂ ನೆಲ್ಯಾಡಿ ಶಾಖೆಯ ಕಿರಿಯ ಸಹಾಯಕ ಅಭಿಯಂತರರಾದ ರಮೇಶ್ ತಿಳಿಸಿದ್ದಾರೆ.